
ಬೆಂಗಳೂರು, ಅಕ್ಟೋಬರ್ 16: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜೀವನಪಯಣದ ಕುರಿತು ಹೊರಬಂದಿರುವ ಪುಸ್ತಕ ಡೈರೆಕ್ಟರ್ ಕೆಎಂ ರಘು ರಚಿಸಿರುವ ‘‘ಎ ಸಿಂಬಲ್ ಆಫ್ ಲಾಯಲ್ಟಿ ಡಿಕೆಶಿವಕುಮಾರ್’’ ಪುಸ್ತಕ ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ಲೋಕಾರ್ಪಣೆಯಾಗಿದೆ. ಈ ಪುಸ್ತಕದ ಮೂಲಕ ಡಿಕೆ ಶಿವಕುಮಾರ್ ಹಲವು ಸ್ಫೋಟಕ ವಿಚಾರಗಳನ್ನು ಬಿಚ್ಟಿಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಹಿಂದೊಮ್ಮೆ ಬಿಜೆಪಿಯ ಬಾಗಿಲು ತಟ್ಟಿದ್ದರು ಎನ್ನುವುದು ಬಿಜೆಪಿಗರ ಮಾತು ಹಾಗೂ ಆರೋಪ. ಕೆಲ ದಿನಗಳ ಹಿಂದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ಬಗ್ಗೆ ಹೇಳಿದ್ದರು. ಡಿಕೆ ಶಿವಕುಮಾರ್ಗೆ ಶಾಸಕರ ಬೆಂಬಲ ಇದ್ದಿದ್ದರೆ ಬಿಜೆಪಿಗೆ ಸ್ವಾಗತ ಮಾಡಲಾಗುತ್ತಿತ್ತು ಎಂದಿದ್ದರು. ಇಂಥದ್ದೊಂದು ಪ್ರಯತ್ನ ಈಗಿನದ್ದಲ್ಲ. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೇ ಡಿಕೆಶಿಯವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಗಳಾಗಿತ್ತು ಎಂಬುದು ಈಗ ಗೊತ್ತಾಗಿದೆ. ಇದನ್ನು ಖುದ್ದು ಡಿಕೆ ಶಿವಕುಮಾರ್ ಅವರೇ ಈಗ ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನ ಮೂವರು ಕಾಂಗ್ರೆಸ್ ಶಾಸಕರು ಸೇರಿ ಹಲವು ಮಂದಿ ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಬಿಜೆಪಿ ಕಡೆ ಮುಖ ಮಾಡಿದ್ದರು. ಅವತ್ತು ಕನಕಪುರದಲ್ಲಿದ್ದ ನಾನು ಓಡೋಡಿ ಬಂದು ನಮ್ಮ 5-6 ಶಾಸಕರನ್ನು ಕ್ವಾರ್ಟರ್ಸ್ಗೆ ಕರೆದುಕೊಂಡು ಬಂದಿದ್ದೆ. ಆಗ ದೆಹಲಿಯಿಂದ ನನಗೆ ಫೋನ್ ಬಂದಿತ್ತು. ಇನ್ಕಮ್ ಟ್ಯಾಕ್ಸ್ ಆಡಿಟರ್ರಿಂದ ಫೋನ್ ಮಾಡಿ ಮಾತನಾಡಿಸಿದ್ದರು. ಅಲ್ಲಿ ಒಬ್ಬ ಡಿಜಿ ಸಹ ಇದ್ದ. ಅವನು ಮಾತನಾಡಿದ. ಡಿಸಿಎಂ ಆಗುತ್ತೀರಾ? ಅಥವಾ ಜೈಲಿಗೆ ಹೋಗುತ್ತೀರಾ? ಎರಡರಲ್ಲಿ ಒಂದು ಆಯ್ಕೆ ಮಾಡಬೇಕು ಎಂದ. ಜೊತೆಗಿದ್ದ ಶಾಸಕರನ್ನು ವಾಪಸ್ ಕಳುಹಿಸಲು ಹೇಳಿದರು. ಆದರೆ ನಾನು ಪಕ್ಷನಿಷ್ಠೆಗಾಗಿ ಡಿಸಿಎಂ ಬೇಡ ಎಂದು ಜೈಲುವಾಸವನ್ನೇ ಆಯ್ಕೆಮಾಡ್ಕೊಂಡೆ. ನಾನು ಮನಸ್ಸು ಮಾಡಿದ್ದರೆ ಅಂದೇ ಡಿಸಿಎಂ ಆಗಬಹುದಿತ್ತು ಎಂದು ಡಿಕೆ ಶಿವಕುಮಾರ್ ರಹಸ್ಯ ಬಿಚ್ಚಿಟ್ಟಿದ್ದಾರೆ.
ರಾಜಕೀಯದಲ್ಲಿ ಯಾವುದೂ ನಿಂತ ನೀರಲ್ಲ ಎಂದ ಡಿಕೆ ಶಿವಕುಮಾರ್, A Symbol Of Loyalty ಪುಸ್ತಕದಲ್ಲಿ ನನ್ನ ಬದುಕಿನ ಶೇ 99 ರಷ್ಟು ಅಂಶಗಳು ಸತ್ಯ ಇವೆ ಎಂದು ತಿಳಿಸಿದ್ದಾರೆ. ನಾನು ಮುಂದಿನ 8-10 ವರ್ಷ ರಾಜಕಾರಣ ಮಾಡಬಹುದು. ಹೊಸಬರಿಗೆ ಅವಕಾಶಗಳು ಸಿಗಬೇಕು ಎಂದರು.
ನಾನು ಹೆಚ್ಡಿ ದೇವೇಗೌಡರ ಕುಟುಂಬದ ವಿರುದ್ಧವಾಗಿ ರಾಜಕಾರಣ ಮಾಡಿದ್ದೇನೆ. ಆದರೆ ಪಕ್ಷದ ನಿಷ್ಠೆಗಾಗಿ ನಾನು ಹೆಚ್ಡಿ ಕುಮಾರಸ್ವಾಮಿ ಜೊತೆಗೆ ಕೈಜೋಡಿಸಿದ್ದೇನೆ. ನನ್ನ ವಿರೋಧಿಗಳು ಕಥೆ ಕಟ್ಟಿ ಆರೋಪ ಮಾಡುತ್ತಾರೆ. ಆದರೆ ನಾನು ಅದನ್ನೂ ಸ್ವಾಗತಿಸ್ತೇನೆ ಎಂದರು.
ವಿಧಾನಸಭೆಯಲ್ಲಿ ಆರ್ಎಸ್ಎಸ್ ಹಾಡು ಹೇಳಿದ್ದನ್ನು ವಿವಾದ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, RSS ಬಗ್ಗೆ ನಾನು ಸದನದಲ್ಲಿ ಮಾತನಾಡಿದ್ದಕ್ಕೆ ಕ್ಷಮಾಪಣೆ ಕೇಳು ಎಂದು ನನಗೆ ಯಾರೂ ಹೇಳಲಿಲ್ಲ. ನನ್ನ ಕಾರ್ಯಕರ್ತರಿಗೆ ನೋವು ಆಗಬಾರದು ಎಂದು ಕ್ಷಮೆ ಕೇಳಿದೆ. ‘‘ನೀರಿನ ಮೇಲಿನ ಹೆಜ್ಜೆ’’ ಎಂಬ ನನ್ನ ಜೀವನದ ಕುರಿತ ಮತ್ತೊಂದು ಪುಸ್ತಕ ನವೆಂಬರ್ 6ಕ್ಕೆ ಬಿಡುಗಡೆಯಾಗಲಿದೆ. ಸಿಎಂ ಸಿದ್ದರಾಮಯ್ಯ ಅವರೇ ಇದನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಒಬ್ಬರು ಧರ್ಮಾಧಿಕಾರಿ ಭಾಷಣದಿಂದ ಪ್ರಭಾವಿತನಾಗಿ ನಾನು ಸಂಸ್ಕೃತ ಕಲಿತಿದ್ದೇನೆ ಎಂದ ಡಿ.ಕೆ.ಶಿವಕುಮಾರ್, ಕಾರ್ಯಕ್ರಮದಲ್ಲೂ ಶ್ಲೋಕ ಪಠಿಸಿ ಸಭಿಕರಿಂದ ಚಪ್ಪಾಳೆಗಿಟ್ಟಿಸಿದರು.
ಇದನ್ನೂ ಓದಿ: ಡಿಸಿಎಂ ಆಗ್ತೀರಾ ಅಥವಾ ಜೈಲಿಗೆ ಹೋಗ್ತೀರಾ: ಡಿಕೆ ಶಿವಕುಮಾರ್ ಆಯ್ಕೆ ಮಾಡಿಕೊಂಡಿದ್ದೇನು ಗೊತ್ತಾ?
ಕಾಂಗ್ರೆಸ್ ಪಾಳಯದಲ್ಲಿ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ಡಿಕೆ ಶಿವಕುಮಾರ್ ಪಕ್ಷನಿಷ್ಠೆಯನ್ನ ಕಾಂಗ್ರೆಸ್ ಪ್ರತಿಯೊಬ್ಬ ಕಾರ್ಯಕರ್ತರು ಹಾಡಿಹೊಗಳುತ್ತಾರೆ. ಎಂಥದ್ದೇ ಸಂದರ್ಭ ಬಂದರೂ ಡಿಕೆ ಶಿವಕುಮಾರ್ ಪಕ್ಷಕ್ಕೆ ವಿರುದ್ಧವಾಗಿ ಹೋಗುವುದಿಲ್ಲ ಎಂಬುದನ್ನು ಅವರ ಆಪ್ತರು ಆಗಾಗ ನೆನಪಿಸುತ್ತಲೇ ಇರುತ್ತಾರೆ. ಇದೀಗ ಈ ಸಿಂಬಲ್ ಆಫ್ ಲಾಯಲ್ಟಿ ಎಂಬ ಪುಸ್ತಕ ಬಿಡುಗಡೆಯ ಸಂದರ್ಭದಲ್ಲೂ ಡಿಕೆ ಶಿವಕುಮಾರ್ ಅವರ ಬಾಯಿಂದಲೇ ಹಲವು ರಹಸ್ಯಗಳು ಬಯಲಾಗಿವೆ.
Published On - 6:56 am, Thu, 16 October 25