ಪ್ರೇಯಸಿಯನ್ನು ಮದುವೆಯಾಗಲು ಕರೆದೊಯ್ಯುತ್ತಿದ್ದ ವೇಳೆ ಕಾರು ಪಲ್ಟಿ; ದಾರಿ ಮಧ್ಯೆ ಯುವಕನನ್ನು ಬಿಟ್ಟು ಯುವತಿ ಪರಾರಿ
ಪ್ರೀತಿಸಿದ ಹುಡುಗಿಯನ್ನು ಕರೆದುಕೊಂಡು ಹೋಗಲು ಬೆಂಗಳೂರಿನಿಂದ ಬಂದಿದ್ದ ಯುವಕನ ಮದುವೆ ಕನಸು ಹಿರೇಕೆರೂರಿನಲ್ಲಿ ನಡೆದ ಅಪಘಾತದಿಂದ ನುಚ್ಚುನೂರಾಗಿದೆ. ಕಾರು ಪಲ್ಟಿಯಾಗಿ ಪ್ರಿಯಕರ ಸೇರಿ ಮೂವರು ಗಾಯಗೊಂಡರೆ, ಯುವತಿ ಮಾತ್ರ ತನ್ನ ಪ್ರಿಯಕರನನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿ ಬೆಂಗಳೂರು ಸೇರಿಕೊಂಡಳು. ಪ್ರೇಮ ವಿವಾಹದ ಯೋಜನೆ ದುರಂತ ಅಂತ್ಯ ಕಂಡಿದೆ.

ಹಾವೇರಿ, ಫೆ.21: ಪ್ರೀತಿಸಿದ ಹುಡುಗಿಯನ್ನ ಕೈಹಿಡಿಯಲು ಬೆಂಗಳೂರಿನಿಂದ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದ ಯುವಕನ ಮದುವೆ ಕನಸು ರಸ್ತೆ ಮಧ್ಯೆಯೇ ನುಚ್ಚುನೂರಾಗಿದೆ. ಕಾರು ಪಲ್ಟಿಯಾಗಿ ಪ್ರಿಯಕರ ಸೇರಿ ಮೂವರು ಆಸ್ಪತ್ರೆ ಪಾಲಾಗಿದ್ದರೆ, ಯುವತಿ ಮಾತ್ರ ಅಲ್ಲಿಂದ ಪರಾರಿಯಾಗಿ ಬೆಂಗಳೂರು ಸೇರಿಕೊಂಡ ಘಟನೆ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ತಾಂಡಾ ಬಳಿ ನಡೆದಿದೆ. ಗಾಯಾಳು ಯುವಕ ಇರ್ಫಾನ್ ಮತ್ತು ಹಿರೇಕೆರೂರು ಮೂಲದ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಅವರಿಬ್ಬರ ನಡುವೆ ಪರಿಚಯವಾಗಿ, ಪ್ರೀತಿ ಅಂಕುರಿಸಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.
ಯುವತಿ ಇತ್ತೀಚೆಗೆ ಜಾತ್ರೆಗಾಗಿ ಹಿರೇಕೆರೂರಿನ ತನ್ನೂರಿಗೆ ಬಂದಿದ್ದಳು. ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿ ಮದುವೆಯಾಗಲು ಇರ್ಫಾನ್ ಪ್ಲಾನ್ ಮಾಡಿದ್ದ. ಇದಕ್ಕಾಗಿ ತನ್ನ ಸ್ನೇಹಿತರಾದ ಚಂದ್ರು ಮತ್ತು ಗುರುರಾಜ್ ಅವರ ಜೊತೆ ಬಾಡಿಗೆ ಕಾರಿನಲ್ಲಿ ಊರಿಗೆ ಬಂದಿದ್ದ ಇರ್ಫಾನ್, ಯುವತಿಯನ್ನು ಕರೆದುಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದ.
ಇದನ್ನೂ ಓದಿ: ಕದ್ದ ಚಿನ್ನವನ್ನು ಗೋಲ್ಡ್ ಲೋನ್ ಕಂಪನಿಗೆ ಮಾರುವ ವೇಳೆ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಯುವತಿಯ ಪೋಷಕರು ಬೆನ್ನಟ್ಟಬಹುದು ಎಂಬ ಭಯದಲ್ಲಿ ಯುವಕರು ವೇಗವಾಗಿ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಚನ್ನಹಳ್ಳಿ ತಾಂಡಾ ಬಳಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ನುಜ್ಜುನುಜ್ಜಾಗಿದ್ದು, ಇರ್ಫಾನ್ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಗಂಭೀರ ಗಾಯಗಳಾಗಿವೆ. ಕಾರಿನ ಹಿಂಬದಿಯ ಸೀಟಿನಲ್ಲಿದ್ದ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಜನರ ಗುಂಪು ಸೇರುವುದನ್ನು ಕಂಡು ಮರ್ಯಾದೆಗೆ ಅಂಜಿ, ಯುವತಿ ತನ್ನ ಪ್ರಿಯಕರನನ್ನು ಅಲ್ಲಿಯೇ ಬಿಟ್ಟು ಅವರಿವರ ಬಳಿ ಲಿಫ್ಟ್ ಕೇಳಿ ಬೆಂಗಳೂರು ಬಸ್ ಹತ್ತಿ ಮನೆ ಸೇರಿದ್ದಾಳೆ. ಸದ್ಯ ಗಾಯಾಳು ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಿತ್ರ ಪ್ರೇಮ ಪ್ರಕರಣ ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವರದಿ : ಅಣ್ಣಪ್ಪ ಬಾರ್ಕಿ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
