AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಕಂಪದ ಆಧಾರದ ಮೇಲೆ ಎರಡೇ ದಿನದಲ್ಲಿ ಮಹಿಳೆಗೆ ನೌಕರಿ; ಮಾನವೀಯತೆ ಮೆರೆದ ಕಲಬುರಗಿ ಡಿಸಿಗೆ ಜನರ ಮೆಚ್ಚುಗೆ

ತನ್ನ ಗಂಡ ಮೃತರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಕೇವಲ ಎರಡೇ ದಿನದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್. ವಿ. ಗುರುಕರ್ ಉದ್ಯೋಗ ನೀಡಿ, ಸಂತ್ರಸ್ತ ಕುಟುಂಬಕ್ಕೆ ನೆರವಾಗಿದ್ದಾರೆ.

ಅನುಕಂಪದ ಆಧಾರದ ಮೇಲೆ ಎರಡೇ ದಿನದಲ್ಲಿ ಮಹಿಳೆಗೆ ನೌಕರಿ; ಮಾನವೀಯತೆ ಮೆರೆದ ಕಲಬುರಗಿ ಡಿಸಿಗೆ ಜನರ ಮೆಚ್ಚುಗೆ
ಕಲಬುರಗಿ ಜಿಲ್ಲಾಧಿಕಾರಿ ಯಶವಂತ್. ವಿ. ಗುರುಕರ್
TV9 Web
| Edited By: |

Updated on: Jan 29, 2022 | 9:45 AM

Share

ಕಲಬುರಗಿ:  ಸಣ್ಣ ಕೆಲಸಕ್ಕೂ‌ ಸರ್ಕಾರಿ ಕಚೇರಿಗೆ (Government office) ಹತ್ತಾರು ಬಾರಿ ಅಲೆದಾಡಿದರು ಕೆಲಸವಾಗದೇ ಅನೇಕರು ಪರದಾಡುವ ಘಟನೆಗಳು ನಡೆಯುತ್ತಿವೆ. ಆದರೆ ಕಲಬುರಗಿ ಜಿಲ್ಲಾಧಿಕಾರಿ(District administration) ನಡೆ ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ತನ್ನ ಗಂಡ(Husband) ಮೃತರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಕೇವಲ ಎರಡೇ ದಿನದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್. ವಿ. ಗುರುಕರ್ ಉದ್ಯೋಗ ನೀಡಿ, ಸಂತ್ರಸ್ತ ಕುಟುಂಬಕ್ಕೆ ನೆರವಾಗಿದ್ದಾರೆ. ಆ ಮೂಲಕ  ಕಲಬುರಗಿ ತಾಲೂಕಿನ ಕುಸನೂರು ಗ್ರಾಮದ ಶ್ರೀಮತಿ ಶಿವಲಿಂಗಮ್ಮ ಗಂಡ ದಿ. ಮಾಳಿಂಗರಾಯ ಅವರ ನೌಕರಿ ಪಡೆದಿದ್ದಾರೆ.

ಘಟನೆ ವಿವರ

ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಯಶವಂತ ಗುರಿಕಾರ್ ಇದೇ ಜನವರಿ 25 ರಂದು ಅಧಿಕಾರವಹಿಸಿಕೊಂಡಿದ್ದರು. ಅಂದೇ ತಮ್ಮ ಕಚೇರಿ ಮುಂದೆ ಮಹಿಳೆಯೋರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ಕಾದು ಕುಳಿತಿರುವುದನ್ನು ಕಂಡಿದ್ದರು. ಸ್ವತಃ ಜಿಲ್ಲಾಧಿಕಾರಿಗಳೇ ಮಹಿಳೆಯ ಬಳಿ ತೆರಳಿ, ಏನು ನಿಮ್ಮ ಸಮಸ್ಯೆ, ಯಾಕಾಗಿ ಕುಳಿತಿದ್ದೀರಿ ಎಂದು ವಿಚಾರಿಸಿದ್ದರು. ಆಗ ಮಹಿಳೆ ತನ್ನ ಸಮಸ್ಯೆಯನ್ನು ಜಿಲ್ಲಾಧಿಕಾರಿ ಮುಂದೆ ಹೇಳಿದ್ದರು.

ತನ್ನ ಪತಿ ಆಳಂದ ತಾಲ್ಲೂಕಿನ ಖಜೂರಿ ನಾಡ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಕರ್ತವ್ಯದಲ್ಲಿದ್ದಾಗ ದಿನಾಂಕ 16-03-2021ರಂದು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದರು. ಹೀಗಾಗಿ ನಾನು ಅನುಕಂಪ ಆಧಾರದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ಆದರೆ ಈವರೆಗೆ ಅನುಕಂಪದ ಆಧಾರದ ಮೇಲೆ ತನಗೆ ಕೆಲಸ ಸಿಕ್ಕಿಲ್ಲ ಎಂದು ಮಹಿಳೆ ತನ್ನ ನೋವನ್ನು ತೋಡಿಕೊಂಡಿದ್ದರು. ಆಗ ಕೂಡಲೇ ಜಿಲ್ಲಾಧಿಕಾರಿಗಳು, ಈ ಮಹಿಳೆಗೆ 2 ದಿನದಲ್ಲಿ ನೌಕರಿ ಆದೇಶ ನೀಡಲು ಕ್ರಮವಹಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅಧಿಕಾರಿಗಳು ಕಡತಗಳನ್ನು  ಪರಿಶೀಲಿಸಿ, ಮಹಿಳೆಯ ಅರ್ಜಿಯನ್ನು ವಿಲೇವಾರಿ ಮಾಡಿದ್ದಾರೆ.

ಇಂದು ಮಹಿಳೆ ಕೋರಿದ ಸ್ಥಳವಾದ ಕಲಬುರಗಿ ತಹಸೀಲ್ದಾರ ಕಚೇರಿಯಲ್ಲಿ ಖಾಲಿಯಿದ್ದ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೇಮಕಾತಿಯ ಆದೇಶ ಪತ್ರವನ್ನು  ಜಿಲ್ಲಾಧಿಕಾರಿ ಯಶವಂತ್  ಗುರುಕರ್ ಮಹಿಳೆಗೆ ನೀಡಿದರು.  ಆ ಮೂಲಕ  ಕಲಬುರಗಿ ಜಿಲ್ಲಾಧಿಕಾರಿ ಮಾನವೀಯತೆ ಮೆರೆದಿದ್ದಾರೆ. ಸಾಮಾನ್ಯ ಜನರ ಸಮಸ್ಯೆಗೆ ಅಧಿಕಾರಿಗಳು ಕೂಡಲೇ ಸ್ಪಂಧಿಸಬೇಕು ಎಂದು ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿಗಳ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ: ಎರಡು ವರ್ಷದಿಂದ ಸಂಬಳವಿಲ್ಲ; ಗಣರಾಜ್ಯೋತ್ಸವ ವೇಳೆ ಕಣ್ಣೀರು ಹಾಕಿದ್ದ ಕಂಪ್ಯೂಟರ್ ಆಪರೇಟರ್​ಗೆ ಸಿಕ್ತು 1 ತಿಂಗಳ ಸಂಬಳ

ನೌಕರಿ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ವಂಚನೆ! ಹೊಸದುರ್ಗ ಪೊಲೀಸರಿಂದ ಐವರು ಅರೆಸ್ಟ್