Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುದಾನ ಕಿಚ್ಚು: ತುಮಕೂರಿನಲ್ಲಿ ಸಿಎಂ ವಿರುದ್ಧ ಪ್ರತಿಭಟನೆಗೆ ಬಿಜೆಪಿ-ಜೆಡಿಎಸ್ ಶಾಸಕರು ನಿರ್ಧಾರ

ತುಮಕೂರಿನಲ್ಲಿ ಡಿಸೆಂಬರ್ 2 ರಂದು ನಡೆಯಲಿರುವ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಪ್ಪು ಬಾವುಟ ಪ್ರದರ್ಶನ ನಡೆಸಲು ನಿರ್ಧರಿಸಿದ್ದಾರೆ. ವಿರೋಧ ಪಕ್ಷಗಳಿಗೆ ಅನುದಾನದಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ಈ ಪ್ರತಿಭಟನೆ ಏರ್ಪಡಿಸಲಾಗಿದೆ. ಅನುದಾನ ಬಿಡುಗಡೆ ಮಾಡದಿದ್ದರೆ ಕಾರ್ಯಕ್ರಮವನ್ನು ಅಡ್ಡಿಪಡಿಸುವುದಾಗಿ ಎಚ್ಚರಿಸಿದ್ದಾರೆ.

ಅನುದಾನ ಕಿಚ್ಚು: ತುಮಕೂರಿನಲ್ಲಿ ಸಿಎಂ ವಿರುದ್ಧ ಪ್ರತಿಭಟನೆಗೆ ಬಿಜೆಪಿ-ಜೆಡಿಎಸ್ ಶಾಸಕರು ನಿರ್ಧಾರ
ಅನುದಾನ ಕಿಚ್ಚು: ತುಮಕೂರಿನಲ್ಲಿ ಸಿಎಂ ವಿರುದ್ಧ ಪ್ರತಿಭಟನೆಗೆ ಬಿಜೆಪಿ-ಜೆಡಿಎಸ್ ಶಾಸಕರು ನಿರ್ಧಾರ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 26, 2024 | 4:21 PM

ತುಮಕೂರು, ನವೆಂಬರ್​ 26: ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್​ನಲ್ಲಿ ಸ್ಫೋಟಗೊಂಡಿದ್ದ ಅನುದಾನ ಅಸಮಾಧಾನದ ಬಾಂಬ್, ಇದೀಗ ಮತ್ತೆ ಸದ್ದು ಮಾಡುತ್ತಿದೆ. ಈ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಆರೋಪ-ಪ್ರತ್ಯಾರೋಪಗಳು ಮಾಡಲಾಗುತ್ತಿದೆ. ಈ ಮಧ್ಯೆ ಡಿ. 2ರಂದು ನಗರಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರತಿಭಟನೆಗೆ ಬಿಜೆಪಿ- ಜೆಡಿಎಸ್ ಶಾಸಕರು ನಿರ್ಧರಿಸಿದ್ದಾರೆ.

ತುಮಕೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಫಲಾನುಭವಿಗಳಿಗೆ ಸವಲತ್ತು ವಿತರಣೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಡಿ. 2ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ ಎಂದು ಸುದ್ದಿಗೋಷ್ಠಿ ಶಾಸಕರು ಮಾಹಿತಿ ನೀಡಿದ್ದಾರೆ.

ಸಿಎಂ ಯಾವ ಪುರುಷಾರ್ಥಕ ಬರುತ್ತಿದ್ದಾರೆ: ಶಾಸಕ ಸುರೇಶ್ ಗೌಡ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸುರೇಶ್ ಗೌಡ, ಸಿಎಂ ಯಾವ ಪುರುಷಾರ್ಥಕ ಇಲ್ಲಿಗೆ ಬರುತ್ತಿದ್ದಾರೆ. ಇವತ್ತು ನಾವೆಲ್ಲಾ ನಿರ್ಧಾರ ಮಾಡಿದ್ದೇವೆ. ಅವರು ಬರುವುದರ ಒಳಗೆ ತಾರತಮ್ಯ ನಿವಾರಣೆ ಮಾಡದಿದ್ದರೆ, ಸಾವಿರಾರು ಜನ ಕಾರ್ಯಕರ್ತರು ಬಂದು ಕಪ್ಪು ಭಾವುಟ ಪ್ರದರ್ಶನ ಮಾಡಿ ಗೋ ಬ್ಯಾಕ್ ಸಿದ್ದರಾಮಯ್ಯ ಅಂತ ಘೋಷಣೆ ಕೂಗುತ್ತೇವೆ. ಕರ್ನಾಟಕದ ಪಾಲಿಗೆ ಸತ್ತು ಹೋಗಿರುವ ಸರ್ಕಾರ ಅಂತ ಘೋಷಣೆ ಕೂಗುತ್ತೇವೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಮತ್ತೆ ಭುಗಿಲೆದ್ದ ಅನುದಾನ ವಾರ್: ‘ಕೈ’ ಶಾಸಕನ ವಿರುದ್ಧ ಪಕ್ಷದ ಮುಖಂಡರಿಂದಲೇ ವಾಗ್ದಾಳಿ

ಅನುದಾನ ಬಿಡುಗಡೆ ಮಾಡದೇ ಇದ್ದರೇ ನಾವು ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಯಲು ಬಿಡಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸ್ ಬಲ ಬಳಸಿದರೆ, ಸಾವಿರಾರು ಜನ ಕಾರ್ಯಕರ್ತರೊಂದಿಗೆ ಕಪ್ಪು ಭಾವುಟ ಪ್ರದರ್ಶನ ಮಾಡುತ್ತೇವೆ. ಟೋಲ್​ನಲ್ಲಿ ಸಿದ್ದರಾಮಯ್ಯ ಕಾರಿಗೆ ಅಡ್ಡಲಾಗಿ ಮಲಗುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದೇ ಡಿಸೆಂಬರ್ 2 ರಂದು ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮಕ್ಕೆ ತುಮಕೂರಿಗೆ ಆಗಮಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ 8 ತಿಂಗಳು ಪೂರೈಸಿದೆ. ತುಮಕೂರಿನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಈ ಸರ್ಕಾರ ಬಂದ ಮೇಲೆ ವಿರೋಧ ಪಕ್ಷಗಳಿಗೆ ಸಾಕಷ್ಟು ತಾರತಮ್ಯ ಮಾಡಿದೆ. ಪ್ರತಿ ಶಾಸಕರಿಗೆ 25 ಕೋಟಿ ರೂ. ವಿಶೇಷ ಅನುದಾನ ಕೊಡುತ್ತೇವೆ ಅಂತ ಘೋಷಣೆ ಮಾಡಿ ಒಂದು ವರ್ಷ ಕಳೆದಿದೆ ಎಂದಿದ್ದಾರೆ.

ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ

ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಒಂದು ಬಿಡಿಗಾಸನ್ನು ಇನ್ನು ಬಿಡುಗಡೆ ಮಾಡಿಲ್ಲ. ಆದರೆ ತುಮಕೂರು ಜಿಲ್ಲೆಯ ಕಾಂಗ್ರೆಸ್​ ಶಾಸಕರ ಕ್ಷೇತ್ರಗಳಿಗೆ ವಿಶೇಷ ಅನುದಾನ ಅಂತ ಬಿಡುಗಡೆ ಮಾಡಲಾಗಿದೆ. ಶಿರಾ ಕ್ಷೇತ್ರಕ್ಕೆ 8 ಕೋಟಿ, ಕೊರಟಗೆರೆ 10 ಕೋಟಿ, ಪಾವಗಡಕ್ಕೆ 12 ಕೋಟಿ ರೂ, ಗುಬ್ಬಿ ಕ್ಷೇತ್ರಕ್ಕೆ 5 ಕೋಟಿ, ತಿಪಟೂರು ಕ್ಷೇತ್ರಕ್ಕೆ 10 ಕೋಟಿ, ಕುಣಿಗಲ್ ಕ್ಷೇತ್ರಕ್ಕೆ 42 ಕೋಟಿ ರೂ. ಬಿಡುಗಡೆ ಆಗಿದೆ ಎಂದು ತಿಳಿಸಿದ್ದಾರೆ.

ಮಧುಗಿರಿ ಕ್ಷೇತ್ರಕ್ಕೆ ವಿಶೇಷ ಅನುದಾನ ಅಂತ ಹೇಳಿ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ವಿರೋಧ ಪಕ್ಷದವರನ್ನ ಆಯ್ಕೆ ಮಾಡಿದ ಶಾಸಕರನ್ನ ದಂಡಿಸಲು ಈ ರೀತಿ ಮಾಡಿದ್ದಾರಾ? ಸಿದ್ದರಾಮಯ್ಯ ಅವರದ್ದು ಸರ್ವಾಧಿಕಾರನಾ ಇದು ಎಂದು ಪ್ರಶ್ನಿಸಿದ್ದಾರೆ.

ಬಿಟ್ಟಿ ಭಾಗ್ಯದ ಅಡಿಯಲ್ಲಿ ಈ ಸರ್ಕಾರ ನಡೆಸುತ್ತಿದ್ದಾರೆ

ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದ್ವೇಷ, ದುರಂಹಕಾರ ರಾಜಕಾರಣ ಹೆಚ್ಚಾಗಿದೆ. ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಬಿಟ್ಟಿ ಭಾಗ್ಯದ ಅಡಿಯಲ್ಲಿ ಈ ಸರ್ಕಾರ ನಡೆಸುತ್ತಿದ್ದಾರೆ. ಈ ಸರ್ಕಾರ ದಿವಾಳಿಯಾಗಿದೆ. 25 ಕೋಟಿ ರೂ. ಕೊಡುತ್ತೇವೆ ಅಂತ ಹೇಳಿದ್ದರು. ಅನುದಾನ ಕೊಡುವುದರಲ್ಲಿ ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಜಯನಗರ ಅನುದಾನ ಜಟಾಪಟಿ: ಸರ್ಕಾರದ ವಿರುದ್ಧ ಸಿಡಿದೆದ್ದ ಸಂಘಟನೆಗಳು

8 ಬಾರಿ ಶಾಸಕರಾಗಿರುವ ಹಿರಿಯ ನಾಯಕ ಟಿ.ಬಿ ಜಯಚಂದ್ರಗೆ ಕೇವಲ 8 ಕೋಟಿ ರೂ. ಕೊಡಲಾಗಿದೆ. ಕೇವಲ ಎರಡು ಬಾರಿ ಗೆದ್ದಿರುವ ಡಿಕೆ ಶಿವಕುಮಾರ್ ಸಂಬಂಧಿ ಕುಣಿಗಲ್ ಶಾಸಕ ಡಾ ರಂಗನಾಥ್​ಗೆ 43 ಕೋಟಿ ರೂ. ಕೊಟ್ಟಿದ್ದಾರೆ. ಕೊರಟಗೆರೆ ಪರಮೇಶ್ವರ್ ಕ್ಷೇತ್ರಕ್ಕೆ ಅವರಿಗೆ 10 ಕೋಟಿ ರೂ. ಕೊಟ್ಟಿದ್ದಾರೆ. ಗುಬ್ಬಿ ಶಾಸಕರನ್ನ ಮಂತ್ರಿ ಮಾಡುತ್ತೇವೆ ಅಂತ ಕರೆದುಕೊಂಡು ಹೋದ್ದರು. ಪಾಪ ಅವರಿಗೆ ಮಕ್ಮಲ್ ಟೋಪಿ ಹಾಕಿ ಕೇವಲ 5 ಕೋಟಿ ರೂ. ಕೊಟ್ಟಿದ್ದಾರೆ. ಅವರವರಲ್ಲೇ ಡಿಫ್ರೆನ್ಸ್ ಕೊಟ್ಟಿದ್ದಾರೆ. ನಾವೇನು ತಪ್ಪು ಮಾಡಿದ್ದೇವೆ.  ದ್ವೇಷದ ರಾಜಕಾರಣವನ್ನ ನಾವು ಸಹಿಸಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:41 pm, Tue, 26 November 24