PSI ಕಿಂಗ್ ಪಿನ್ RD ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಭೇಟಿ: ಜಾಧವ್ ವಿರುದ್ಧ ಭುಗಿಲೆದ್ದ ಆಕ್ರೋಶ

| Updated By: ರಮೇಶ್ ಬಿ. ಜವಳಗೇರಾ

Updated on: Apr 17, 2024 | 5:47 PM

ಪಿಎಎಸ್​ ನೇಮಕಾತಿ ಹುದ್ದೆ ಪರೀಕ್ಷೆಯ ಕಿಂಗ್ ಪಿನ್​ ಆರ್​ಡಿ ಪಾಟೀಲ್​ ರಾಜ್ಯದ ಸಾವಿರಾರು ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟವ. ಕಳೆದ ಬಿಜೆಪಿ ಸರ್ಕಾರವಧಿಯಲ್ಲಿ ನಡೆಸಿದ್ದ ಈ ಪಿಎಸ್​ಐ ಹಗರಣ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಅಲ್ಲದೇ ಪ್ರಮುಖ ಆರೋಪಿ ಆರ್​ಡಿ ಪಾಟೀಲ್ ಯಾವ ಪಕ್ಷಕ್ಕೆ ಸೇರಿದವನು ಎನ್ನುವ ಬಗ್ಗೆ ಭಾರೀ ಪರ-ವಿರೋಧಗಳು ವ್ಯಕ್ತವಾಗಿದ್ದವು. ಬಿಜೆಪಿಯವರು ಕಾಂಗ್ರೆಸ್​​ ಮೇಲೆ ಆರೋಪ ಮಾಡಿದ್ರೆ, ಕಾಂಗ್ರೆಸ್​ನವರು ಬಿಜೆಪಿ ಮೇಲೆ ಮುಗಿಬಿದ್ದಿದ್ದರು. ಇಷ್ಟಾಗಿದ್ದರೂ ಇದೀಗ ಕಲಬುರಗಿ ಬಿಜೆಪಿ ಅಭ್ಯರ್ಥಿ , ಆರ್​ಡಿ ಪಾಟೀಲ್​ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ಕೋರಿದ್ದು, ಇದೀಗ ಕಲಬುರಗಿಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

PSI ಕಿಂಗ್ ಪಿನ್ RD ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಭೇಟಿ: ಜಾಧವ್ ವಿರುದ್ಧ ಭುಗಿಲೆದ್ದ ಆಕ್ರೋಶ
ಆರ್​ಡಿ ಪಾಟೀಲ್​ ನಿವಾಸದಲ್ಲಿ ಉಮೇಶ್ ಜಾಧವ್
Follow us on

ಕಲಬುರಗಿ, (ಏಪ್ರಿಲ್ 17) : ಇಡೀ ರಾಜ್ಯದ ಯುವಕರ ಭವಿಷ್ಯವನ್ನೇ ಹಾಳು ಮಾಡಿದ್ದ ಕಿಡಿಗೇಡಿ ಪಿ.ಎಸ್.ಐ ಹಗರಣದ ಕಿಂಗ್ ಪಿನ್ (PSI exam scam kingpin) ಆರ್.ಡಿ ಪಾಟೀಲ್ (RD Patil) ನಿವಾಸಕ್ಕೆ ಕಲಬುರಗಿ(Kalaburagi ) ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್(Umesh Jadhav) ಭೇಟಿ ನೀಡಿ ಊಟೋಪಚಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಕಲಬುರಗಿಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. PSI ನೇಮಕಾತಿಯಲ್ಲಿ ಹಗರಣ ನಡೆಸಿ, ಪರೀಕ್ಷೆಯಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಿ 58,000ಕ್ಕೂ ಹೆಚ್ಚು ಯುವಕರ ಭವಿಷ್ಯದ ಪಾಲಿಗೆ ಶಾಪವಾಗಿ ಪರಿಣಮಿಸಿ RD ಪಾಟೀಲ್ ಈಗ ಜೈಲುಪಾಲಾಗಿದ್ದಾನೆ. ಪಿಎಎಸ್​ ಪರೀಕ್ಷೆ ಮಾತ್ರವಲ್ಲ ವಿವಿಧ ಬೋರ್ಡ್​ ಪರೀಕ್ಷೆಗಳಲ್ಲೂ ಈ ಆರ್​ಡಿ ಪಾಟೀಲ್​ ಕಿಂಗ್ ಪಿನ್ ಆಗಿದ್ದಾನೆ. ಆದ್ರೆ, ಇದೀಗ RD ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತೆರಳಿ ಮತಯಾಚಿಸಿ, ಬೆಂಬಲ ಕೇಳಿರುವುದು ಅವರಿಗೆ ತಿರುಗುಬಾಣವಾಗಿದೆ.

ಇತ್ತೀಚಿಗೆ ನಡೆದಿದ್ದ PSI ಮರುಪರೀಕ್ಷೆ ವೇಳೆ ಕೂಡ ಅಕ್ರಮ ಮಾಡಲು ಯತ್ನಿಸಿ ಸಿಕ್ಕಿಬಿದ್ದು ಜೈಲುಗಂಬಿ ಎಣಿಸುತ್ತಿರುವ RD ಪಾಟೀಲ್ ಮನೆಗೆ ಉಮೇಶ್ ಜಾಧವ್ ಭೇಟಿಯಾರುವುದನ್ನು ಸಮರ್ಥಸಿಕೊಳ್ಳುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೂ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಭೇಟಿ ಮೂಲಕ ಜನರಿಗೆ ಯಾವ ರೀತಿಯ ಸಂದೇಶ ನೀಡಲು ಬಿಜೆಪಿ ಸಂಸದ ಮುಂದಾಗಿದ್ದಾರೆ? ಎಂಬ ಪ್ರಶ್ನೆಗೆ ಜಿಲ್ಲೆಯ ಯಾವುದೇ ಬಿಜೆಪಿ ನಾಯಕರ ಬಳಿಯೂ ಉತ್ತರವಿಲ್ಲದಾಗಿದೆ.

ಇದನ್ನೂ ಓದಿ: ಪರೀಕ್ಷಾ ಅಕ್ರಮಗಳ ಕಿಂಗ್ ಪಿನ್ ಆರ್​ಡಿ ಪಾಟೀಲ್​ ವಿರುದ್ಧ ಕೋಕಾ ಅಸ್ತ್ರ, ಏನಿದು ಕೋಕಾ ಕಾಯ್ದೆ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಘಜಲಪುರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದ RD ಪಾಟೀಲ್ ನನ್ನು ಉಮೇಶ್ ಜಾಧವ್ ತನ್ನ ಚುನಾವಣೆಯಲ್ಲಿ ಸಹಕರಿಸುವಂತೆ ಕೇಳಿಕೊಂಡಿದ್ದಾರೆ. ಮೊದಲೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಉಮೇಶ್ ಜಾಧವ್ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.  ಇದು ಜಿಲ್ಲೆಯ ಜನರಲ್ಲಿ ಬಿಜೆಪಿ ಕುರಿತು ಈಗಾಗಲೇ ಮೂಡಿದ್ದ ತಿರಸ್ಕಾರ ಮನೋಭಾವವನ್ನು ದುಪ್ಪಟ್ಟು ಮಾಡಿದೆ.

ಕಳೆದ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಈ ಪಿಎಸ್​ಐ ನೇಮಕಾತಿ ಹಗರಣ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಬಿಜೆಪಿ-ಕಾಂಗ್ರೆಸ್ ಮಧ್ಯ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಈ ಒಂದು ಹಗರಣವನ್ನೇ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಹೀಗಾಗಿ ಬಿಜೆಪಿ ಹೀನಾಯ ಸೋಲಿಗೆ ಇದೊಂದು ಪ್ರಮುಖ ಕಾರಣವಾಗಿತ್ತು. ಹೀಗಿರುವಾಗ ಉಮೇಶ್ ಜಾಧವ್, ರಾಜ್ಯದ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದವನ ನಿವಾಸಕ್ಕೆ ಭೇಟಿ ನೀಡಿ ಸಹಕಾರ ಕೇಳಿರುವುದ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ