ಹೆಣದ ಮೇಲೂ ಹಣ: ಪೆದ್ದರಂತೆ ಫೋನ್​ಪೇನಲ್ಲೇ ಲಂಚ ಪಡೆದು ಸಿಕ್ಕಿಬಿದ್ದ ಮೂವರು ಸಿಬ್ಬಂದಿ ವಜಾ

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಮೂವರು ಹೊರಗುತ್ತಿಗೆ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ‘ಟಿವಿ9’ ವರದಿ ಪ್ರಸಾರವಾದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ತನಿಖೆಗೆ ಆದೇಶಿಸಿತ್ತು. ಫೋನ್‌ಪೇ ಮೂಲಕ ಲಂಚ ಪಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹೆಣದ ಮೇಲೂ ಹಣ: ಪೆದ್ದರಂತೆ ಫೋನ್​ಪೇನಲ್ಲೇ ಲಂಚ ಪಡೆದು ಸಿಕ್ಕಿಬಿದ್ದ ಮೂವರು ಸಿಬ್ಬಂದಿ ವಜಾ
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
Image Credit source: tv9
Edited By:

Updated on: Feb 12, 2026 | 2:30 PM

ಹುಬ್ಬಳ್ಳಿ, ಫೆಬ್ರವರಿ 12: ಉತ್ತರ ಕರ್ನಾಟಕದ ಬಡವರ ಸಂಜೀವನಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಕಿಮ್ಸ್ (KIMS Hospital) ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರ ಕುಟುಂಬದವರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ಮೂವರು ಸಿಬ್ಬಂದಿಯ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗಿದೆ. ‘ಟಿವಿ9’ ವರದಿ ಮಾಡಿದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಹಣ ಪಡೆದ ಮೂವರು ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಾಗಿದ್ದರೂ, ಕೆಲ ಸ್ವಚ್ಛತಾ ಹಾಗೂ ಡಿ-ಗ್ರೂಪ್ ಸಿಬ್ಬಂದಿ ರೋಗಿಗಳು ಮತ್ತು ಕುಟುಂಬದವರಿಂದ ಪ್ರತಿ ಕೆಲಸಕ್ಕೂ ಹಣ ಕೇಳುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ರೋಗಿಯನ್ನು ಸ್ಟ್ರೆಚರ್‌ನಲ್ಲಿ ಕರೆದೊಯ್ಯುವುದು, ವಾರ್ಡ್ ಬದಲಾವಣೆ ಮಾಡುವುದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರ ಶವವನ್ನು ಸಾಗಾಟ ಮಾಡುವುದು ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಹಣ ವಸೂಲಿ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿತ್ತು.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಶಾಳ ಅಡವಿಬಾವಿ ಗ್ರಾಮದ 52 ವರ್ಷದ ಗದ್ದೆಮ್ಮ ಎಂಬ ಮಹಿಳೆ ಪಿತ್ತಕೋಶದ ಸಮಸ್ಯೆಯಿಂದ ಜನವರಿ 31ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಶನಿವಾರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ನಸುಕಿನ ಜಾವ ಮೃತಪಟ್ಟಿದ್ದರು.

ಮೃತದೇಹ ಪ್ಯಾಕ್ ಮಾಡಿ ವಾಹನಕ್ಕೆ ಸಾಗಿಸಲು ಲಂಚ ಪಡೆದಿದ್ದ ಸಿಬ್ಬಂದಿ

ಮೃತದೇಹವನ್ನು ಪ್ಯಾಕ್ ಮಾಡಿ ವಾಹನಕ್ಕೆ ಸಾಗಿಸಲು ಡಿ-ಗ್ರೂಪ್ ಸಿಬ್ಬಂದಿ 500 ರೂ. ಹಣ ಕೇಳಿದರೆಂದು ಕುಟುಂಬದವರು ಆರೋಪಿಸಿದ್ದರು. ಹಣ ಇಲ್ಲವೆಂದು ಹೇಳಿದರೂ ಬಿಡದೇ ಪೀಡಿಸಿ, ಕೊನೆಗೆ 200 ರೂ. ಫೋನ್‌ಪೇ ಮೂಲಕ ಪಡೆದಿದ್ದರು. ನಂತರ ಶವವನ್ನು ವಾಹನಕ್ಕೆ ಹಾಕಿದ ಮೇಲೂ ಮತ್ತೆ ಹಣಕ್ಕಾಗಿ ಒತ್ತಾಯಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ‘ಟಿವಿ9’ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಕಿಮ್ಸ್ ನಿರ್ದೇಶಕರಿಗೆ ಕರೆ ಮಾಡಿ ವರದಿ ಕೇಳಿದ್ದರು. ಕಿಮ್ಸ್ ಆಡಳಿತ ಎಚ್ಚೆತ್ತುಕೊಂಡು ತನಿಖಾ ತಂಡವನ್ನು ರಚಿಸಿತು.

ಫೊನ್ ಪೇ ಮೂಲಕ ಲಂಚ ಪಡೆದು ಸಿಕ್ಕಾಕೊಂಡ್ರು!

ಹಣ ವಸೂಲಿ ಮಾಡಿದವರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಅವರನ್ನು ವಿಚಾರಣೆ ನಡೆಸಿದಾಗ, ಮೂವರು ಸಿಬ್ಬಂದಿ ಹಣ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಫೋನ್‌ಪೇ ಮೂಲಕ ಹಣ ಪಡೆದಿರುವ ಸಾಕ್ಷಿಗಳೂ ದೊರೆತ ಹಿನ್ನೆಲೆ ಮೂವರನ್ನು ತಕ್ಷಣವೇ ಕಿಮ್ಸ್ ಸೇವೆಯಿಂದ ವಜಾ ಮಾಡಲಾಗಿದೆ.

ಏಜೆನ್ಸಿಗಳಿಗೂ ಖಡಕ್ ಸೂಚನೆ

ಕಾರ್ಮಿಕರನ್ನು ಪೂರೈಕೆ ಮಾಡುವ ಏಜೆನ್ಸಿಗಳಿಗೆ ಸಹ ಕಠಿಣ ಸೂಚನೆ ನೀಡಲಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ. ಈ ಕುರಿತು ‘ಟಿವಿ9’ ಜೊತೆ ಮಾತನಾಡಿದ ಕಿಮ್ಸ್ ನಿರ್ದೇಶಕ ಡಾ. ಈಶ್ವರ್ ಹೊಸಮನಿ, ‘ಕಿಮ್ಸ್‌ನಲ್ಲಿ ರೋಗಿಗಳು ಮತ್ತು ಅವರ ಕುಟುಂಬದವರಿಂದ ಹಣ ವಸೂಲಿ ಮಾಡುವುದನ್ನು ಯಾವ ಕಾರಣಕ್ಕೂ ಸಹಿಸಲಾಗುವುದಿಲ್ಲ. ಇಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್​​ನಲ್ಲಿ ಹೆಣದ ಮೇಲೂ ಹಣ ಮಾಡ್ತಿರೋ ಸಿಬ್ಬಂದಿ!: ವ್ಯಾಪಕ ಆಕ್ರೋಶ

ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಬರುವ ಕಿಮ್ಸ್ ಆಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಪ್ರತಿಷ್ಠೆಗೆ ಕಪ್ಪು ಮಸಿ ಬಳಿಯುವಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ