30 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 90ರಷ್ಟು ಏರಿಕೆ: ಜಾತಿ ಗಣತಿ ವರದಿಯ ಮತ್ತಷ್ಟು ಮಾಹಿತಿ ಬಹಿರಂಗ
ಕರ್ನಾಟಕ ಜಾತಿ ಗಣತಿಯ ವರದಿಯ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಮುಸ್ಲಿಂ ಜನಸಂಖ್ಯೆ 30 ವರ್ಷಗಳಲ್ಲಿ ಶೇ 90ರಷ್ಟು ಹೆಚ್ಚಳ ಕಂಡಿದ್ದರೆ, ಲಿಂಗಾಯತರ ಸಂಖ್ಯೆ ಇಳಿಕೆ ಕಂಡಿರುವುದು ಬಹಿರಂಗವಾಗಿದೆ. ಆದರೆ, ಇದರ ಸತ್ಯಾಸತ್ಯತೆಯನ್ನು ಬಿಜೆಪಿ ಪ್ರಶ್ನಿಸಿದೆ. ಇದರಿಂದ ವರದಿಯಿಂದ ರಾಜಕೀಯ ಚರ್ಚೆಗಳು ತೀವ್ರಗೊಂಡಿದ್ದು, ಕಾಂಗ್ರೆಸ್ನಲ್ಲೂ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.

ಬೆಂಗಳೂರು, ಏಪ್ರಿಲ್ 22: ಪ್ರತಿಪಕ್ಷಕ್ಕೆ ಅಸ್ತ್ರವಾಗಿರುವ ಹಾಗೂ ಕರ್ನಾಟಕ ಸರ್ಕಾರಕ್ಕೆ ಕೆಂಡವಾಗಿರುವ ಜಾತಿಗಣತಿಯ (Karnataka Caste Census) ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 2015 ರ ಸಮೀಕ್ಷೆಯಲ್ಲಿ ಈಗಾಗಲೇ ಜನಸಂಖ್ಯೆಗಳ ಲೆಕ್ಕಾಚಾರ ಬಯಲಾಗಿದೆ. ಇದೀಗ ಯಾವ್ಯಾವ ಸಮುದಾಯ (Community) ಎಷ್ಟೆಷ್ಟು ಹೆಚ್ಚಾಗಿದೆ ಎಂಬ ಸಂಗತಿಯೂ ಬಯಲಾಗಿದೆ. ಅದರಲ್ಲಿಯೂ, 30 ವರ್ಷಗಳಲ್ಲಿ ಮುಸ್ಲಿಮರ (Muslim) ಜನಸಂಖ್ಯೆ ಶೇ 90ರಷ್ಟು ಏರಿಕೆಯಾಗಿರುವ ಅಂಶ ಸೋರಿಕೆಯಾಗಿದೆ.
1984ರಲ್ಲಿ ವೆಂಕಟಸ್ವಾಮಿ ಆಯೋಗ ನಡೆಸಿದ್ದ ಸಮೀಕ್ಷೆ ಪ್ರಕಾರ 61 ಲಕ್ಷ ಜನರಿದ್ದ ವೀರಶೈವ ಲಿಂಗಾಯತರು ನಂ.1 ಸ್ಥಾನದಲ್ಲಿದ್ದರು. ಆದರೆ, 2015ರ ಕಾಂತರಾಜು ಆಯೋಗದ ಸಮೀಕ್ಷೆ ಪ್ರಕಾರ 66 ಲಕ್ಷ ಜನಸಂಖ್ಯೆ ಇರುವ ವೀರಶೈವ ಲಿಂಗಾಯತರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇವರ ಜನಸಂಖ್ಯೆ ವೃದ್ಧಿ ಕೇವಲ 8.50ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಹಾಗೆಯೇ 57 ಲಕ್ಷವಿದ್ದ ಎಸ್ಸಿ ಸಮುದಾಯ 30 ವರ್ಷದಲ್ಲಿ 1 ಕೋಟಿಯಾಗಿದ್ದು ಬರೋಬ್ಬರಿ 90ರಷ್ಟು ಜನಸಂಖ್ಯೆ ವೃದ್ಧಿಯಾಗಿದೆ. ಇನ್ನೂ ಮುಸ್ಲಿಮರು ಕೂಡಾ 1984ರಲ್ಲಿ ಕರ್ನಾಟಕದಲ್ಲಿ ಕೇವಲ 39 ಲಕ್ಷ ಜನರಿದ್ದರು. ಆದರೆ, ಇವರ ಸಂಖ್ಯೆ ಕಾಂತರಾಜು ಆಯೋಗದ ವರದಿ ಪ್ರಕಾರ 76 ಲಕ್ಷವಾಗಿದೆ. ಅಂದರೆ, ಬರೋಬ್ಬರಿ ಶೇ 94 ರಷ್ಟು ಜನಸಂಖ್ಯೆ ಹೆಚ್ಚಾಗಿದೆ.
1984ರಲ್ಲಿ ಇಡೀ ರಾಜ್ಯದಲ್ಲಿ ಶೇಕಡಾ 17ರಷ್ಟು ಜನಸಂಖ್ಯೆ ಹೊಂದಿದ್ದ ಲಿಂಗಾಯತರು ಈಗ ಮೂರನೇ ಸ್ಥಾನಕ್ಕೆ ಕುಸಿದಿರುವುದಾಗಿ ಈಗ ಮಂಡನೆಯಾದ ವರದಿಯಲ್ಲಿ ತಿಳಿಸಲಾಗಿದೆ. ಲಿಂಗಾಯತರಿಗೆ ಮೂರನೇ ಸ್ಥಾ ನೀಡಿ ಮುಸ್ಲಿಮರಿಗೆ 2ನೇ ಸ್ಥಾನ, ಪರಿಶಿಷ್ಟ ಜಾತಿಗಳು ಅತಿದೊಡ್ಡ ವರ್ಗ ಎಂದು ವರದಿ ನೀಡಿದ್ದಾರೆ. ಆದರೆ ಈಗ ಉಳಿದ ಸಮುದಾಯಗಳು ನಿಧಾನಗತಿಯಲ್ಲಿ ಏರಿಕೆ ಕಂಡಿದ್ದರೂ, ಮುಸ್ಲಿಮರ ಜನಸಂಖ್ಯೆ ಏಕಾಏಕಿ 30 ವರ್ಷದಲ್ಲಿ ಶೇಕಡಾ 90ರಷ್ಟು ಬೆಳವಣಿಗೆ ಆಗಿದ್ಹೇಗೆ ಎಂಬುದೇ ಪ್ರಶ್ನೆಯಾಗಿದೆ.
ವಿಪಕ್ಷ ಬಿಜೆಪಿ ಆಕ್ರೋಶ
ಮುಸ್ಲಿಮರ ಸಂಖ್ಯೆ ಅಷ್ಟೊಂದು ಹೆಚ್ಚಳವಾಗಿರುವುದನ್ನು ಪ್ರಶ್ನಿಸುತ್ತಿರುವ ವಿಪಕ್ಷ ಬಿಜೆಪಿ, ಜಾತಿ ಗಣತಿಯ ಮೂಲ ಪ್ರತಿ ಸಿಎಂ ಸಿದ್ದರಾಮಯ್ಯ ಮನೆಯಲ್ಲಿದೆ. ಇದು ನಕಲಿ, ವರದಿಯೇ ಬೋಗಸ್ ಎಂದು ಕಿಡಿಕಾರಿದೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಯಾವ ಜಾತಿಯ ಜನಸಂಖ್ಯೆ ಎಷ್ಟು? ಜಾತಿಗಣತಿಯ ಅಂಕಿ-ಅಂಶ ಬಹಿರಂಗ
ಸಿಎಂ ಕುರ್ಚಿ ಅಲುಗಾಡುತ್ತಿದೆ. ಹೀಗಾಗಿ ಜಾತಿಗಣತಿ ಮುನ್ನಲೆಗೆ ತಂದು ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಜಾತಿಗಣತಿ ವರದಿಗೆ ಸ್ವಪಕ್ಷದಲ್ಲೇ ಅಪಸ್ವರ
ಕಾಂಗ್ರೆಸ್ ನಾಯಕರು ಏನೇ ಸಮರ್ಥಿಸಿಕೊಂಡರೂ, ಜಾತಿ ಗಣತಿಗೆ ಸ್ವಪಕ್ಷದಲ್ಲೇ ಅಪಸ್ವರ ಎದ್ದಿದೆ. ಕಾಂಗ್ರೆಸ್ ಎಂಎಲ್ಸಿ ನಾಗರಾಜ್ ಯಾದವ್ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದು, ಗೊಲ್ಲ, ಕಾಡುಗೊಲ್ಲ, ಯಾದವ ಸಮುದಾಯದ ವಿಚಾರವಾಗಿ ಆಕ್ಷೇಪ ಎತ್ತಿದ್ದಾರೆ. ಕಾಡುಗೊಲ್ಲ ಸಮುದಾಯದ ಜನಸಂಖ್ಯೆ 3,20,853 ತೋರಿಸಲಾಗಿದೆ. ಆದರೆ, ಈ ಸಂಖ್ಯೆಗಿಂತ ಹೆಚ್ಚು ಜನರಿದ್ದಾರೆ. ಹೀಗಾಗಿ ಸರಿಯಾಗಿ ತಿದ್ದಪಡಿ ಮಾಡಬೇಕೆಂದು ಮನವಿ ಮಾಡಿದ್ದಾರೆ.