ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್: ಷರತ್ತು ಅನ್ವಯ
ರಾಜ್ಯದ ಖಾಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಹಿಂದಿನ ಪ್ರತಿಭಟನೆಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದರಿಂದ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೆ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದ ಮನವಿಯನ್ನು ಪುರಸ್ಕರಿಸಿದ ಕೋರ್ಟ್, 100 ಜನರಿಗೆ ಮಾತ್ರ ಹೋರಾಟಕ್ಕೆ ಅನುಮತಿ ನೀಡಿದೆ. ಕಾನೂನು ಸುವ್ಯವಸ್ಥೆ ಪಾಲನೆ ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಿದೆ.

ಧಾರವಾಡ, ಏಪ್ರಿಲ್ 10: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠ ಕೆಲ ಷರತ್ತುಗಳನ್ನು ವಿಧಿಸಿ ಗ್ರೀನ್ ಸಿಗ್ನಲ್ ನೀಡಿದೆ. ಏಪ್ರಿಲ್ 08ರಂದು ಡಿಸಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ ಮುಂದಾಗಿತ್ತು. ಆದರೆ ವಿದ್ಯಾರ್ಥಿಗಳ ಸಂಘದಿಂದ ಕರೆ ನೀಡಲಾಗಿರುವ ಹೋರಾಟಕ್ಕೆ ಧಾರವಾಡ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಹಿನ್ನೆಲೆ ಕೋರ್ಟ್ ಮೊರೆ ಹೋಗಲಾಗಿತ್ತು. ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ನ್ಯಾ.ಅಶೋಕ ಕಿನಗಿ ಅವರಿದ್ದ ಏಕ ಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.
ನ್ಯಾಯಾಲಯದ ಷರತ್ತುಗಳೇನು?
- ನೆಹರು ಮೈದಾನದಲ್ಲಿ 100 ಜನರಿಗೆ ನಾತ್ರ ಪ್ರತಿಭಟನೆಗೆ ಅವಕಾಶ
- ಪ್ರತಿಭಟನೆ ಮಾಡುವವರ ಕುರಿತ ಮಾಹಿತಿಯನ್ನು ಇಲಾಖೆಗೆ ನೀಡಬೇಕು
- ಪ್ರತಿಭಟನೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವಂತವರು ಇರಬಾರದು
- ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಪ್ರತಿಭಟಿಸಬೇಕು
- ಅರ್ಜಿಯೊಂದಿಗೆ ನೀಡಿದ ಪಟ್ಟಿಯಲ್ಲಿರುವವರು ಮಾತ್ರ ಭಾಗವಹಿಸಬೇಕು
- ಲಿಸ್ಟ್ನಲ್ಲಿ ಇಲ್ಲದವರು ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ
ಇದನ್ನೂ ಓದಿ: ಉದ್ಯೋಗಾಕಾಕ್ಷಿಗಳಿಂದ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ
ಇನ್ನು ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಈ ಹಿಂದೆ ಕೆಲ ಅಹಿತಕರ ಘಟನೆಗಳು ನಡೆದಿರುವ ಕಾರಣ ಪ್ರತಿಭಟನೆಗೆ ನಾವು ಅನುಮತಿ ನೀಡಿರಲಿಲ್ಲ. ಆದರೆ ಸಂಘಟನೆಯವರು ಕೋರ್ಟ್ ಮೊರೆ ಹೋಗಿದ್ದು, ಈ ಸಂಬಂಧ ನಮಗೆ ಉತ್ತರಿಸಲು ಹೈಕೋರ್ಟ್ ಎರಡು ದಿನಗಳ ಕಾಲಾವಕಾಶ ನೀಡಿತ್ತು. ಅದರಂತೆ ನಾವು ವಿವರವಾದ ಮಾಹಿತಿಯನ್ನು ನೀಡಿದ್ದೆವು. ಅದರಂತೆ ಕೆಲ ಷರತ್ತುಗಳ ಜೊತೆ ಸಂಘಟನೆಗೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶವನ್ನು ಕೋರ್ಟ್ ನೀಡಿದೆ ಹಿಂದಿನ 2 ಪ್ರತಿಭಟನೆಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಕಳೆದ ಬಾರಿ ನಡೆದ ಪ್ರತಿಭಟನೆಯಲ್ಲಿ 17 ಸಿಬ್ಬಂದಿಗೆ ಪೆಟ್ಟುಗಳಾಗಿದ್ದು, ಆ ಕುರಿತು 6 ಪ್ರಕರಣಗಲು ದಾಖಲಾಗಿದ್ದವು ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




