ಚಿತ್ತಾಪುರ ಪಥಸಂಚಲನ: ಶಾಂತಿ ಸಭೆಗೆ ಮುಹೂರ್ತ ಫಿಕ್ಸ್, RSS ಸೇರಿ 10 ಸಂಘಟನೆಗಳಿಗೆ ನೋಟಿಸ್!

ಕರ್ನಾಟಕದ ನಾನಾ ಭಾಗದಲ್ಲಿ ಆರ್​​​ಎಸ್​​ಎಸ್​​ ಪಥಸಂಚಲನ ನಡೆಯುತ್ತಿದ್ದರೆ, ಇತ್ತ ಚಿತ್ತಾಪುರದಲ್ಲಿ ಮಾತ್ರ ಕಗ್ಗಂಟಾಗಿಯೇ ಉಳಿದಿದೆ. ಸದ್ಯ ಹೈಕೋರ್ಟ್ ಸೂಚನೆ ಮೇರೆಗೆ ಜಿಲ್ಲಾಡಳಿತ ಅಕ್ಟೋಬರ್ 28ರಂದು ಶಾಂತಿ ಸಭೆಗೆ ಮುಂದಾಗಿದೆ. ಆ ಮೂಲಕ ಶಾಂತಿ ಸಭೆಗೆ ಬರುವಂತೆ RSS, ಭೀಮ್​ ಆರ್ಮಿ ಸೇರಿದಂತೆ 10 ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಚಿತ್ತಾಪುರ ಪಥಸಂಚಲನ: ಶಾಂತಿ ಸಭೆಗೆ ಮುಹೂರ್ತ ಫಿಕ್ಸ್, RSS ಸೇರಿ 10 ಸಂಘಟನೆಗಳಿಗೆ ನೋಟಿಸ್!
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Oct 26, 2025 | 4:47 PM

ಕಲಬುರಗಿ, ಅಕ್ಟೋಬರ್​​ 26: ಈಗಾಗಲೇ ಆರ್​​​ಎಸ್​​ಎಸ್ (RSS) ಪಥಸಂಚಲನ ಫೈಟ್ ಹೈಕೋರ್ಟ್ ಕಟಕಟೆಯಲ್ಲಿದೆ. ಕಲಬುರಗಿ ಜಿಲ್ಲಾಡಳಿತಕ್ಕೆ ಅಕ್ಟೋಬರ್ 28ರಂದು ಶಾಂತಿ ಸಭೆ (Peace Meet) ನಡೆಸಿ ವರದಿ ನೀಡುವಂತೆ ಕೋರ್ಟ್ ಸೂಚಿಸಿದೆ. ಇದರ ಬೆನ್ನಲ್ಲೇ ಆರ್​​​ಎಸ್​​ಎಸ್​​, ಭೀಮ್ ಆರ್ಮಿ ಸೇರಿ 10 ಸಂಘಟನೆಗಳಿಗೆ ಜಿಲ್ಲಾಡಳಿತ ನೋಟಿಸ್ ಜಾರಿಗೊಳಿಸಿದೆ.

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಸಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಜಿಲ್ಲಾಡಳಿತ ಅಕ್ಟೋಬರ್ 28ರಂದು ಬೆಳಗ್ಗೆ 11.30ಕ್ಕೆ ಶಾಂತಿ ಸಭೆಗೆ ಆಹ್ವಾನಿಸಿದೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ನಡೆಯಲಿದ್ದು, ಪ್ರತಿ ಸಂಘಟನೆಯಿಂದ ಮೂವರು ಸದಸ್ಯರು ಸಭೆಗೆ ಹಾಜರಾಗಿ ಲಿಖಿತ ಹೇಳಿಕೆ ಸಲ್ಲಿಸುವಂತೆ ಡಿಸಿ ಸೂಚಿಸಿದ್ದಾರೆ.

ಇದನ್ನೂ ಓದಿ: ಚಿತ್ತಾಪುರದಲ್ಲಿ ಪಥಸಂಚಲನ: ಸರ್ಕಾರಕ್ಕೆ ಕೋರ್ಟ್ ಮಹತ್ವದ ಸೂಚನೆ, RSSಗೆ ಕೊಂಚ ನಿರಾಸೆ

ಸದ್ಯ ರಾಜ್ಯದಲ್ಲಿ ಆರ್​​ಎಸ್​​ಎಸ್​ ಸಂಘರ್ಷ ತಾರಕಕ್ಕೇರಿದೆ. ರಾಜ್ಯದ ನಾನಾ ಭಾಗದಲ್ಲಿ ಆರ್​​ಎಸ್​​ಎಸ್​ ಪಥಸಂಚಲನ ನಡೆಯುತ್ತಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಮಾತ್ರ ಕಗ್ಗಂಟಾಗಿಯೇ ಉಳಿದಿದೆ. ದಿನಕ್ಕೊಂದು ಡ್ರಾಮಾ ನಡೆಯುತ್ತಿದೆ. ಸದ್ಯ ಪಥಸಂಚಲನ ಮಾಡುವ ವಿಚಾರ ಕೋರ್ಟ್​ ಕಟಕಟೆಯಲ್ಲಿದೆ.

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ 11 ಸಂಘಟನೆಗಳು ಅರ್ಜಿ

ಇತ್ತ ಆರ್​​​ಎಸ್​​ಎಸ್​ ಮಾತ್ರ ಚಿತ್ತಾಪುರದಲ್ಲಿ ಪಥಸಂಚಲನ ಮಾಡೇ ಮಾಡ್ತೀವಿ ಅಂತಾ ಸೆಡ್ಡು ಹೊಡೆದಿದೆ. ನಿನ್ನೆಯಷ್ಟೇ ಕಲ್ಲಡ್ಕ ಪ್ರಭಾಕರ್ ಭಟ್ ಅಬ್ಬರಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಸಚಿವ ಪ್ರಿಯಾಂಕ್ ಖರ್ಗೆ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಮಾಡಲಿ ನೋಡೋಣ. ಚಿತ್ತಾಪುರದಲ್ಲಿ ಪಥಸಂಚಲನಕ್ಕೆ 11 ಸಂಘಟನೆಗಳು ಅರ್ಜಿ ಹಾಕಿವೆ, ಕೋರ್ಟ್​ ತೀರ್ಮಾನ ಮಾಡುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ತ್ರಿಕೋನ ಸ್ಪರ್ಧೆ: ಆರ್​ಎಸ್ಎಸ್, ಭೀಮ ಆರ್ಮಿ ಬಳಿಕ ಮತ್ತೊಂದು ಸಂಘಟನೆ ಎಂಟ್ರಿ

ಇನ್ನೂ ಆರ್‌ಎಸ್‌ಎಸ್ ದೇವರಿಗಿಂತ ದೊಡ್ಡದಾಗಿ ಬಿಟ್ಟಿದಿಯಾ ಎಂದಿರುವ ಪ್ರಿಯಾಂಕ್ ಖರ್ಗೆ,
ಮತ್ತೆ ದೇಣಿಗೆ ಎಲ್ಲಿಂದ ಬರುತ್ತೆ ಅಂತಾ ಪ್ರಶ್ನಿಸಿದ್ದಾರೆ. ಆ ಮೂಲಕ ಕಲಬುರಗಿ ಅಭಿವೃದ್ಧಿ ಬಗ್ಗೆ ಪ್ರಶ್ನೆ ಎತ್ತಿದ್ದ ಬಿಜೆಪಿಗೂ, ಕಲಬುರಗಿ ನೋಡಿದ್ದಾರಾ ಅಂತಾ ಕುಟುಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.