AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಮಾಜಿ ಸಿಎಂ ನಿಜಲಿಂಗಪ್ಪ ಮನೆ ಖರೀದಿಸಿದ ಕರ್ನಾಟಕ ಸರ್ಕಾರ

Nijalingappa’s house: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗದ ಐತಿಹಾಸಿಕ ನಿವಾಸವನ್ನು ಕೊನೆಗೂ ಕರ್ನಾಟಕ ಸರ್ಕಾರ ಖರೀದಿಸಿದೆ. ನಾಲ್ಕು ವರ್ಷಗಳ ವಿಳಂಬದ ನಂತರ ಈ ಖರೀದಿ ಪ್ರಕ್ರಿಯೆ ಅಂತಿಮಗೊಂಡಿದ್ದು, ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಮನೆ ಖರೀದಿಸಲಾಗಿದೆ. ಈ ನಿವಾಸವನ್ನು ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಯೋಜನೆಯಿದೆ.

ಕೊನೆಗೂ ಮಾಜಿ ಸಿಎಂ ನಿಜಲಿಂಗಪ್ಪ ಮನೆ ಖರೀದಿಸಿದ ಕರ್ನಾಟಕ ಸರ್ಕಾರ
ನಿಜಲಿಂಗಪ್ಪ ಮನೆ
Ganapathi Sharma
|

Updated on: Dec 13, 2024 | 10:57 AM

Share

ಬೆಂಗಳೂರು, ಡಿಸೆಂಬರ್ 13: ಎಐಸಿಸಿ ಮಾಜಿ ಅಧ್ಯಕ್ಷ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸವನ್ನು ಕೊನೆಗೂ ಕರ್ನಾಟಕ ಸರ್ಕಾರ ಖರೀದಿ ಮಾಡಿದೆ. ಮಾರುಕಟ್ಟೆ ಮೌಲ್ಯಕ್ಕಿಂತಲೂ ಸುಮಾರು 1 ಕೋಟಿ ರೂ. ಕಡಿಮೆ ಮೊತ್ತಕ್ಕೆ ಸರ್ಕಾರ, ನಿಜಲಿಂಗಪ್ಪ ನಿವಾಸವನ್ನು ಖರೀದಿ ಮಾಡಿದ ಬಗ್ಗೆ ವರದಿಯಾಗಿದೆ. ನಿಜಲಿಂಗಪ್ಪ ಅವರು ಬದುಕಿ, ಬಾಳಿರುವ ಚಿತ್ರದುರ್ಗದ ಮನೆಯ ಖರೀದಿಗೆ ಸರ್ಕಾರ ಉತ್ಸಾಹ ತೋರದ್ದರಿಂದ ಇತ್ತೀಚೆಗೆ ಕೆಲವು ದಿನಗಳ ಹಿಂದೆ ಅವರ ಮಗ ಎಸ್​ಎನ್​ ಕಿರಣಶಂಕರ್ ‘‘ಮನೆ ಮಾರಾಟಕ್ಕಿದೆ’’ ಎಂದು ಜಾಹೀರಾತು ನೀಡಿದ್ದರು. ಇದರಿಂದ ಐತಿಹಾಸಿಕ ನಿವಾಸ ಖಾಸಗಿಯವರ ಪಾಲಾಗುವ ಆತಂಕ ಎದುರಾಗಿತ್ತು.

ಇದೀಗ ಅಂತಿಮವಾಗಿ, ನಾಲ್ಕು ವರ್ಷಗಳ ವಿಳಂಬದ ಬಳಿಕ ಕರ್ನಾಟಕ ಸರ್ಕಾರ ಮನೆ ಖರೀದಿಸಿದೆ. ಎಸ್​ಎನ್​ ಕಿರಣಶಂಕರ್ ಅವರು ಸ್ಥಳೀಯ ತಹಶೀಲ್ದಾರ್ ಮೂಲಕ ಮನೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದರು ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಕಿರಣಶಂಕರ್ ಅವರು ಕರ್ನಾಟಕ ಸರ್ಕಾರದ ಮುಖ್ಯ ವಾಸ್ತುಶಿಲ್ಪಿಯಾಗಿ ಸೇವೆ ಸಲ್ಲಿಸಿದ್ದರು.

ಮಹಾತ್ಮಾ ಗಾಂಧಿಯ ಭಾಗವಹಿಸಿದ್ದ 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂದರ್ಭದಲ್ಲೇ ಬೆಳಗಾವಿಯಲ್ಲಿನ ಐತಿಹಾಸಿಕ ನಿವಾಸ ಸರ್ಕಾರದ ಅಧೀನಕ್ಕೆ ಬಂದಿರುವುದು ವಿಶೇಷ.

ಸ್ವಾತಂತ್ರ್ಯಪೂರ್ವ ಇತಿಹಾಸವುಳ್ಳ ಮನೆ

ನಾಲ್ಕು ವರ್ಷಗಳ ಹಿಂದೆಯೇ ಮನೆಯನ್ನು ಸರ್ಕಾರಕ್ಕೆ ಮಾರಾಟ ಮಾಡುವ ಬಗ್ಗೆ ನಿಜಲಿಂಗಪ್ಪ ಕುಟುಂಬದವರು ಒಪ್ಪಿಗೆ ನೀಡಿದ್ದರು. ಆದರೆ ಸರ್ಕಾರ ನಿರುತ್ಸಾಹ ತೋರಿದ್ದರಿಂದ ಮಾರಾಟ ವಿಳಂಬವಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೆ ಸುಮಾರು ಒಂದು ದಶಕದ ಮೊದಲು ನಿರ್ಮಿಸಲಾದ ಮನೆ ಇದಾಗಿದೆ.

ನಿಜಲಿಂಗಪ್ಪ ನಿವಾಸವನ್ನು ಸರ್ಕಾರಕ್ಕೇ ಮಾರಾಟವಾಗುವಂತೆ ಮಾಡುವಲ್ಲಿ ಮಾಜಿ ಎಂಎಲ್‌ಸಿ ಮೋಹನ್ ಕೊಂಡಜ್ಜಿ ಪ್ರಮುಖ ಪಾತ್ರ ವಹಿಸಿದ್ದರು. ಸರ್ಕಾರದ ನಿರುತ್ಸಾಹದ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದರು ಎಂದೂ ವರದಿ ಉಲ್ಲೇಖಿಸಿದೆ.

ಇನ್ನಾದರೂ ಸರ್ಕಾರ ಶೀಘ್ರ ಕಾರ್ಯಪ್ರವೃತ್ತವಾಗಿ ನಿಜಲಿಂಗಪ್ಪ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿ ಅವರ ಪರಂಪರೆಯನ್ನು ಗೌರವಿಸಬೇಕು ಎಂದು ಕೊಂಡಜ್ಜಿ ಆಗ್ರಹಿಸಿದ್ದಾರೆ.

ಒಂದು ವರ್ಷದ ಹಿಂದೆ, ಮಾರಾಟ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಅಮೆರಿಕದಿಂದ ಆಗಮಿಸಿದ್ದರು. ಆದರೆ ಅಧಿಕಾರಿಗಳು ಅಡೆತಡೆಗಳನ್ನು ಉಂಟುಮಾಡಿ ನೋಂದಣಿ ಆಗದಂತೆ ಮಾಡಿದ್ದರು. ವರ್ಷಗಳಿಂದ ಅಧಿಕಾರಿಗಳು ಈ ಪ್ರಕ್ರಿಯೆಗೆ ಕಲ್ಲು ಹಾಕಿದ್ದಾರೆ ಎಂದು ಕೊಂಡಜ್ಜಿ ಆರೋಪಿಸಿರುವುದಾಗಿಯೂ ‘ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಉಲ್ಲೇಖಿಸಿದೆ. ಈ ನಿವಾಸವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ್ದು, ಕರ್ನಾಟಕದ ಅತ್ಯಂತ ಪ್ರಭಾವಿ ರಾಜಕೀಯ ವ್ಯಕ್ತಿಗಳ ಜೀವನಕ್ಕೆ ಸಾಕ್ಷಿಯಾಗಿದೆ.

ಎಲ್ಲಿದೆ ನಿಲಿಂಗಪ್ಪ ನಿವಾಸ?

ಮಾಜಿ ಸಿಎಂ ಎಸ್​ ನಿಜಲಿಂಗಪ್ಪ ನಿವಾಸ ಚಿತ್ರದುರ್ಗ ನಗರದ ವಾರ್ಡ್​ ನಂ. 32 ವಿಪಿ ಬಡಾವಣೆಯ ಡಿಸಿ ಬಂಗಲೆಯ ಹತ್ತಿರ ಇದೆ. 117 X 130 ಅಡಿ ವಿಸ್ತೀರ್ಣದ ಶ್ವೇತ ವರ್ಣದ ಈ ಮನೆಯನ್ನು ಖರೀದಿಸಿ ವಸ್ತು ಸಂಗ್ರಹಾಲಯ ಹಾಗೂ ಸ್ಮಾರಕ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ನಾಲ್ಕು ಸಭೆಗಳನ್ನೂ ಮಾಡಿತ್ತು. ನಂತರ ಉತ್ಸಾಹ ತೋರಿರಲಿಲ್ಲ.

ಮಾಜಿ ಸಿಎಂ ನಿಜಲಿಂಗಪ್ಪ ಮನೆ ಮಾರಾಟಕ್ಕೆ! ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ

ನಿಜಲಿಂಗಪ್ಪ ಅವರು ಮೊಮ್ಮಗ ವಿನಯ್​ ಹೆಸರಿಗೆ ವಿಲ್​ ಬರೆದಿದ್ದಾರೆ. ಹೀಗಾಗಿ, ಮನೆಯನ್ನು ಸಬ್​ರಿಜಿಸ್ಟಾರ್​ ಮೂಲಕ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಡಳತ ಹೇಳಿತ್ತು. ಆದರೆ ಅದಕ್ಕಾಗಿ ವಿನಯ್​ ಅಮೆರಿಕದಿಂದ ಬಂದಿದ್ದಾಗಲೂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಅಂತಿಮವಾಗಿ ಇದೀಗ ಮನೆ ಸರ್ಕಾರಕ್ಕೆ ಹಸ್ತಾಂತರವಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ