ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಪ್ಪನ ಬೆಟ್ಟದಲ್ಲಿ ಸಂಪುಟ ಸಭೆ: ಹಲವು ನಿರೀಕ್ಷೆ
ಏಪ್ರಿಲ್ 24 ರಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಮೈಸೂರು ವಿಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಸ್ತಾವನೆಗಳು ಚರ್ಚೆಗೆ ಬರಲಿವೆ. ಜಿಲ್ಲೆಯ ಪ್ರವಾಸೋದ್ಯಮ, ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನಿರೀಕ್ಷಿಸಲಾಗಿದೆ. ಸಭೆಗೆ ಸಂಪೂರ್ಣ ತಯಾರಿ ನಡೆದಿದೆ.

ಚಾಮರಾಜನಗರ, ಏಪ್ರಿಲ್ 18: ಮಲೆಹದೇಶ್ವರ ಬೆಟ್ಟದಲ್ಲಿ (Male Mahadeshwara Hill) ಸಚಿವ ಸಂಪುಟ (Cabinet Meeting) ಸಭೆ ನಡೆಸಲು ಕೊನೆಗೂ ಮುಹೂರ್ತ ಕೂಡಿಬಂದಿದೆ. ಏಪ್ರಿಲ್ 24 ರಂದು ಮಾದಪ್ಪನ ಸನ್ನಿಧಿಯಲ್ಲಿ ನಡೆಯಲಿರುವ ಐತಿಹಾಸಿಕ ಸಚಿವ ಸಂಪುಟ ಸಭೆಗೆ ಸಿದ್ದತೆ ಭರದಿಂದ ನಡೆದಿದೆ. ರಾಜಧಾನಿಯಿಂದ ಹೊರಗೆ ಆಯೋಜಿಸಲಾಗಿರುವ ಈ ಕ್ಯಾಬಿನೆಟ್ ಮೀಟಿಂಗ್ ಯಶಸ್ಸಿಗೆ ಜಿಲ್ಲಾಡಳಿತ ಟೊಂಕ ಕಟ್ಟಿ ನಿಂತಿದೆ.
2025 ನೇ ಸಾಲಿನ ಒಂಬತ್ತನೇ ಸಚಿವ ಸಂಪುಟ ಸಭೆಯನ್ನು ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ದೀಪದ ಗಿರಿ ವಡ್ಡುವಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮೂರು ಬಾರಿ ಮುಂದೂಡಲ್ಪಟ್ಟಿದ್ದ ಕ್ಯಾಬಿನೆಟ್ ಮೀಟಿಂಗ್ ಏಪ್ರಿಲ್ 24 ರಂದು ಮದ್ಯಾಹ್ನ 12 ಗಂಟೆಗೆ ದೀಪದಗಿರಿ ವಡ್ಡುವಿನಲ್ಲಿರುವ ಮಹದೇಶ್ವರನ 108 ಅಡಿ ಪ್ರತಿಮೆ ಬಳಿ ನಡೆಯಲಿದೆ.
ಈ ಸಂಪುಟ ಸಭೆಯಲ್ಲಿ ಮೈಸೂರು ವಿಭಾಗದ ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ಉಡುಪಿ, ಮಂಗಳೂರು ಮತ್ತು ಹಾಸನ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳು ಚರ್ಚೆಗೆ ಬರಲಿವೆ. ಕ್ಯಾಬಿನೆಟ್ ಮೀಟಿಂಗ್ ಯಶಸ್ಸಿಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ನೇತೃತ್ವದಲ್ಲಿ ಮಹದೇಶ್ವರ ಬೆಟ್ಟದಲ್ಲಿ ಭರ್ಜರಿ ತಯಾರಿ ನಡೆಸಲಾಗಿದೆ. ಜಿಲ್ಲಾದಿಕಾರಿ ಶಿಲ್ಪಾನಾಗ್ ಮತ್ತು ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರು ಇಂದು (ಏ.18) ಸಚಿವ ಸಂಪುಟ ಸಭೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾಮರಾಜನಗರ ಜಿಲ್ಲೆಯ ಪ್ರವಾಸೋದ್ಯಮ, ಕೈಗಾರಿಕೆ, ಕೆರೆ ತುಂಬಿಸುವ ಯೋಜನೆ, ರಸ್ತೆ, ಪಟ್ಟಣ ಪ್ರದೇಶಗಳ ಒಳಚರಂಡಿ ಯೋಜನೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನಿರೀಕ್ಷಿಸಲಾಗಿದೆ. ಈ ಬಗ್ಗೆ ಎಲ್ಲ ಇಲಾಖೆಗಳಿಂದಲೂ ಪ್ರಸ್ತಾವನೆ ಸಹ ಈಗಾಗಲೇ ಸಲ್ಲಿಸಲಾಗಿದೆ. ಹನೂರು ಶಾಸಕ ಎಂ ಆರ್ ಮಂಜುನಾಥ್ ಜೆಡಿಎಸ್ನವರಾದರೂ ಸಹ ಪಕ್ಷ ಭೇದ ಮರೆತು ಸಚಿವ ಸಂಪುಟ ಸಭೆ ಯಶಸ್ಸಿಗೆ ಕಾರ್ಯೋನ್ಮುಖರಾಗಿದ್ದಾರೆ.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: 35 ದಿನಗಳಲ್ಲಿ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಈ ಹಿಂದೆ ರಾಜಧಾನಿ ಬೆಂಗಳೂರಿನಿಂದ ಹೊರಗೆ ಅಂದರೆ ಬೆಳಗಾವಿ ಹಾಗೂ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಇದೀಗ, ಚಾಮರಾಜನಗರ ಸಚಿವ ಸಂಪುಟ ಸಭೆ ನಡೆಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ 20 ಸಮಿತಿಗಳನ್ನು ರಚಿಸಲಾಗಿದೆ. ಕ್ಯಾಬಿನೆಟ್ ಮೀಟಿಂಗ್ ಜೊತೆಗೆ ಮಹದೇಶ್ವರನ ಇತಿಹಾಸ ಸಾರುವ ಮ್ಯೂಸಿಯಂ, ವಸತಿ ಸಮುಚ್ಚಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ದೊರೆಯಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:19 pm, Fri, 18 April 25