AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಸರ್ ಪ್ಲೀಸ್, ಸುಡುವ ಬಿಸಿಲಲ್ಲಿ ಕೆಲಸ ಕಷ್ಟ”: ಗದಗದಲ್ಲಿ ಕೆಲಸದ ಸಮಯ ಬದಲಾವಣೆಗೆ ಸರ್ಕಾರಿ ನೌಕರರ ಪಟ್ಟು!

ಗದಗ ಜಿಲ್ಲೆಯಲ್ಲಿ ತಾಪಮಾನ 38-40°C ಏರಿಕೆಯಾಗಿದ್ದು, ಬಿಸಿಲಿನ ಝಳಕ್ಕೆ ಸರ್ಕಾರಿ ನೌಕರರು ಹೈರಾಣಾಗಿದ್ದಾರೆ. ಬೇಸಿಗೆಯ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು, ಕೆಲಸದಲ್ಲಿ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಲಸದ ಅವಧಿಯನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1:30 ರವರೆಗೆ ಬದಲಾಯಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ನೌಕರರು ಗಡುವು ನೀಡಿದ್ದಾರೆ. ಉತ್ತರ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಈಗಾಗಲೇ ಸಮಯ ಬದಲಾವಣೆ ಮಾಡಲಾಗಿದೆ.

ಸರ್ ಪ್ಲೀಸ್, ಸುಡುವ ಬಿಸಿಲಲ್ಲಿ ಕೆಲಸ ಕಷ್ಟ: ಗದಗದಲ್ಲಿ ಕೆಲಸದ ಸಮಯ ಬದಲಾವಣೆಗೆ ಸರ್ಕಾರಿ ನೌಕರರ ಪಟ್ಟು!
ಗದಗದಲ್ಲಿ ಬಿಸಲು
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Apr 11, 2026 | 3:23 PM

Share

ಗದಗ, ಏ.11: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ಮಲೆನಾಡು, ಕರಾವಳಿ ಪ್ರದೇಶದಲ್ಲಿ ತಂಪು ಗಾಳಿ ಬಿಸುತ್ತಿದೆ. ಆದರೆ ಉತ್ತರ ಕರ್ನಾಟಕದಾದ್ಯಂತ ರಣ ಬಿಸಿಲು ಜನರನ್ನು ಹೈರಾಣಾಗಿಸುತ್ತಿದ್ದು, ಗದಗ ಜಿಲ್ಲೆಯಲ್ಲೂ ಸೂರ್ಯನ ಪ್ರತಾಪ ಮಿತಿಮೀರಿದೆ. ಜಿಲ್ಲೆಯಲ್ಲಿ ತಾಪಮಾನ 38 ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದ್ದು, ನೆತ್ತಿ ಸುಡುವ ಬಿಸಿಲಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಸರ್ಕಾರಿ ನೌಕರರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಕೆಲಸದ ಅವಧಿಯನ್ನು ಬದಲಾಯಿಸಬೇಕೆಂದು ನೌಕರರು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಗಡುವು ನೀಡಿದ್ದಾರೆ. ಬಿಸಿಲಿನಿಂದ ಆರೋಗ್ಯ ಹಾಗೂ ಸುಸ್ತು ಹೆಚ್ಚಾಗಿದೆ. ಸೆಕೆಗೆ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ. ಆ ಕಾರಣಕ್ಕೆ ಕೆಲಸ ಸಮಯದಲ್ಲಿ ಬದಲಾವಣೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಉತ್ತರ ಕರ್ನಾಟಕದ ಉಳಿದ 9 ಜಿಲ್ಲೆಗಳಲ್ಲಿ ಈಗಾಗಲೇ ಬಿಸಿಲಿನ ಕಾರಣದಿಂದ ಸರ್ಕಾರಿ ಕಚೇರಿಗಳ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ, ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಪಮಾನವಿದ್ದರೂ ಸಮಯ ಬದಲಾವಣೆ ಮಾಡದಿರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಸವರಾಜ್ ಬಳ್ಳಾರಿ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ನೌಕರರು ಜಿಲ್ಲಾಡಳಿತ ಭವನದ ಮುಂದೆ ಜಮಾಯಿಸಿ ತಮ್ಮ ಬೇಡಿಕೆಯನ್ನು ಮಂಡಿಸಿದರು.

ಇದನ್ನೂ ಓದಿ: ಒತ್ತಡಕ್ಕೆ ಬಲಿಯಾಯಿತೇ ಮರಿ?: ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆಯ ಮರಿಯೂ ಗರ್ಭದಲ್ಲೇ ಸಾವು!

ಬಿಸಿಲಿನ ತೀವ್ರತೆ ಹೆಚ್ಚಾಗುವ ಮುನ್ನವೇ ಕೆಲಸ ಮುಗಿಸಲು ಅನುಕೂಲವಾಗುವಂತೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಕೆಲಸದ ಸಮಯವನ್ನು ನಿಗದಿಪಡಿಸಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ. “ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಜಮೀನುಗಳಿಗೆ ಭೇಟಿ ನೀಡಿ ಜಿಪಿಎಸ್ (GPS) ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಮಧ್ಯಾಹ್ನದ ಕೆಂಡದಂಥ ಬಿಸಿಲಿನಲ್ಲಿ ಹೊಲಗಳಿಗೆ ಹೋಗುವುದು ಅಸಾಧ್ಯವಾಗಿದೆ. ಅದರಲ್ಲೂ ಮಹಿಳಾ ಸಿಬ್ಬಂದಿಗಳು ಮತ್ತು ವಯಸ್ಸಾದ ನೌಕರರು ಬಿಸಿಲಿಗೆ ತಲೆಸುತ್ತು ಬಂದು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಕ್ಕಪಕ್ಕದ ಜಿಲ್ಲೆಗಳ ಮಾದರಿಯಲ್ಲೇ ಗದಗ ಜಿಲ್ಲೆಗೂ ಸಮಯ ಬದಲಾವಣೆಯ ಆದೇಶವನ್ನು ಕೂಡಲೇ ಹೊರಡಿಸಬೇಕು, ಇಲ್ಲದಿದ್ದರೆ ಕೆಲಸ ನಿರ್ವಹಿಸುವುದು ಕಷ್ಟವಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us