ಅಮಿತ್ ಶಾ ಭೇಟಿಯಾಗಿದ್ದೇಕೆ ಹೆಚ್​ಡಿ ದೇವೇಗೌಡ? ಡಿಕೆ ಶಿವಕುಮಾರ್ ಕೊಟ್ಟರು ಕಾರಣ!

|

Updated on: Aug 08, 2024 | 2:58 PM

ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಭೇಟಿ ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಗೌಡ ಕುಟುಂಬದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಹೇಳಿಕೆ ವಿವರ ಇಲ್ಲಿದೆ.

ಅಮಿತ್ ಶಾ ಭೇಟಿಯಾಗಿದ್ದೇಕೆ ಹೆಚ್​ಡಿ ದೇವೇಗೌಡ? ಡಿಕೆ ಶಿವಕುಮಾರ್ ಕೊಟ್ಟರು ಕಾರಣ!
ಡಿಕೆ ಶಿವಕುಮಾರ್
Follow us on

ಬೆಂಗಳೂರು, ಆಗಸ್ಟ್ 8: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅವರ ಕುಟುಂಬದ ರಕ್ಷಣೆಗೆ ಅವರು (ದೇವೇಗೌಡರು) ಹೋಗಲೇ ಬೇಕಲ್ಲವಾ? ಅಷ್ಟೇ ಅಲ್ಲದೆ, ನಮ್ಮ ವಿರುದ್ಧ ಪಟ್ಟಿ ಕೊಡುವುದಕ್ಕೆ ಹೋಗಿರಬಹುದು ಎಂದರು.

ನನ್ನನ್ನು ಹಾಗೂ ಸಿಎಂ ಸಿದ್ದರಾಮಯ್ಯರನ್ನು ಒಳಗೆ ಹಾಕಬೇಕೆಂದು ಏನೋ ಮಾಡುತ್ತಿದ್ದಾರೆ. ನಾನು ಇದಕ್ಕೆ ರೆಡಿ ಇದ್ದೇನೆ ಎಂದ ಡಿಕೆ ಶಿವಕುಮಾರ್, ಬಿಜೆಪಿ ಭ್ರಷ್ಟಾಚಾರದ ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆ. ದಾಖಲೆ ಬಿಡುಗಡೆಗೆ ದಿನ, ಘಳಿಗೆ ಕೂಡಿ ಬರಲಿ. ಅಕ್ರಮ ಬಗ್ಗೆ ಚರ್ಚೆ ಮಾಡಲು ಬಿಜೆಪಿಯವರು ರೆಡಿಯಾಗಿಲ್ಲ ಎಂದರು.

ಅವರ (ಕುಮಾರಸ್ವಾಮಿ) ಸಹೋದರನಿಗೆ ಆಸ್ತಿ ಹೇಗೆ ಬಂತು ಎಂದು ಹೇಳಿದ್ದೇನೆ. ಅದನ್ನು ಬಿಚ್ಚಿಡಬೇಕಲ್ಲವಾ? ನಾನು ದಲಿತರಿಗೆ ಅನ್ಯಾಯ ಮಾಡಿ ಆಸ್ತಿ ಮಾಡಿದೆ ಎಂದು ಆರೋಪ ಮಾಡುತ್ತಾರೆ. ಆ ಬಗ್ಗೆ ದಾಖಲೆಗಳನ್ನು ಪ್ರದರ್ಶಿಸಲಿ. ಬ್ಲಾಕ್ ಅಂಡ್ ವೈಟ್ ಟೀವಿ ಮಾಡಿಕೊಂಡಿದ್ದೆನಂತೆ. ಅದನ್ನು ಅಲ್ಲಿ ಬಂದು ವಿಚಾರಿಸಲಿ? ನಾವೆಲ್ಲಾ ಹುರುಳಿ, ಕಡಲೇಕಾಯಿ, ರಾಗಿಯನ್ನೇ ತಿಂದವರು. ಅದನ್ನು ಬೆಳೆದುಕೊಂಡು ಬಂದಿದ್ದೇವೆ. ಈಗಲೂ ಬೆಳೆಯುತ್ತಿದ್ದೇವೆ. ನಮ್ಮ ಆಸ್ತಿ ಎಷ್ಟಿದೆ ಅನ್ನೋದನ್ನ ಬಂದು ಕೇಳಲಿ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದರು.

ದಿನಾ ಸಾಯೋರಿಗೆ ಅಳುವವರು ಯಾರು: ಡಿಕೆಶಿ ವ್ಯಂಗ್ಯ

ಸಿಎಂ, ಡಿಸಿಎಂರನ್ನು ಚಕ್ರವ್ಯೂಹದಲ್ಲಿ ಸಿಲುಕಿಸುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೋಡಿ ಪಾ, ಅದೇನೋ ಹೇಳ್ತಾರಲ್ಲ. ದಿನಾ ಸಾಯೋರಿಗೆ ಅಳುವವರು ಯಾರು ಅಂತ. ಅದೇ ರೀತಿ, ಇವರದೆಲ್ಲಾ ಗೋಳು ಇದ್ದಿದ್ದೇ. ಇವರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದಕ್ಕೂ ಹೋರಾಟ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಪ್ರೀತಂ ಗೌಡರನ್ನು ಪಾದಯಾತ್ರೆಯಿಂದ ದೂರವಿಡುತ್ತೇವೆ, ಮೈತ್ರಿಗೂ ಅವರಿಗೂ ಸಂಬಂಧವಿಲ್ಲ: ಪುಟ್ಟರಾಜು

ದೇವೇಗೌಡರ ಕುಟುಂಬದ ದಾಖಲೆ ಬಿಚ್ಚಿಡುವ ಕೆಲಸ ಮಾಡಲೇಬೇಕಾಗುತ್ತದೆ. ಇದಕ್ಕೆಲ್ಲ ಒಳ್ಳೆಯ ಸಮಯ, ಮುಹೂರ್ತ ಬೇಕು. ಶುಭ ವಾರ, ಶುಭ ನಕ್ಷತ್ರ ನೋಡಬೇಕಾಗುತ್ತದೆ. ಮೊದಲು ಅವರಿಗೆ ಹೇಳಿದ್ದೇವೆ, ನಮ್ಮದೇನಿದೆ ಬಿಚ್ಚಿಡಿ, ನಿಮ್ಮದು ಬಿಚ್ಚಿ ಎಂದು. ಎರಡು ಬಾರಿ ಅಧಿವೇಶನದಲ್ಲಿ ಚರ್ಚೆಗೆ ಕರೆದಿದ್ದೆ. ಅವರು ಬರಲಿಲ್ಲ. ಈಗ ಅವರಣ್ಣ ರೇವಣ್ಣ ಇದ್ದಾರೆ ಕಳುಹಿಸಲಿ. ಟಿವಿಯಲ್ಲಿ ಬೇಡ, ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Thu, 8 August 24