Karnataka Budget 2025: ದಿನಾಂಕ, ಸಮಯ ಮತ್ತು ಎಲ್ಲಿ ಲೈವ್ ವೀಕ್ಷಿಸಬೇಕು?
ಕರ್ನಾಟಕ ಬಜೆಟ್ 2025 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್ ಹಾಗೂ ಮುಖ್ಯಮಂತ್ರಿ ಆಗಿ 9ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದಮಟ್ಟಿಗೆ ಅತ್ಯಧಿಕ ಬಜೆಟ್ ಮಂಡನೆ ಮಾಡಿರುವ ದಾಖಲೆಯನ್ನು ಈಗಾಗಲೇ ಹೊಂದಿರುವ ಸಿದ್ದರಾಮಯ್ಯ, ಆರ್ಥಿಕ ಇತಿಮಿತಿಗಳಲ್ಲಿ ಯಾವ ರೀತಿಯ ಬಜೆಟ್ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಹಾಗಾದ್ರೆ, ಬಜೆಟ್ ಯಾವಾಗ? ಎಲ್ಲಿ ಲೈವ್ ವೀಕ್ಷಣೆ ಮಾಡಬಹುದು? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, (ಮಾರ್ಚ್ 02) : ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನ(Karnataka Budget Session 2025) ಸೋಮವಾರದಿಂದ (ಮಾರ್ಚ್ 03) ಆರಂಭವಾಗಲಿದ್ದು, ಮಾರ್ಚ್ 07ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಬಜೆಟ್ ಮಂಡನೆ ಮಾಡಲಿದ್ದಾರೆ. ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್ ಹಾಗೂ ಮುಖ್ಯಮಂತ್ರಿ ಆಗಿ 9ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದಮಟ್ಟಿಗೆ ಅತ್ಯಧಿಕ ಬಜೆಟ್ ಮಂಡನೆ ಮಾಡಿರುವ ದಾಖಲೆಯನ್ನು ಈಗಾಗಲೇ ಹೊಂದಿರುವ ಸಿದ್ದರಾಮಯ್ಯ, ಗ್ಯಾರಂಟಿಗಳ ಒತ್ತಡದ ನಡುವೆ ಯಾವ ರೀತಿಯ ಬಜೆಟ್ ಮಂಡಿಸಲಿದ್ದಾರೆ. ಯಾವ ಹೊಸ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲ ಹುಟ್ಟಿಕೊಂಡಿವೆ.
ಬಜೆಟ್ ಲೈವ್ ವೀಕ್ಷಿಸುವುದೇಗೆ?
ಸಿಎಂ ಸಿದ್ದರಾಮಯ್ಯನವರು ಮಂಡಿಸುವ ಬಜೆಟ್ ಅನ್ನು ಸರ್ಕಾರದ ವಿಧಾನಸಭೆ ಅಧಿವೇಶನದ ವೆಬ್ ಪೋರ್ಟಲ್ನಲ್ಲಿ ಲೈವ್ ವೀಕ್ಷಿಸಬಹುದು. ದೂರದರ್ಶನ (ಡಿಡಿ ನ್ಯೂಸ್) ಹಾಗೂ ಇತರ ಸುದ್ದಿ ವಾಹಿನಿಗಳಲ್ಲಿ ಬಜೆಟ್ ಮಂಡನೆ ನೇರ ಪ್ರಸಾರ ವೀಕ್ಷಿಸಬಹುದು. ಇನ್ನು ಟಿವಿ9 ವಾಹಿನಿ ಹಾಗೂ ಟಿವಿ9 ಡಿಜಿಟಲ್ನಲ್ಲೂ ಬಜೆಟ್ನ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯಬಹುದು. ಇನ್ನು ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯನವರು ಸಚಿವ ಸಂಪುಟ ಸಭೆ ನಡೆಸಿ ಬಜೆಟ್ಗೆ ಅನುಮೋದನೆ ಪಡೆದುಕೊಳ್ಳಲಿದ್ದಾರೆ. ಬಳಿಕ ಸಿಎಂ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಬಾರಿ ಕುಳಿತುಕೊಂಡೇ ಸಿಎಂ ಬಜೆಟ್ ಮಂಡನೆ ಸಾಧ್ಯತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಅಧಿವೇಶನಕ್ಕೆ ಆಗಮಿಸುವ ಸಲುವಾಗಿ ವಿಧಾನಸೌಧದ ಪೂರ್ವ ದ್ವಾರದ ಬಳಿ ಪ್ರತ್ಯೇಕ ರ್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಬಜೆಟ್ ದಿನ ಕುಳಿತುಕೊಂಡೇ ಬಜೆಟ್ ಭಾಷಣ ಓದಲಿದ್ದಾರೆ. ಇನ್ನು ವಿಧಾನಮಂಡಲ ಅಧಿವೇಶನ ಮಾ.3 ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸುವ ಕುರಿತು ಚರ್ಚಿಸಲು ಮಾ.4 ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಸೋಮವಾರ ರಾಜ್ಯಪಾಲರ ಭಾಷಣದಲ್ಲೇ ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ಗ್ಯಾರಂಟಿಗಳನ್ನು ವಿರೋಧಿಸಿದವರೇ ಅವುಗಳನ್ನು ಅನುಸರಿಸಿರುವ ಬಗ್ಗೆ ರಾಜ್ಯಪಾಲರಿಂದ ಹೇಳಿಸುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಲು ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ರಾಜ್ಯಪಾಲರ ಭಾಷಣದ ನಂತರ ಕೆಲಕಾಲ ಮುಂದೂಡಿದ ತರುವಾಯ ಸದನ ಮತ್ತೆ ಆರಂಭವಾಗಲಿದೆ. ಸಂತಾಪ ಸೂಚನೆ ನಿರ್ಣಯ ಮಂಡಿಸಿ ಸಭೆ ಮುಂದೂಡಲಾಗುವುದು. ಮಂಗಳವಾರ, ಬುಧವಾರ ಹಾಗೂ ಗುರುವಾರ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು, ಮಾ.6 ರಂದು ಸರ್ಕಾರ ಉತ್ತರ ನೀಡಲಿದೆ.
ವಿವಿಧ ವಿಧೇಯಕ ಮಂಡನೆ
ಅಧಿವೇಶನದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ವಿಧೇಯಕ ಮಂಡಿಸಿ ಉಭಯ ಸದನಗಳ ಒಪ್ಪಿಗೆ ಪಡೆಯಬಹುದು. ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಕುರಿತ ಸುಗ್ರೀವಾಜ್ಞೆ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಈ ಸುಗ್ರೀವಾಜ್ಞೆ ಬಗ್ಗೆ ಅಧಿವೇಶನದಲ್ಲಿ ಯಾವ ನಿರ್ಧಾರ ಮಾಡಲಿದ್ದಾರೆ ಎಂಬುದು ಕಾದು ನೋಡಬೇಕಿದೆ.
ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜು
ಮಾ. 21ರವರೆಗೆ ನಡೆಯುವ ಅಧಿವೇಶನದ ಉದ್ದಕ್ಕೂ ಬಸ್ಸು, ಮೆಟ್ರೋ ದರ ಏರಿಕೆ, ವಿದ್ಯುತ್, ನೀರು, ಹಾಲಿನ ದರ ಏರಿಕೆ ಪ್ರಸ್ತಾಪ ಸೇರಿ ಮೈಕ್ರೋ ಫೈನಾನ್ಸ್ ಕಿರುಕುಳ, ಗ್ಯಾರಂಟಿಗಳ ಹಣ ಬಿಡುಗಡೆ ವಿಳಂಬ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆ, ಕೆಪಿಎಸ್ಸಿ ಹಗರಣ, ರಾಜ್ಯಪಾಲ-ಸರ್ಕಾರದ ನಡುವಿನ ಜಟಾಪಟಿ, ಬೆಂಗಳೂರು ನಗರದ ಸಮಸ್ಯೆಗಳನ್ನು ಮುಖ್ಯ ಅಸ್ತ್ರವಾಗಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸಜ್ಜಾಗಿದ್ದು, ಉಭಯ ಸದನಗಳಲ್ಲಿ ತೀವ್ರ ಚರ್ಚೆ, ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಇದಕ್ಕೆ ಪ್ರತಿಯಾಗಿ ಕುನ್ಹಾ ವರದಿ, ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಪ್ರಕರಣ, ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ಅಂಗೀಕಾರ ನೀಡಲು ಸ್ಪಂದಿಸದ ಕೇಂದ್ರ ಸರ್ಕಾರದ ಧೋರಣೆ, ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ, ತೆರಿಗೆ ಪಾಲು ಕಡಿತ ಮತ್ತಿತರ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ವಿರುದ್ಧ ಹರಿಹಾಯಲು ಕಾಂಗ್ರೆಸ್ ಕೂಡ ಸಿದ್ಧವಾಗಿದೆ.
Published On - 4:09 pm, Sun, 2 March 25