ಸರ್ಕಾರದ ವಿರುದ್ಧ ತೊಡೆ ತಟ್ಟಿದ ಸರ್ಕಾರಿ ವೈದ್ಯರು: ಬೇಡಿಕೆ ಈಡೇರಿಕೆಗೆ ಒತ್ತಾಯ; 21 ದಿನ ಡೆಡ್ಲೈನ್
ಸರ್ಕಾರಿ ವೈದ್ಯರು ಖಾಸಗಿ ಐಪಿಡಿ ಸೇವೆಗೆ ನಿರ್ಬಂಧ ಮತ್ತು ತಮ್ಮ 15 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. 21 ದಿನಗಳೊಳಗೆ ಬೇಡಿಕೆಗಳು ಈಡೇರದಿದ್ದರೆ ರಾಜ್ಯಾದ್ಯಂತ ಓಪಿಡಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಸಭೆಗೂ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಗೈರಾಗಿತ್ತು.

ಬೆಂಗಳೂರು, ಫೆಬ್ರವರಿ 13: ಸರ್ಕಾರಿ ವೈದ್ಯರಿಗೆ ಖಾಸಗಿ ಐಪಿಡಿ (IPD) ಸೇವೆಗೆ ನಿರ್ಬಂಧ ಹೇರಿರುವ ವಿಚಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಆರೋಗ್ಯ ಇಲಾಖೆ ನೌಕರರು ಪ್ರತಿಭಟನೆಗೆ (Protest) ಮುಂದಾಗಿದ್ದಾರೆ. ಆ ಮೂಲಕ ಸರ್ಕಾರಿ ವೈದ್ಯರು ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ. 21 ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ರಾಜ್ಯ ವ್ಯಾಪಿ ಒಪಿಡಿ ಸೇವೆ ಬಂದ್ ಮಾಡಿ ಮುಷ್ಕರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಕ್ಕೆ 21 ದಿನಗಳ ಗಡುವು
ಖಾಸಗಿ ಆಸ್ಪತ್ರೆಗಳಲ್ಲಿ ಐಪಿಡಿ ಸೇವೆ ಸಲ್ಲಿಸುವ ಸರ್ಕಾರಿ ವೈದ್ಯರಿಗೆ ನಿರ್ಬಂಧಕ್ಕೆ ವಿರೋಧ ಸೇರಿದಂತೆ ಪ್ರಮುಖ 15 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿರುವ ವೈದ್ಯರು ಹಾಗೂ ಆರೋಗ್ಯ ಇಲಾಖೆ ನೌಕರರು ಇಂದು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಕೇಂದ್ರ ಆರೋಗ್ಯ ಇಲಾಖೆಯ ನೌಕರರ ಸಂಘದಿಂದ ಸಭೆ ಮಾಡಲಾಗಿದೆ. ಸಭೆಯಲ್ಲಿ ಸರ್ಕಾರಕ್ಕೆ 21 ದಿನಗಳ ಗಡುವು ನೀಡಲಾಗಿದ್ದು, ಅಷ್ಟರಲ್ಲಿ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟಿಸುವ ನಿರ್ಧಾರ ತಗೆದುಕೊಂಡಿದ್ದಾರೆ.
ವೈದ್ಯರು ಹಾಗೂ ಆರೋಗ್ಯ ಇಲಾಖೆ ನೌಕರರ ಪ್ರಮುಖ ಬೇಡಿಕೆಗಳು ಏನು?
- ಸುಮಾರು 4 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿಯಾಗಿಲ್ಲ.
- 13 ವರ್ಷಗಳಿಂದ ವೈದ್ಯರ ಜೇಷ್ಠತಾ ಪಟ್ಟಿ ಪರಿಷ್ಕರಣೆ ಆಗಿಲ್ಲ.
- ವೈದ್ಯಕೀಯ ಮಹಾವಿದ್ಯಾಲಯಕ್ಕೆ ನೇಮಕಗೊಂಡ ವೈದ್ಯರಿಗೆ ವೇತನ ಶುಲ್ಕ, ಭತ್ಯ ಇಲ್ಲ.
- ವರ್ಷ ಪೂರ್ತಿ ವರ್ಗಾವಣೆ ಮಾಡುತ್ತಿರುವುದು ಜೊತೆಗೆ ವರ್ಗಾವಣೆ ಕಾಯ್ದೆಗೆ ಮಾರ್ಪಾಡು ಮಾಡುವಂತೆ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿರುವುದು.
ಇದನ್ನೂ ಓದಿ: ಆರೋಗ್ಯ ಇಲಾಖೆ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ! ಸಿಎಂ ಹೆಸರಲ್ಲಿ ಬರೆದ ಪತ್ರ ವೈರಲ್
- ವೈದ್ಯರ ವಿಶೇಷ ಭತ್ಯ ಪರಿಷ್ಕರಣೆ ಮಾಡುತ್ತಿಲ್ಲ.
- ಸರ್ಕಾರಿ ವೈದ್ಯರಿಗೆ ಖಾಸಗಿ IPD ಸೇವೆಗೆ ನಿರ್ಬಂಧ ಹೇರಿರುವುದು.
- ಆಸ್ಪತ್ರೆಗಳಲ್ಲಿ ಕಾಲಕಾಲಕ್ಕೆ ಔಷಧಗಳ ಸರಬರಾಜು ಇಲ್ಲದೇ ಇರುವುದು ರೋಗಿಗಳ ಚಿಕಿತ್ಸೆಗೆ ಸಮಸ್ಯೆಯಾಗಿದೆ.
- IV antibiotics ಸರಬರಾಜು ಸಮಸ್ಯೆಯಾಗಿದೆ.
- ಖಾಲಿ ಹುದ್ದೆಗಳ ನೇಮಕಾತಿ ಮಾಡದೆ ಇರುವುದು ವೈದ್ಯರ ಒತ್ತಡಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.