ಮುಂಬೈನಿಂದ ಯಾದಗಿರಿಗೆ ಬಂದಿದ್ದವರು ಕೊವಿಡ್ ಟೆಸ್ಟ್ಗೆ ಹೆದರಿ ರೈಲ್ವೇ ಸ್ಟೇಷನ್ ಕಾಂಪೌಂಡ್ ಹಾರಿ ಪರಾರಿ
ಕೊವಿಡ್ ಟೆಸ್ಟ್ಗೆ ಹೆದರಿ ಕಂಪೌಂಡ್ ಹಾರಿ ಮುಂಬೈನಿಂದ ಬಂದಿರುವ ವಲಸೆ ಕಾರ್ಮಿಕರು ಪರಾರಿಯಾಗಿದ್ದಾರೆ.

ಯಾದಗಿರಿ: ಮುಂಬೈನಿಂದ ಬಂದಿರುವ ವಲಸೆ ಕಾರ್ಮಿಕರು ಕೊವಿಡ್ ಟೆಸ್ಟ್ಗೆ ಹೆದರಿ ಕಂಪೌಂಡ್ ಹಾರಿ ಪರಾರಿಯಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಕೊವಿಡ್ ಟೆಸ್ಟ್ ಮಾಡಿಸಬೇಕೆಂದು ವಿಷಯ ತಿಳಿದು, ನಗರದ ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಇಳಿದ ತಕ್ಷಣ ಪರಾರಿಯಾಗಿಬಿಟ್ಟಿದ್ದಾರೆ. ಯಾದಗಿರಿ ಮೂಲದ, ಮುಂಬೈನಲ್ಲಿ ಕೆಲಸಕ್ಕೆಂದು ಹೋಗಿದ್ದ ವಲಸಿಗರು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ದಾರಿ ತಪ್ಪಿಸುತ್ತಿದ್ದಾರೆ. ಊರಿಗೆ ತಲುಪುವಾಗ ರೈಲ್ವೆ ನಿಲ್ದಾಣದ ಹಿಂಭಾಗದ ಕಂಪೌಂಡ್ ದಾಟಿ ಕೊವಿಡ್ ಟೆಸ್ಟ್ ತಪ್ಪಿಸಿಕೊಳ್ಳುತ್ತಿದ್ದಾರೆ. ಮಕ್ಕಳು, ಮಹಿಳೆಯರು ಹಾಗೂ ಯುವಕರು ಅಪಾಯದ ನಡುವೆ ಕಂಪೌಂಡ್ ಹಾರಿ ಊರಿಗೆ ಪರಾರಿಯಾಗುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ಡೌನ್ ಭೀತಿ ಕಾಡುತ್ತಿದೆ. ಆದ್ದರಿಂದ ಮಹಾರಾಷ್ಟ್ರ ಬಿಟ್ಟು ವಲಸೆ ಕಾರ್ಮಿಕರು ತಮ್ಮ ಊರಿಗೆ ಹಿಂದಿರುಗುತ್ತಿದ್ದಾರೆ. ರೈಲ್ವೇ ನಿಲ್ದಾಣದ ಮುಖ್ಯ ಗೇಟ್ನಲ್ಲಿ ಕೊವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಟೆಸ್ಟ್ ಮಾಡಿಸಿದರೆ ಮಾತ್ರ ರೈಲ್ವೆ ನಿಲ್ದಾಣದಿಂದ ಹೊರಗಡೆ ಕಳುಹಿಸಲಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ವಲಸೆ ಕಾರ್ಮಿಕರು ಕಂಪೌಂಡ್ ಹಾರಿ ಪರಾರಿಯಾಗುತ್ತಿದ್ದಾರೆ. ಯಾವುದೇ ಟೆಸ್ಟ್ ಮಾಡಿಸದೇ ಊರಿಗೆ ಸೇರುವ ಕಾರ್ಮಿಕರಿಂದ ಯಾದಗಿರಿ ಜಿಲ್ಲೆಗೆ ಎರಡನೇ ಕೊರೊನಾ ಅಲೆ ಆತಂಕ ಶುರುವಾಗಿದೆ. ಕಳ್ಳದಾರಿ ಹಿಡಿದು ಓಡುವ ಕಾರ್ಮಿಕರನ್ನು ಜಿಲ್ಲಾಡಳಿತ ಕಡಿವಾಣ ಹಾಕುತ್ತಾ? ಎಂಬ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ ಪರಿಸ್ಥಿತಿ ಗಂಭೀರ, ಲಾಕ್ಡೌನ್ ಇದಕ್ಕೆ ಪರಿಹಾರವಲ್ಲ: ಅರವಿಂದ್ ಕೇಜ್ರಿವಾಲ್