ಹುಬ್ಬಳ್ಳಿಗೆ ಬಾಂಗ್ಲಾ ನುಸುಳುಕೋರರ ಲಗ್ಗೆ? ರೈಲ್ವೆ ಪೊಲೀಸರ ವಿರುದ್ಧ ಭುಗಿಲೆದ್ದ ಆಕ್ರೋಶ
ಹುಬ್ಬಳ್ಳಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಆತಂಕ ಜೋರಾಗಿದೆ. ಅಕ್ರಮ ಬಾಂಗ್ಲಾ ನುಸುಳುಕೋರರು ಸುರಕ್ಷಿತ ಸ್ಥಳ ಅರಸಿ ಹುಬ್ಬಳ್ಳಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಹಿಂದೂಪರ ಸಂಘಟನೆಗಳು ಇಂದು ನಗರದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿವೆ.

ಹುಬ್ಬಳ್ಳಿ, ಮೇ 18: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಲ್ಲಿದಿದ್ದು ಅಕ್ರಮ ಬಾಂಗ್ಲಾ ವಲಸಿಗರ (Illegal Bangladeshi migrants) ವಿಚಾರ. ಇದೀಗ ಚುನಾವಣೆ ನಂತರ ಬಾಂಗ್ಲಾ ವಲಿಸಿಗರು ಸುರಕ್ಷಿತ ಸ್ಥಳಗಳಾದ ಹುಬ್ಬಳ್ಳಿ (Hubballi) ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರಂತೆ. ಹೀಗಾಗಿ ಅಕ್ರಮ ಬಾಂಗ್ಲಾ ವಲಸಿಗರು ಇತ್ತ ಬಾರದಂತೆ ನೋಡಬೇಕು ಎನ್ನುವ ಆಗ್ರಹ ಇದೀಗ ಜೋರಾಗುತ್ತಿದೆ.
ಮುಖ್ಯಾಂಶಗಳು
- ಹುಬ್ಬಳ್ಳಿಯತ್ತ ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಿರುವ ಆರೋಪ
- ಶ್ರೀರಾಮಸೇನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
- ಸಮಗ್ರ ತನಿಖೆಗೆ ಹಿಂದೂಪರ ಸಂಘಟನೆಗಳು ಆಗ್ರಹ
ಶ್ರೀರಾಮಸೇನೆ ಪ್ರತಿಭಟನೆ
ಅಕ್ರಮ ಬಾಂಗ್ಲಾ ವಲಸಿಗರು ನಗರಕ್ಕೆ ಬಾರದಂತೆ ತಡೆಯಬೇಕು ಎಂದು ಆಗ್ರಹಿಸಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ರೈಲ್ವೇ ನಿಲ್ದಾಣದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇತ್ತೀಚೆಗೆ ಪಶ್ಚಿಮ ಬಂಗಾಳದಿಂದ ಬಂದಿದ್ದ ಕೆಲ ಶಂಕಿತರನ್ನು ರೈಲ್ವೆ ಪೊಲೀಸರು ಕೇವಲ ಆಧಾರ್ ಕಾರ್ಡ್ ಪರಿಶೀಲಿಸಿ ಬಿಟ್ಟು ಕಳುಹಿಸಿದ್ದರು. ಅವರು ಬಾಗಲಕೋಟೆಗೆ ಕೂಲಿ ಕೆಲಸಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಆದರೆ, ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಟಿಸಿ ವಲಸಿಗರು ಬರುತ್ತಿರುವ ಸಾಧ್ಯತೆ ಇರುವುದರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಗಾ ಡಿಪೋರ್ಟೇಷನ್ ಆಪರೇಷನ್: ಬರೋಬ್ಬರಿ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಲ್ಲಿದ್ದು ಅಕ್ರಮ ಬಾಂಗ್ಲಾ ವಲಸಿಗರ ವಿಚಾರ. ಎಸ್ಐಆರ್ ನಂತರ ಸರಿಸುಮಾರು 91 ಲಕ್ಷ ಮತದಾರರನ್ನು ಕೈಬಿಡಲಾಗಿತ್ತು. ಅದರಲ್ಲಿ ಹೆಚ್ಚಿನವರು ಅಕ್ರಮ ಬಾಂಗ್ಲಾ ನುಸುಳುಕೋರರೇ ಇದ್ದಾರೆ ಅಂತ ಹೇಳಲಾಗಿತ್ತು. ಈ ವಿಚಾರ ಚುನಾವಣೆಯಲ್ಲಿ ಜೋರಾಗಿ ಚರ್ಚೆ ಆಗಿತ್ತು. ಇನ್ನು ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲುತ್ತಿದ್ದಂತೆ, ಅಕ್ರಮ ಬಾಂಗ್ಲಾ ವಲಿಸಿಗರು ಇದೀಗ ಸುರಕ್ಷಿತ ಸ್ಥಳಕ್ಕಾಗಿ ದಕ್ಷಿಣ ಭಾರತದ ನಗರಗಳತ್ತ ಮುಖ ಮಾಡುತ್ತಿದ್ದಾರೆ ಎನ್ನುವ ಆರೋಪ ಹೆಚ್ಚಾಗಿ ಕೇಳಿ ಬರುತ್ತಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಗೆ 10ಕ್ಕೂ ಹೆಚ್ಚು ಜನ ಬಾಂಗ್ಲಾದೇಶಿಯರು ಬಂದಿರುವ ಅನುಮಾನ ವ್ಯಕ್ತವಾಗಿತ್ತು. ಅವರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ತಪಾಸಣೆ ನಡೆಸಿದಾಗ, ಅವರು ಪಶ್ಚಿಮ ಬಂಗಾಳದಿಂದ ಬಂದಿದ್ದು, ಕೂಲಿ ಕೆಲಸಕ್ಕೆ ಬಾಗಲಕೋಟೆಗೆ ಹೋಗುತ್ತಿರುವುದಾಗಿ ಹೇಳಿದ್ದರಂತೆ. ಅವರು ಆಧಾರ ಕಾರ್ಡ್ ತೋರಿಸಿದ್ದರಿಂದ ಅವರನ್ನು ರೈಲ್ವೆ ಪೊಲೀಸರು ಬಿಟ್ಟು ಕಳುಹಿಸಿದ್ದರು. ಆದರೆ ಇದು ಶ್ರೀರಾಮಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಆಧಾರ ಕಾರ್ಡ್ ನೋಡಿ ಬಿಟ್ಟು ಕಳುಹಿಸಿದರೆ ಸಾಲದು, ಏಕೆಂದರೆ ನಕಲಿ ಆಧಾರ ಕಾರ್ಡ್ ಮಾಡಿಸಿಕೊಂಡು ಅನೇಕರು ಬರುತ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳದಿಂದ ಯಾರೆಲ್ಲಾ ಹುಬ್ಬಳ್ಳಿಗೆ ಬರುತ್ತಾರೆ ಅವರನ್ನು ಸಮಗ್ರ ತನಿಖೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕಾಟಾಚಾರದ ತಪಾಸಣೆ?
ಇನ್ನು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪಶ್ಚಿಮ ಬಂಗಾಳದಿಂದ ಹುಬ್ಬಳ್ಳಿಗೆ ಆಗಮಿಸಿದ ಶಾಲಿಮಾರ ಎಕ್ಸಪ್ರೆಸ್ ರೈಲಿನಲ್ಲಿ ಬಂದ ಅನೇಕ ಪ್ರಯಾಣಿಕರನ್ನು ತಪಾಸಣೆ ಮಾಡುವ ಕೆಲಸಕ್ಕೆ ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಪೊಲೀಸರು ಮುಂದಾದ್ದರು. ಆದರೆ ಅದು ಕಾಟಾಚಾರಕ್ಕೆ ಎನ್ನುವಂತಾಗಿತ್ತು. ನೂರಾರು ಪ್ರಯಾಣಿಕರು ಬಂದಿದ್ದರಿಂದ ಪೊಲೀಸರು ಯಾರನ್ನು ಕೂಡ ಸರಿಯಾಗಿ ತಪಾಸಣೆ ಮಾಡಲು ಸಾಧ್ಯವಾಗಲಿಲ್ಲ. ಹಿಂದೂಪರ ಸಂಘಟನೆಗಳ ಆರೋಪಗಳ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಮಾಹಿತಿ ನೀಡದೇ ಇದ್ದರು ಕೂಡ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರ ಸೂಚನೆ ಮೇರೆಗೆ ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಿಂದ ಬರೋ ರೈಲುಗಳಲ್ಲೇ ಬರ್ತಾರಾ ಬಾಂಗ್ಲಾ ಅಕ್ರಮ ವಲಸಿಗರು? ಬೆಂಗಳೂರಿನ ಭದ್ರತೆಗೆ ಭಾರಿ ಆತಂಕ
ಸದ್ಯ ಅಕ್ರಮ ಬಾಂಗ್ಲಾ ವಲಸಿಗರು ಹುಬ್ಬಳ್ಳಿ ಸೇರಿದಂತೆ ಅನೇಕ ನಗರಗಳಿಗೆ ಬರುತ್ತಿರುವ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸಬೇಕಿದೆ. ರೈಲ್ವೆ ಪೊಲೀಸರು ಜೊತೆಗೆ ಸ್ಥಳೀಯ ಪೊಲೀಸರು ಕೂಡ ಪಶ್ಟಿಮ ಬಂಗಾಳದಿಂದ ಬಂದಿರುವವರ ಮೇಲೆ ಹೆಚ್ಚಿನ ನಿಗಾವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:09 pm, Mon, 18 May 26
