
ಬೆಂಗಳೂರು, (ಮಾರ್ಚ್ 04): ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ (IPL) ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (rcb) ತನ್ನ ತವರು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Bengaluru chinnaswamy stadium) ಮರಳಿ ಕಣಕ್ಕಿಳಿಯುವುದಾಗಿ ಮಂಗಳವಾರ ಘೋಷಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವೂ ಸಹ ಇಂದು (ಮಾರ್ಚ್ 04) ಪ್ರಮುಖ ಆರು ಷರತ್ತುಗಳೊಂದಿಗೆ ಬೆಂಗಳೂರಿನಲ್ಲಿ ಪಂದ್ಯ ನಡೆಸಲು ಅನುಮತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ಕಾಲ್ತುಳಿತ ಪ್ರಕರಣ ಬೆನ್ನಲ್ಲೇ ಈ ಬಾರಿ ಐಪಿಎಲ್ ಪಂದ್ಯಗಳು ನಡೆಯುತ್ತಾ ಇಲ್ಲಾ ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ.
ತಜ್ಞರ ಸಮಿತಿಯ ಶಿಫಾರಸ್ಸಿನನ್ವಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ಸೇರಿದಂತೆ ಪಂದ್ಯಗಳನ್ನು ನಡೆಸಲು KSCAಗೆ ತಾತ್ಕಾಲಿಕ ಅನುಮತಿ ನೀಡಿ ಆದೇಶ ಹೊರಡಿಸಿದೆ. ಆದ್ರೆ, ಸಮಿತಿ ಸೂಚಿಸಿದ ಶಿಫಾರಸುಗಳನ್ನ ಅನುಷ್ಠಾನಕ್ಕೆ ತರಬೇಕು ಎಂದು ಆದೇಶದಲ್ಲಿ ಸೂಚನೆ ನೀಡಿದೆ.
ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತ ಘಟನೆ ಬಳಿಕ ಸರ್ಕಾರ ನೇಮಿಸಿದ್ದ ನ್ಯಾ.ಕುನ್ಹಾ ಸಮಿತಿ ಹಲವು ಶಿಫಾರಸುಗಳನ್ನು ಮಾಡಿತ್ತು. ಸಮಿತಿ ಶಿಫಾರಸಿನಲ್ಲಿ ಪ್ರವೇಶ ದ್ವಾರಗಳನ್ನು 6 ಮೀ.ಗೆ ವಿಸ್ತರಿಸಬೇಕು ಎಂದಿತ್ತು. ಆದರೆ ಕೆಎಸ್ಸಿಎ ದ್ವಾರಗಳ ಅಗಲವನ್ನು 9 ಮೀ.ಗೆ ವಿಸ್ತರಿಸಿದೆ. ಇದರಿಂದ ದ್ವಾರಗಳ ಬಳಿ ನೂಕುನುಗ್ಗಲು ತಪ್ಪಿಸಬಹುದಾಗಿದೆ. ಹೀಗೆ ಸಮಿತಿಯು ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದ್ದು, ಅವುಗಳನ್ನ ಪಾಲಿಸುವಂತೆ ಸರ್ಕಾರ ತಿಳಿಸಿದೆ.
Published On - 2:52 pm, Wed, 4 March 26