ಗೊಂದಲದಲ್ಲಿ ಸಿದ್ದರಾಮಯ್ಯ, ಸರ್ಕಾರ ಬಂದು ಮೂರು ತಿಂಗಳಾದರೂ ನೇಮಕವಾಗದ ಕೆಕೆಆರ್​ಡಿಬಿ ಅಧ್ಯಕ್ಷ

| Updated By: Rakesh Nayak Manchi

Updated on: Aug 08, 2023 | 5:16 PM

ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಹೆಚ್ಚು ಕಡಿಮೆ ಮೂರು ತಿಂಗಳಾಗುತ್ತಾ ಬಂದಿದೆ. ಆದರೆ ಕಲಬುರಗಿ ನಗರದಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಲು ಹೊಸ ಸರ್ಕಾರಕ್ಕೆ ಆಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗೊಂದಲದ ಗೂಡಿನಲ್ಲಿ ಸಿಲುಕಿದ್ದಾರೆ.

ಗೊಂದಲದಲ್ಲಿ ಸಿದ್ದರಾಮಯ್ಯ, ಸರ್ಕಾರ ಬಂದು ಮೂರು ತಿಂಗಳಾದರೂ ನೇಮಕವಾಗದ ಕೆಕೆಆರ್​ಡಿಬಿ ಅಧ್ಯಕ್ಷ
ಕೆಕೆಆರ್​ಡಿಬಿ ಅಧ್ಯಕ್ಷರನ್ನು ನೇಮಕ ಮಾಡದ ಕರ್ನಾಟಕ ಕಾಂಗ್ರೆಸ್ ಸರ್ಕಾರ
Image Credit source: FILE PHOTO
Follow us on

ಕಲಬುರಗಿ, ಆಗಸ್ಟ್ 8: ಗ್ಯಾರಂಟಿ ಯೋಜನೆಗಳನ್ನು ಒಂದೋದಾಗಿ ಜಾರಿಗೊಳಿಸುತ್ತಿರುವ ಕಾಂಗ್ರೆಸ್ (Congress) ಸರ್ಕಾರ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ (KKRDB) ಅಧ್ಯಕ್ಷರನ್ನಾಗಿ ಸಚಿವರನ್ನು ನೇಮಿಸುವ ಆಶ್ವಾಸನೆಯನ್ನು ಮೂರು ತಿಂಗಳಾದರೂ ಈಡೇಸಿಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರೇ ಗೊಂದಲದ ಗೂಡಿನಲ್ಲಿ ಸಿಲುಕಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದ ಪ್ರದೇಶವಾಗಿದ್ದು, ಈ ಬಾಗದ ಸರ್ವತೋಮುಖ ಅಭಿವೃದ್ದಿಗಾಗಿ 371 ಜೆ ವಿಧಿಯಡಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಜೊತೆಗೆ, ಈ ಬಾಗದ ಸರ್ವಾಂಗೀಣ ಅಭಿವೃದ್ದಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ರಚನೆಯಾಗಿದೆ. 2013 ರಲ್ಲಿ ಸಿದ್ದರಾಮಯ್ಯನವರೇ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೇ ಮಂಡಳಿಯ ರಚನೆಯಾಗಿತ್ತು. ಆದರೆ ಇದೀಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕದಲ್ಲಿ ಗೊಂದಲಕ್ಕೆ ಸಿಲುಕಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಹೆಚ್ಚು ಕಡಿಮೆ ಮೂರು ತಿಂಗಳಾಗುತ್ತಾ ಬಂದಿದೆ. ಆದರೆ ಕಲಬುರಗಿ ನಗರದಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಲು ಹೊಸ ಸರ್ಕಾರಕ್ಕೆ ಆಗುತ್ತಿಲ್ಲ. ಐದು ಸಾವಿರ ಕೋಟಿ ಅನುಧಾನದ ಮಂಡಳಿಗೆ ಅಧ್ಯಕ್ಷರು ಇಲ್ಲದೇ ಇರುವುದರಿಂದ ಅಧಿಕಾರಿಗಳ ಮೇಲೆಯೇ ಮಂಡಳಿಯ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಮಂಡಳಿಯ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡುವುದು ಎಂಬುದೇ ಗೊಂದಲಕ್ಕೆ ಕಾರಣವಾಗಿದೆ.

ಅಧ್ಯಕ್ಷರ ಆಯ್ಕೆ ನಿಯಮ ಬದಲಾಯಿಸಿದ್ದ ಬಿಜೆಪಿ ಸರ್ಕಾರ

ಮಂಡಳಿ ಆರಂಭವಾದಾಗ ಮಂಡಳಿಯ ಅಧ್ಯಕ್ಷ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯವರು ಯಾರು ಸಂಪುಟದಲ್ಲಿ ಸಚಿವರು ಆಗಿರುತ್ತಾರೋ, ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಅನ್ನೋ ನಿಯಮವನ್ನು ರೂಪಿಸಲಾಗಿತ್ತು. ಆದರೆ ಕಳೆದ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ, ನಿಯಮವನ್ನು ಬದಲಾಯಿಸಿ, ಶಾಸಕರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಬೇಡಿಕೆ ಏನು? ಸಿಎಂ ಸಿದ್ದರಾಮಯ್ಯ ನೀಡಿರುವ ಭರವಸೆ ಏನು? ಇನ್ ಸೈಡ್ ಸುದ್ದಿ ನೋಡಿ

ಮಂಡಳಿಯನ್ನು ಡಿಗ್ರೇಡ್ ಮಾಡುತ್ತಿದ್ದಾರೆ. ಶಾಸಕರು ಅಧ್ಯಕ್ಷರಾದರೆ ಮಂಡಳಿಯ ಕೆಲಸಗಳು ಸರಿಯಾಗಿ ಆಗಲ್ಲ. ಸಚಿವರನ್ನೇ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕು ಅಂತ ಆಗ್ರಹಿಸಿದ್ದರು. ಜೊತೆಗೆ ತಮ್ಮ ಸರ್ಕಾರ ಬಂದರೆ ಮತ್ತೆ ಮಂಡಳಿಯ ಅದ್ಯಕ್ಷ ಸ್ಥಾನವನ್ನು ಅಪ್​​ಗ್ರೇಡ್ ಮಾಡುತ್ತೇವೆ, ಸಚಿವರನ್ನೇ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತೇವೆ ಅಂತ ಕೈ ನಾಯಕರು ಭರವಸೆ ನೀಡಿದ್ದರು. ಆದರೆ ಸರ್ಕಾರ ರಚನೆಯಾಗಿ ಮೂರು ತಿಂಗಳಾಗುತ್ತಾ ಬಂದರು ಮಂಡಳಿಯ ಅಧ್ಯಕ್ಷರ ನೇಮಕ ಇನ್ನು ಆಗಿಲ್ಲ.

ಗೊಂದಲದಲ್ಲಿ ಸಿದ್ದರಾಮಯ್ಯ

ಮಂಡಳಿಯ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಸ್ವತ ಸಿಎಂ ಗೊಂದಲಕ್ಕೆ ಸಿಲುಕಿದ್ದಾರೆ ಅಂತ ಹೇಳಲಾಗುತ್ತಿದೆ. ಕೆಲ ಶಾಸಕರು ಮಂತ್ರಿ ಸ್ಥಾನ ಸಿಗದೇ ಇರುವುದರಿಂದ ಅಸಮಾಧಾನಗೊಂಡಿದ್ದು, ಮಂತ್ರಿ ಸ್ಥಾನ ಸಿಗದೇ ಇರುವ ಒಬ್ಬರಿಗೆ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿದರೆ ಸೂಕ್ತ ಅನ್ನೋ ಚರ್ಚೆ ಒಂದಡೆ ನಡೆಯುತ್ತಿದೆಯಂತೆ.

ಈ ಹಿಂದೆ ಬಿಜೆಪಿ ಸರ್ಕಾರ ಕೆಲವರನ್ನು ಸಮಾಧಾನ ಪಡಿಸಲು ಶಾಸಕರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿದಂತೆ ನಾವು ಮಾಡಿದರಾಯ್ತು ಅನ್ನು ಚರ್ಚೆ ಆರಂಭವಾಗಿದೆ. ಇನ್ನೊಂದಡೆ ಯಾವುದೇ ಕಾರಣಕ್ಕೂ ಶಾಸಕರು ಮಂಡಳಿಯ ಅಧ್ಯಕ್ಷರಾಗುವುದು ಬೇಡ, ನಾವು ನೀಡಿದ ಭರವಸೆಯಂತೆ, ಸಚಿವರೇ ಮಂಡಳಿಯ ಅಧ್ಯಕ್ಷರಾಗಿ ನೇಮಕವಾಗಬೇಕು ಅಂತ ಅನೇಕ ಕೈ ನಾಯಕರು ಪಟ್ಟು ಹಿಡದಿದ್ದಾರಂತೆ.

ಹೀಗಾಗಿ ಯಾರಿಗೆ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕು ಅನ್ನೋ ಗೊಂದಲದಲ್ಲಿ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರು ಇದ್ದಾರಂತೆ. ಇದೇ ಕಾರಣಕ್ಕೆ ಮಂಡಳಿಯ ಅಧ್ಯಕ್ಷರ ನೇಮಕಕ್ಕೆ ಗ್ರಹಣ ಹಿಡಿದಂತಾಗಿದೆ.

ಇನ್ನು ಮಂಡಳಿಯ ಅಧ್ಯಕ್ಷರ ಆಯ್ಕೆಯನ್ನು ಸಿಎಂ ಪರಾಮಾಧಿಕಾರಕ್ಕೆ ಬಿಡಲಾಗಿದೆ. ಹೀಗಾಗಿ ಮಂಡಳಿಗೆ ಯಾರನ್ನು ಅಧ್ಯಕ್ಷರನ್ನು ಮಾಡಬೇಕು ಅನ್ನೋ ಗೊಂದಲದಲ್ಲಿ ಸಿದ್ದರಾಮಯ್ಯ ಅವರು ಇರುವುದರಿಂದ ಅಧ್ಯಕ್ಷರ ಆಯ್ಕೆಯಾಗುತ್ತಿಲ್ಲ. ಆದರೆ ಐದು ಸಾವಿರ ಕೋಟಿ ಅನುಧಾನದ ಮಂಡಳಿಗೆ ಆದಷ್ಟು ಬೇಗನೆ ಅಧ್ಯಕ್ಷರ ನೇಮಕ ಮಾಡಿ, ಮಂಡಳಿಯ ಕಾರ್ಯಚಟುವಟಿಕೆಗಳಿಗೆ ಹೆಚ್ಚಿನ ವೇಗವನ್ನು ನೀಡಬೇಕು ಅನ್ನೋದು ಈ ಭಾಗದ ಜನರ ಆಗ್ರಹವಾಗಿದೆ.

ನಾವು ಅಧಿಕಾರಕ್ಕೆ ಬಂದರೆ ಮಂಡಳಿಗೆ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತೇವೆ ಅಂತ ವಾಗ್ದಾನ ಮಾಡಿದ್ದೆವು. ಇದೀಗ ಅಧ್ಯಕ್ಷರ ನೇಮಕವನ್ನು ಮುಖ್ಯಮಂತ್ರಿ ಅವರ ಪರಮಾಧಿಕಾರಕ್ಕೆ ನೀಡಲಾಗಿದೆ. ಅವರು ಈ ಭಾಗದ ಸರ್ವತೋಮುಖ ಅಭಿವೃದ್ದಿಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಸಚಿವರೇ ಮಂಡಳಿಯ ಅಧ್ಯಕ್ಷರಾದರೆ ಮಂಡಳಿಯ ಕೆಲಸ ಕಾರ್ಯಗಳಿಗೆ ವೇಗ ಸಿಗುತ್ತದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ