ನಾಳೆಯಿಂದ ಏಪ್ರಿಲ್ 24 ರ ವರಗೆ ಮಲೆ ಮಹದೇಶ್ವರ ಬೆಟ್ಟ ಪ್ರವಾಸ, ವಾಸ್ತವ್ಯ ಯೋಜನೆ ಇದ್ದರೆ ಗಮನಿಸಿ
Male Mahadeshwara Hills: ಏಪ್ರಿಲ್ 24 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಕರ್ನಾಟಕ ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಏಪ್ರಿಲ್ 22 ರಿಂದ 24 ರವರೆಗೆ ಬೆಟ್ಟದಲ್ಲಿ ಭಕ್ತರ ವಾಸ್ತವ್ಯಕ್ಕೆ ನಿಷೇಧ ಹೇರಲಾಗಿದೆ. ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಸಹಕಾರ ನೀಡಬೇಕೆಂದು ಮಲೆ ಮಹದೇಶ್ವರ ಪ್ರಾಧಿಕಾರ ಮನವಿ ಮಾಡಿದೆ.

ಚಾಮರಾನಜಗರ, ಏಪ್ರಿಲ್ 21: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hill) ಏಪ್ರಿಲ್ 24 ರಂದು ಕರ್ನಾಟಕ ಸಚಿವ ಸಂಪುಟ ಸಭೆ (Cabinet Meeting) ನಡೆಯಲಿದೆ. ಹಿಗಾಗಿ ಏಪ್ರಿಲ್ 22 ರಿಂದ ಏಪ್ರಿಲ್ 24 ರ ವರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ವಾಸ್ತವ್ಯಕ್ಕೆ ನಿಷೇಧ ಹೇರಲಾಗಿದೆ. ಆದ್ದರಿಂದ, ನಾಳೆಯಿಂದ ಏಪ್ರಿಲ್ 24 ರ ನಡುವಣ ಅವಧಿಯಲ್ಲಿ ಮಾದಪ್ಪನ ಸನ್ನಿಧಿಗೆ ಪ್ರವಾಸದ ಯೋಜನೆ ಮಾಡಿದ್ದರೆ ಅಥವಾ ಅಲ್ಲಿ ವಾಸ್ತವ್ಯಕ್ಕೆ ಪ್ಲಾನ್ ಮಾಡುವುದಿದ್ದರೆ ಭಕ್ತರು ಯೋಚಿಸುವುದು ಒಳಿತು.
ಏಪ್ರಿಲ್ 22 ರಿಂದ 24 ರ ವರಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ವಾಸ್ಥವ್ಯಕ್ಕೆ ನಿಷೇಧ ಹೇರಿ ಮಲೆ ಮಹದೇಶ್ವರ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ಸಚಿವ ಸಂಪುಟ ಸಭೆ ಹಿನ್ನಲೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಭಕ್ತರು ಸಹಕಾರ ನೀಡಬೇಕು ಎಂದು ಕಾರ್ಯದರ್ಶಿ ರಘು ಮನವಿ ಮಾಡಿದ್ದಾರೆ. ಭಕ್ತರಲ್ಲಿ ಗೊಂದಲ ಮೂಡದೆ ಇರಲಿ ಎಂದು ಮುಂಚಿತವಾಗಿಯೇ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಹಿಂದೆ ಹಲವು ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಪ್ರತಿ ಬಾರಿಯೂ ಕೊನೆ ಕ್ಷಣದಲ್ಲಿ ಅಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ರದ್ದಾಗುತ್ತಿತ್ತು. ಇದೀಗ ಕೊನೆಗೂ ಸಿದ್ದರಾಮಯ್ಯ ಸರ್ಕಾರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿದೆ. ಹಾಗಾಗಿ ಭಕ್ತರು ಮಾದಪ್ಪನ ಸನ್ನಿಧಿಗೆ ತೆರಳುವುದಿದ್ದರೆ ಏಪ್ರಿಲ್ 24ರ ನಂತರವೇ ಪ್ಲಾನ್ ಮಾಡಿಕೊಳ್ಳುವುದು ಸೂಕ್ತ.
ಏಪ್ರಿಲ್ 24 ರಂದು ಮದ್ಯಾಹ್ನ 12 ಗಂಟೆಗೆ ದೀಪದಗಿರಿ ವಡ್ಡುವಿನಲ್ಲಿರುವ ಮಹದೇಶ್ವರನ 108 ಅಡಿ ಪ್ರತಿಮೆ ಬಳಿ ಸಚಿವ ಸಂಪುಟ ಸಭೆ ನಡೆಯಲಿದೆ.
ಇದನ್ನೂ ಓದಿ: ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಪ್ಪನ ಬೆಟ್ಟದಲ್ಲಿ ಸಂಪುಟ ಸಭೆ: ಹಲವು ನಿರೀಕ್ಷೆ
ಈ ಹಿಂದೆ ಬೆಂಗಳೂರು ಹೊರತುಪಡಿಸಿ ಸಚಿವ ಸಂಪುಟ ಸಭೆಗಳು ನಡೆದ ಜಾಗಗಳೆಂದರೆ ಅವು ಬೆಳಗಾವಿ ಹಾಗೂ ಕಲಬುರಗಿ. ಇದೀಗ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ 20 ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ಕ್ಯಾಬಿನೆಟ್ ಮೀಟಿಂಗ್ ಜೊತೆಗೆ ಮಹದೇಶ್ವರನ ಇತಿಹಾಸ ಸಾರುವ ಮ್ಯೂಸಿಯಂ, ವಸತಿ ಸಮುಚ್ಚಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ದೊರೆಯುವ ನಿರೀಕ್ಷೆ ಇದೆ.