ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆಯುವ ತೀರ್ಮಾನ: ಸರ್ಕಾರದ ವಿರುದ್ಧ ತೊಡೆತಟ್ಟಿದ ಯುವ ವಕೀಲರು
ಯುವ ವಕೀಲರ ತಂಡವು ಹಳೇ ಹುಬ್ಬಳ್ಳಿ ಪ್ರಕರಣವನ್ನು ಹಿಂಪಡೆದಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಫೆಬ್ರವರಿ 16 ರಂದು ಸಲ್ಲಿಸಲಾದ ಈ ಅರ್ಜಿಯ ಕುರಿತು ಕಾರಣ ಕೇಳಿ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಮಾರ್ಚ್ 17 ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.

ಹುಬ್ಬಳ್ಳಿ, ಮಾರ್ಚ್ 06: ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರ ಇತ್ತೀಚೆಗೆ ಹಳೇ ಹುಬ್ಬಳ್ಳಿ ಕೇಸ್ (Hubli riots case) ಹಿಂಪಡೆದಿತ್ತು. ಇದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಈ ವಿಚಾರ ಸಾಕಷ್ಟು ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಈ ಮಧ್ಯೆ ಹಳೇ ಹುಬ್ಬಳ್ಳಿ ಕೇಸ್ ಹಿಂಪಡೆಯುವ ತೀರ್ಮಾನ ಪ್ರಶ್ನಿಸಿ ಯುವ ವಕೀಲರ ತಂಡ ಹೈಕೋರ್ಟ್ನಲ್ಲಿ (High Court) ರೀಟ್ ಅರ್ಜಿ ಸಲ್ಲಿಸಿದೆ. ಆ ಮೂಲಕ ಸರ್ಕಾರದ ವಿರುದ್ಧ ತೊಡೆತಟ್ಟಿದ್ದಾರೆ. ಈ ಕುರಿತು ಕಾರಣ ಕೇಳಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.
ಗೀರಿಶ್ ಭಾರದ್ವಾಜ್ ಮತ್ತು ಶ್ರೀಧರ್ ಎನ್ನುವವರಿಂದ ಫೆ 16 ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ವೆಂಕಟೇಶ ದಳವಾಯಿ ಸರ್ಕಾರದ ವಿರುದ್ಧ ಹೈಕೋರ್ಟ್ನಲ್ಲಿ ವಾದ ಮಂಡಿಸಲಿದ್ದಾರೆ. ಹೈಕೋರ್ಟ್ನಲ್ಲಿ ಮಾರ್ಚ್ 17 ರಂದು ರೀಟ್ ಅರ್ಜಿ ವಿಚಾರಣೆ ನಡೆಸಲಿದೆ. ಹುಬ್ಬಳ್ಳಿ ಸಂಜೀವ್ ಬಡಾಸ್ಕರ ಮತ್ತು ಅಶೋಕ್ ಅಣ್ವೇಕರ್ ತಂಡದಿಂದ ಬೆಂಗಳೂರು ವಕೀಲರಿಗೆ ಸಾಥ್ ನೀಡಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ಕಾಂಗ್ರೆಸ್ ಸರ್ಕಾರ; ಕಿಡಿಕಾರಿದ ಬಿಜೆಪಿ ನಾಯಕರು
ಒಂದು ವಾಟ್ಸಪ್ ಸ್ಟೇಟಸ್ನಿಂದ ಹೊತ್ತುಕೊಂಡಿದ್ದ ಬೆಂಕಿ ಅಂದು ರಾತ್ರಿ ದೊಡ್ಡ ಪ್ರಮಾಣದಲ್ಲಿ ಗಲಭೆಗೆ ಕಾರಣವಾಗಿತ್ತು. ಗಲಭೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದು, ಪೊಲೀಸ್ ಠಾಣೆ ಮೇಲೆ ಗಲಭೆಕೋರರು ಕಲ್ಲು ಎಸೆದಿದ್ದರು. ಈ ಗಲಭೆ ಇಡೀ ದೇಶದ್ಯಾಂತ ಚರ್ಚೆಗೂ ಗ್ರಾಸವಾಗಿತ್ತು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ಸು ಪಡೆಯುವ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಈ ಗಲಭೆಯಲ್ಲಿ ಭಾಗಿಯಾದ ಬರೋಬ್ಬರಿ 150 ಕ್ಕೂ ಹೆಚ್ಚು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಆದರೆ ಇತ್ತೀಚೆಗೆ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಹಳೇ ಹುಬ್ಬಳ್ಳಿ ಗಲಭೇ ಸೇರಿ ಕೆಲ ಕೇಸ್ಗಳನ್ನು ವಾಪಸ್ ಪಡೆಯಲು ನಿರ್ಧಾರ ಮಾಡಿತ್ತು. ಸರ್ಕಾರದ ಈ ನಿರ್ಧಾರದ ವಿರುದ್ದ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಉರಿದುಬಿದಿದ್ದರು. ಹೋರಾಟಕ್ಕೂ ಕರೆ ನೀಡಿದ್ದರು.
ರಾಜ್ಯಪಾಲರಿಗೆ ಬಿಜೆಪಿ ದೂರು
ಇನ್ನು ರಾಜ್ಯ ಸರ್ಕಾರ ಹಳೇ ಹುಬ್ಬಳ್ಳಿ ಪ್ರಕರಣ ಹಿಂಪಡೆದ ಸರ್ಕಾರದ ನಿರ್ಧಾರ ಖಂಡಿಸಿ ರಾಜ್ಯಪಾಲರಿಗೆ ಬಿಜೆಪಿ ದೂರು ಕೂಡ ಸಲ್ಲಿಸಿತ್ತು. ವಿಪಕ್ಷ ನಾಯಕ ಅಶೋಕ್, ಶಾಸಕ ಡಾ.ಅಶ್ವತ್ಥ್ ನಾರಾಯಣ, ಎಂಎಲ್ಸಿ ರವಿಕುಮಾರ್ ಸೇರಿ ಹಲವು ನಾಯಕರಿದ್ದ ನಿಯೋಗ ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು. ಆ ಮೂಲಕ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:23 pm, Thu, 6 March 25