ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿ ಸರ್ಕಾರದ 34 ನಿಗಮಗಳು ನಷ್ಟದಲ್ಲಿ, 16 ಬಂದ್
ಕರ್ನಾಟಕ ಸರ್ಕಾರವು ವಿಧಾನ ಪರಿಷತ್ತಿನಲ್ಲಿ 125 ಸರ್ಕಾರಿ ಸಾರ್ವಜನಿಕ ಉದ್ದಿಮೆಗಳ ಪೈಕಿ 16 ಮುಚ್ಚಿವೆ ಎಂದು ಘೋಷಿಸಿದೆ. ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸೇರಿದಂತೆ 34 ಉದ್ದಿಮೆಗಳು ನಷ್ಟದಲ್ಲಿದ್ದು, ಬೆಂಗಳೂರು ಉಪನಗರ ರೈಲು ಮತ್ತು ವಿಮಾನ ನಿಲ್ದಾಣ ರೈಲು ಸಂಪರ್ಕ ನಿಗಮಗಳು ಸೇರಿದಂತೆ ಹಲವು ಉದ್ದಿಮೆಗಳು ಬಂದ್ ಆಗಿವೆ. ನಷ್ಟದಲ್ಲಿರುವ ಉದ್ದಿಮೆಗಳ ಮೌಲ್ಯಮಾಪನಕ್ಕೆ ಸರ್ಕಾರ ಸೂಚನೆ ನೀಡಿದೆ.

ಬೆಂಗಳೂರು, ಮಾರ್ಚ್ 11: ಕರ್ನಾಟಕದ 125 ಸರ್ಕಾರಿ ಸಾರ್ವಜನಿಕ ಉದ್ದಿಮೆಗಳ ಪೈಕಿ 16 ಉದ್ದಿಮೆಗಳ ಬಾಗಿಲು ಮುಚ್ಚಿವೆ ಎಂದು ಸರ್ಕಾರ ವಿಧಾನ ಪರಿಷತ್ನಲ್ಲಿ (Legislative Council) ಹೇಳಿದೆ. ಪರಿಷತ್ ಸದಸ್ಯರಾದ ಟಿಎ ಶರವಣ (TA Sharavana) ಹಾಗೂ ಕೆಎಸ್ ನವೀನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ಬಿಎಂಟಿಸಿ ಕೆಎಸ್ಆರ್ಟಿಸಿ ಮತ್ತು ಐದು ವಿದ್ಯುತ್ ಸರಬರಾಜು ಕಂಪನಿಗಳು ಸೇರಿದಂತೆ 34 ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿ ನಡೆಯುತ್ತಿವೆ ತಿಳಿಸಿದೆ.
ನಷ್ಟದಲ್ಲಿರುವ ಹಿನ್ನೆಲೆಯಲ್ಲಿ 16ಕ್ಕೂ ಹೆಚ್ಚು ಸರ್ಕಾರಿ ಸಾರ್ವಜನಿಕ ಉದ್ದಿಮೆಗಳ ಬಾಗಿಲು ಮುಚ್ಚಲಾಗಿದೆ. ಬೆಂಗಳೂರು ಉಪನಗರ ರೈಲು ಕಂಪನಿ, ಬೆಂಗಳೂರು ವಿಮಾನ ನಿಲ್ದಾಣ ರೈಲು ಸಂಪರ್ಕ ನಿಗಮ ಬಂದ್ ಆಗಿವೆ. ಆರ್ಥಿಕವಾಗಿ ಭಾರೀ ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳನ್ನು ನಡೆಸುವ ಕುರಿತು ಮೌಲ್ಯಮಾಪನ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ವಿಚಾರ ಪ್ರಸ್ತಾಪ
ಬುಡಾ ಅಡಿಯಲ್ಲಿ ಎಲ್ಲ ಲೇಔಟ್ ಅನುಮತಿಗಳು ಸ್ಥಗಿತ ಆಗಿವೆ. ಬುಡಾದಲ್ಲಿ ಏನೇನೂ ಕೆಲಸ ಆಗಿಲ್ಲ. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮದ ಪ್ರಕಾರ ಸಭೆ ಆಗುತ್ತಿಲ್ಲ. ಶಾಸಕರ ದೂರಿನ ಅನ್ವಯ ಲೋಕಾಯುಕ್ತ ದಾಳಿ ಮಾಡಿತ್ತು. ಸದ್ಯ ಬಳ್ಳಾರಿ ನಗರಾಭಿವೃದ್ಧಿ ಪಾಲಿಕೆಯಲ್ಲಿ ಕಮೀಷನರ್ ಇಲ್ಲ. ಹೀಗಾಗಿ ಯಾವುದೇ ಕೆಲಸ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಗುತ್ತಿಲ್ಲ. ಬುಡಾ ಅಡಿಯಲ್ಲಿ ಎಲ್ಲಾ ಲೇಔಟ್ ಗಳ ಕೆಲಸ ನಿಂತಿದೆ. ಈ ಬಗ್ಗೆ ಕ್ರಮ ಆಗಬೇಕು ಎಂದು ವೈಎಂ ಸತೀಶ್ ಸರ್ಕಾರಕ್ಕೆ ಪ್ರಶ್ನೆಸಿದರು.
ಇದನ್ನೂ ನೋಡಿ: ಸದನದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡುವಾಗ ಶಿವಕುಮಾರ್ ಪಕ್ಷದ ಶಾಸಕನನ್ನು ಗದರಿದ್ದು ಯಾಕೆ ಗೊತ್ತಾ?
ಬುಡಾದ ಕೊನೆ ಸಭೆ 2024ರ ಜುಲೈನಲ್ಲಿ ನಡೆದಿದೆ. ಈ ಬಳಿಕ ಮತ್ತೆ ಸಭೆ ನಡೆದಿಲ್ಲ. ಬುಡಾದ ಮೇಲೆ ಲೋಕಾಯುಕ್ತ ದಾಳಿ ಆಗಿ 6 ಜನರ ಬಂಧನವಾಗಿದೆ. ಲೋಕಾಯುಕ್ತ ತನಿಖೆ ಆದ ಹಿನ್ನಲೆಯಲ್ಲಿ ಯಾವುದೇ ಪ್ರಕ್ರಿಯೆ ಮಾಡಲು ಅನುಮತಿ ಕೊಟ್ಟಿಲ್ಲ. ಮಾಡದೇ ಇರುವ ತಪ್ಪಿಗೆ ಮುಡಾದಲ್ಲಿ ಏನೇನು ಅಪಾದನೆ ಮಾಡಿದರು ಅಂತ ಎಲ್ಲರಿಗೂ ಗೊತ್ತಿದೆ. ತಣ್ಣಗಿರುವ ಮೈಸೂರು ಮುಡಾದಲ್ಲಿ ದೊಡ್ಡ ಕಾಟ ಕೊಟ್ಟರು. ಬುಡಾದಲ್ಲಿ ಈ ತರಹ ಆಗಬಾರದು ಅಂತ ತಡವಾಗಿ ಆದರೂ ಪರವಾಗಿಲ್ಲ ಸರಿಯಾಗಿ ಆಗಲಿ ಅನ್ನೋದು ನನ್ನ ಅನಿಸಿಕೆ. ಹೀಗಾಗಿ ತನಿಖೆಗೆ ಆದೇಶ ಮಾಡಲಾಗಿದೆ. ಅಧಿವೇಶನ ಮುಗಿದ ಬಳಿಕ ಸಭೆ ಮಾಡಿ ಬುಡಾದಲ್ಲಿ ವ್ಯವಸ್ಥೆ ಸರಿ ಮಾಡಲು ಕ್ರಮವಹಿಸುತ್ತೇವೆ ಎಂದು ಸಚಿವ ಭೈರತಿ ಸುರೇಶ್ ಉತ್ತರಿಸಿದರು.