
ಬೆಂಗಳೂರು, ನವೆಂಬರ್ 03: ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ನಿವೇಶನ ನೀಡಲಾಗುವುದು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಜಾತ್ಯಾತೀತ ಜನತಾದಳ ಕಿಡಿ ಕಾರಿದೆ. ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ JDS, ‘ನಮ್ಮ ತೆರಿಗೆ, ನಮ್ಮ ಹಕ್ಕು’ ಎಂದು ಗಂಟಲು ಹರಿದುಕೊಳ್ಳುವ ಕಾಂಗ್ರೆಸ್ಸಿಗರೇ ನಿಮ್ಮ ಡೋಂಗಿತನಕ್ಕೆ ಏನೆನ್ನಬೇಕು ? ಮತಕ್ಕೋಸ್ಕರ ಕನ್ನಡಿಗರ ಭೂಮಿಯನ್ನು ವಲಸಿಗರಿಗೆ ನೀಡಲು ಹೊರಟಿರುವ ನಿಮಗೆ ಧಿಕ್ಕಾರ ಎಂದು ಕಿಡಿ ಕಾರಿದೆ.
‘ನಮ್ಮ ತೆರಿಗೆ, ನಮ್ಮ ಹಕ್ಕು’ ಎಂದು ಗಂಟಲು ಹರಿದುಕೊಳ್ಳುವ @INCKarnataka ಕಾಂಗ್ರೆಸ್ಸಿಗರೇ.. ನಿಮ್ಮ ಢೋಂಗಿತನಕ್ಕೆ ಏನೆನ್ನಬೇಕು ? ಮತಕ್ಕೋಸ್ಕರ ಕನ್ನಡಿಗರ ಭೂಮಿಯನ್ನು ವಲಸಿಗರಿಗೆ ಧಾರೆ ಎರೆಯಲು ನಿಮ್ಮ ದೈನೇಸಿತನಕ್ಕೆ ಧಿಕ್ಕಾರ.
ಕನ್ನಡಿಗರ ಹಿತ ಕಾಪಾಡುವ ಬದಲು ಹೈಕಮಾಂಡ್ ಗುಲಾಮಗಿರಿಗಾಗಿ ಪರಭಾಷಿಕರನ್ನು ಮತಕ್ಕಾಗಿ ಓಲೈಕೆ… pic.twitter.com/hMPXJatXFe
— Janata Dal Secular (@JanataDal_S) November 3, 2025
ಕನ್ನಡಿಗರ ಹಿತ ಕಾಪಾಡುವ ಬದಲು ಹೈಕಮಾಂಡ್ ಗುಲಾಮಗಿರಿಗಾಗಿ ಪರಭಾಷಿಕರನ್ನು ಮತಕ್ಕಾಗಿ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದೀರಿ. ನಮ್ಮ ರಾಜ್ಯದ ಹೆಚ್ಚು ಪಾಲು ಬಿಹಾರಕ್ಕೆ ಹೋಗುತ್ತೆ, ಅಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣ ಬಿಹಾರಿಗಳು ಕರ್ನಾಟಕಕ್ಕೆ ಬಂದು ಕನ್ನಡಿಗರ ಮಕ್ಕಳ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದರು. ಆದರೆ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ರಾಜ್ಯದಲ್ಲಿರುವ ಬಿಹಾರಿ ಮತದಾರರಿಗೆ ಬೆಂಗಳೂರಿನಲ್ಲಿ ನಿವೇಶನ, ಸೈಟು ಕೊಡುವುದಾಗಿ ಆಮಿಷ ಒಡ್ಡಲಾಗಿದೆ. ಇದು ಕಾಂಗ್ರೆಸ್ನ ಓಲೈಕೆ ರಾಜಕಾರಣ. ಕನ್ನಡಿಗರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್ಸಿನ ಜಾತ್ರೆ ನಡೆಯುತ್ತಿದ್ದು, ಯಾರದೋ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಇದನ್ನೂ ಓದಿ: ಬಿಹಾರ ಮುಖಂಡರು ಡಿಕೆಶಿ ಸಿಎಂ ಆಗಲಿ ಎಂದ ಬಗ್ಗೆ ಸಿದ್ದರಾಮಯ್ಯ ಏನಂದ್ರು?
ಬಿಹಾರ ಚುನಾವಣೆ ಹಿನ್ನಲೆ ಮತದಾನಕ್ಕೆ ರಾಜ್ಯದಿಂದ ತೆರಳಲಿರುವ ಅಲ್ಲಿನ ಮತದಾರರಿಗೆ ಮೂರು ದಿನಗಳ ಕಾಲ ರಜೆ ನೀಡುವಂತೆ ಸಂಸ್ಥೆ, ಗುತ್ತಿಗೆದಾರರು ಹಾಗೂ ಕ್ರೆಡಾಯ್ ಸಂಸ್ಥೆಗೆ ಸೂಚಿಸುತ್ತೇನೆ. ಅಲ್ಲದೆ, ಬಿಹಾರದವರು ಇಲ್ಲದಿದ್ದರೆ ಬೆಂಗಳೂರಲ್ಲಿ ಅತ್ಯುತ್ತಮ ಕಟ್ಟಡಗಳನ್ನು ನಿರ್ಮಿಸಲು ಆಗುತ್ತಿರಲಿಲ್ಲ. ಹೀಗಾಗಿ ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ನಿವೇಶನ ಕೊಡಲಾಗುವುದು ಎಂಬ ಆಶ್ವಾಸನೆಯನ್ನ ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.