ಮೋದಿಯವರನ್ನ ಭೇಟಿಯಾಗ್ತೇನೆ, ಕೇಂದ್ರ ಸಚಿವರನ್ನು ಕರೆದು ಬೃಹತ್ ಸಮಾವೇಶ: ಜೈಲಿಂದ ಬಂದ ದೇವರಾಜೇಗೌಡ ಸ್ಫೋಟಕ ಹೇಳಿಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 02, 2024 | 8:20 PM

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪ್ರಕರಣದಲ್ಲಿ ಭಾರೀ ಸದ್ದು ಮಾಡಿದ್ದ ವಕೀಲ ದೇವರಾಜೇಗೌಡ(Devaraje Gowda) ಇಂದು (ಮಂಗಳವಾರ) ಬಿಡುಗಡೆ ಆಗಿದ್ದಾರೆ. ಬಳಿಕ ಮಾತನಾಡಿದ ಅವರು, ‘ಕೇಂದ್ರದ ಅಧಿವೇಶನ ಮುಗಿದ ಬಳಿಕ ಪ್ರಧಾನಿ ಮೋದಿ ಅವರನ್ನು ಬೇಟಿಯಾಗುತ್ತೇನೆ. ಜೊತೆಗೆ ಎಲ್ಲಾ ಕೇಂದ್ರ ಸಚಿವರನ್ನು ಹಾಸನಕ್ಕೆ ಕರೆದು ಬೃಹತ್ ಸಮಾವೇಶ ಮಾಡುತ್ತೇನೆ ಎಂದರು.

ಮೋದಿಯವರನ್ನ ಭೇಟಿಯಾಗ್ತೇನೆ, ಕೇಂದ್ರ ಸಚಿವರನ್ನು ಕರೆದು ಬೃಹತ್ ಸಮಾವೇಶ: ಜೈಲಿಂದ ಬಂದ ದೇವರಾಜೇಗೌಡ ಸ್ಫೋಟಕ ಹೇಳಿಕೆ
ವಕೀಲ ದೇವರಾಜೇಗೌಡ
Follow us on

ಹಾಸನ, ಜು.02: ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ವಕೀಲ ದೇವರಾಜೇಗೌಡ(Devaraje Gowda) ಅವರು ಇಂದು(ಮಂಗಳವಾರ) ಬಿಡುಗಡೆ ಆಗಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಬಿಜೆಪಿಯ ರಾಷ್ಟ್ರೀಯ, ರಾಜ್ಯ ನಾಯಕರಿಗೆ ಹಾಗೂ ಹಲವು ಗಣ್ಯರಿಗೆ ತುಂಬು ಹೃದಯದಿಂದ ಧನ್ಯವಾದ ತಿಳಿಸುತ್ತೇನೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನ ಬಂಧನದ ಬಗ್ಗೆ ಮಾತನಾಡಿದ್ದರು. ಇನ್ನು 51 ದಿನಗಳ ಬಳಿಕ ಹೊರಗೆ ಬಂದಿದ್ದೇನೆ. ನನ್ನ ಜಿಲ್ಲೆಯ ಲಕ್ಷಾಂತರ ಕಾರ್ಯಕರ್ತರು, ನಾಯಕರು ಸಾವಿರಾರು ವಕೀಲರ ಪ್ರಾರ್ಥನೆ ಭಗವಂತನಿಗೆ ಮುಟ್ಟಿದೆ. ಉಸಿರು ಇರುವವರೆಗೂ ಯಾರನ್ನು ಮರೆಯೊದಿಲ್ಲ ಎಂದರು.

ಪ್ರಧಾನಿ ಮೋದಿ, ಕೇಂದ್ರ ಸಚಿವರನ್ನು ಕರೆದು ಬೃಹತ್ ಸಮಾವೇಶ ಮಾಡ್ತೇನೆ

ಹಲವು ಕಾರಣದಿಂದ ಕೆಲವು ವಿಚಾರ ಈಗ ಹೇಳಲ್ಲ, ಅದಕ್ಕಾಗಿ ಒಂದು ಸಮಯ ನಿಗದಿ ಆಗುತ್ತದೆ. ನನ್ನ ಬಂಧನ ಅನಿರೀಕ್ಷಿತ ಅಲ್ಲ, ನಿರೀಕ್ಷಿತ. ಕುಟುಂಬ ದ್ಚೇಷಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಸನ ಜಿಲ್ಲೆಯ ಮಾನ ಹರಾಜಾಗಿದೆ. ಮುಂದಿನ ತಿಂಗಳು. ಅಂದರೆ ಆ.15 ರೊಳಗೆ ಒಂದು ದಿನಾಂಕ ನಿಗದಿ ಮಾಡುತ್ತೇನೆ. ಕೇಂದ್ರದ ಅಧಿವೇಶನ ಮುಗಿದ ಬಳಿಕ ಪ್ರಧಾನಿ ಅವರನ್ನು ಬೇಟಿಯಾಗುತ್ತೇನೆ. ಎಲ್ಲಾ ಕೇಂದ್ರ ಸಚಿವರನ್ನು ಕರೆದು ಬೃಹತ್ ಸಮಾವೇಶ ಮಾಡುತ್ತೇನೆ ಎಂದರು.

ಇದನ್ನೂ ಓದಿ:ಅತ್ಯಾಚಾರ ಆರೋಪ ಪ್ರಕರಣ; ವಕೀಲ ದೇವರಾಜೇಗೌಡ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದ ಕೋರ್ಟ್

ಹಾಸನದಲ್ಲಿ ಮೈತ್ರಿ ಪಕ್ಷದ ಗೆಲುವಿಗೆ ಪ್ರಯತ್ನ

ಯಾವ ಜಿಲ್ಲೆಗೆ ಕಳಂಕ ತಂದರೋ, ಅದೇ ಜಿಲ್ಲೆಯಿಂದ ಸಂಘಟನೆಗೆ ಮುಂದಾಗುತ್ತೇವೆ. ಸ್ಥಳೀಯ ಚುನಾವಣೆ ಗೆಲ್ಲಲು ಮೈತ್ರಿ ಪಕ್ಷದ ಗೆಲುವಿಗೆ ಪ್ರಯತ್ನ ಮಾಡುತ್ತೆವೆ. ಕುಮಾರಸ್ವಾಮಿ ಅವರು ಶೀಘ್ರವಾಗಿ ಜಿಲ್ಲೆಗೆ ಎಂಟ್ರಿ ಆಗುತ್ತಾರೆ. ಇದೇ ವೇಳೆ ನನ್ನ ಹೊಳೆನರಸೀಪುರ ಕ್ಷೇತ್ರದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ಕುಮಾರಸ್ವಾಮಿ ಅವರಿಗೆ ಮನವಿ ಮಾಡುತ್ತೇನೆ. ನಾನು ಈ ಜಿಲ್ಲೆಯ ನೇತೃತ್ವ ವಹಿಸಿ, ಪ್ರೀತಂ ಗೌಡ ಎಲ್ಲರೂ ಸೇರಿ ಒಂದಾಗಿ ಕೆಲಸ ಮಾಡುತ್ತೇವೆ.

ಮುಂದಿನ ದಿನಗಳಲ್ಲಿ ಹೈಕಮಾಂಡ್ ತೀರ್ಮಾನದಂತೆ ಮುಂದೆ ಹೋಗುತ್ತೇವೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗೊದು ಬೇಡ. ಎರಡು ಪಕ್ಷದ ಕಾರ್ಯಕರ್ತರ ಜೊತೆ ನಾನು ಇರ್ತೇನೆ. ನಾನು ಹಿಂದೆ ಮಾತನಾಡಿದಾಗ ಪೆನ್ ಡ್ರೈವ್ ವಿಚಾರ ಇರಲಿಲ್ಲ, ಈಗ ತನಿಖೆ ಆಗುತ್ತಿದೆ. ತನಿಖೆ ಆಗೋ ವೇಳೆ ಏನು ಮಾತನಾಡುವುದು ಬೇಡ. ಎಸ್​ಐಟಿಯಲ್ಲಿ ಒಳ್ಳೆ ಅದಿಕಾರಿಗಳು ಇದ್ದಾರೆ ತನಿಖೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ದೇವರಾಜೇಗೌಡರ ವಿಚಾರಣೆ ಮುಕ್ತಾಯ, ಮೇ 24 ರವರೆಗೆ ನ್ಯಾಯಾಂಗ ಕಸ್ಟಡಿ

ಎಚ್.ಡಿ.ದೇವೇಗೌಡರಿಗೆ ಹಾಸನದಲ್ಲಿ ಸನ್ಮಾನ

ಮಣ್ಣಿನಮಗ ಎಂದು ಹೆಸರಾಗಿರುವ ಎಚ್.ಡಿ.ದೇವೇಗೌಡರಿಗೆ ಹಾಸನದಲ್ಲಿ ಸನ್ಮಾನ ಮಾಡುತ್ತೇನೆ. ಇಲ್ಲಿ ಕೆಲವರು ಅಧಿಕಾರದ ಮದದಿಂದ ಮೆರಯುತ್ತಿದ್ದಾರೆ. ಮುಂದೆ ಅವರಿಗೂ ತಕ್ಕ ಉತ್ತರ ಕೊಡುತ್ತೇನೆ. ಮುಂಬರುವ ಜಿ.ಪಂ., ತಾ.ಪಂ., ಚುನಾವಣೆಯಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಗೆಲ್ಲಬಾರದು. ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಗೆ ಪರಮಾಧಿಕಾರ ಬರುತ್ತದೆ ಎಂದು ಹೇಳಿದರು.

ಪೆನ್‌ಡ್ರೈವ್ ಪ್ರಕರಣ

ಇನ್ನು ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತನಿಖೆಯನ್ನು ಡಿ.ಕೆ.ಶಿವಕುಮಾರ್ ಮಾಡುತ್ತಿಲ್ಲ. ಹಾಸನದಲ್ಲಿ ಒಳ್ಳೆಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತಾರ್ಕಿಕವಾಗಿ ಅಂತ್ಯವಾಗುತ್ತದೆ. ಅತೀ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಹೊರ ಬರುತ್ತದೆ. ಪೆನ್‌ಡ್ರೈವ್ ಪ್ರಕರಣದಲ್ಲಿ ಸಾಕ್ಷಿಯಾಗಿದ್ದೇನೆ. ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇನೆ. ತನಿಖೆ ಮುಗಿದೆ ಮೇಲೆ ಸತ್ಯಾಂಶ ಹೊರ ಬರುತ್ತದೆ. ಆಡಿಯೋ ಬಗ್ಗೆ ಎಫ್‌ಎಸ್‌ಎಲ್‌ನಿಂದ ಸತ್ಯ ಹೊರಗೆ ಬರುತ್ತದೆ. ಇದೇ ವೇಳೆ ನಾನು ಹೊರ ಬಂದರೆ ಸರ್ಕಾರ ಪತನ ವಿಚಾರಕ್ಕೆ ಉತ್ತರಿಸಿ, ಕಾದು ನೋಡಿ ಎಂದು ದೇವರಾಜೇಗೌಡ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ