
ಮೈಸೂರು, (ಸೆಪ್ಟೆಂಬರ್ 16): ಪಾಪ ಇನ್ಸ್ಪೆಕ್ಟರ್ ಧನಂಜಯ ಯಾವುದೇ ತಪ್ಪು ಮಾಡಿಲ್ಲ. ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ ಬುದ್ಧಿವಾದ ಹೇಳಿದ್ದಾರೆ. ಬುದ್ಧಿವಾದ ಹೇಳುವ ಧಾಟಿ ಸ್ವಲ್ಪ ಬದಲಾಗಿದೆ. ಅದನ್ನು ಬಿಟ್ಟರೆ ಪಿಐ ಧನಂಜಯ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದಿರುವ ಪಿಐ ವಿರುದ್ಧ ಯಾಕೆ ಕ್ರಮಕೈಗೊಳ್ಳಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯನವರು ಟಿ.ನರಸೀಪುರ ಪಿಐ ಧನಂಜಯ ನಡೆ ಸಮರ್ಥಿಸಿಕೊಂಡಿದ್ದಾರೆ.
ಟಿ.ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ಸಂಬಂಧ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಅವರಿಗೆ ಬೇಕಾದಂತಹ ರಸ್ತೆಯಲ್ಲಿ ಹೋಗಲು ಬಿಡಲು ಆಗುತ್ತಾ? ಸ್ಥಳೀಯ ಆಡಳಿತದ ಅನುಮತಿ ಪಡೆದು ಮೆರವಣಿಗೆ ಮಾಡಬಹುದು. ಅನುಮತಿ ಪಡೆಯದೆ ಏನಾದ್ರೂ ಸಮಸ್ಯೆಯಾದರೆ ಯಾರು ಹೊಣೆ? ಏನಾದರೂ ಹೆಚ್ಚುಕಡಿಮೆಯಾದರೆ? ಅದನ್ನೇ ಪಿಐ ಧನಂಜಯ ಹೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಟಿ.ನರಸೀಪುರ ಪಿಐ ಧನಂಜಯ ಹೇಳಿರುವುದು ಸರಿಯಾಗೇ ಇದೆ ಎಂದರು.

ಭಾರತೀಯ ಜನತಾ ಪಕ್ಷದವರು ರಣಹದ್ದುಗಳು. ಕೋಮುಗಲಭೆ ಆಗುವುದನ್ನೇ ಬಿಜೆಪಿಯವರು ಕಾಯುತ್ತಿರುತ್ತಾರೆ. ಕೋಮುಗಲಭೆ ಆಗಬೇಕು, ಯಾರಾದ್ರೂ ಸಾಯಬೇಕೆಂದು ಬಯಸುತ್ತಾರೆ. ಸಾವಿನ ಲಾಭ ಪಡೆಯಬೇಕು ಎಂಬುದು ಬಿಜೆಪಿಯವರ ಪ್ಲ್ಯಾನ್. ಎಲ್ಲೇ ಕೋಮುಗಲಭೆ ಆದರೂ ಬಿಜೆಪಿಗೆ ಚುನಾವಣಾ ಲಾಭವಾಗಿದೆ. ಹೀಗಾಗಿ ಬಿಜೆಪಿಯವರು ಕೋಮು ಗಲಭೆಗೆ ಆಸಕ್ತಿ ವಹಿಸುತ್ತಾರೆ. ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಅದೇ ಕೆಲಸಕ್ಕೆ ಬಂದಿದ್ದಾರೆ. ಪ್ರತಿಭಟನಾ ಮೆರವಣಿಗೆ ಸೇರಿದಂತೆ ಏನಾದರೂ ಮಾಡಲಿ ಬಿಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.