ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ: ಸಚಿವ ಸಂಪುಟದ ತೀರ್ಮಾನಗಳು
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿಂದು ನಡೆದ ಸಚಿವ ಸಂಪುಟ ಸಭೆ ಅಂತ್ಯವಾಗಿದ್ದು, ಸಭೆಯಲ್ಲಿ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಮುಖವಾಗಿ ಉತ್ತರ ಕನ್ನಡ ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಇನ್ನು ಹಿಂದೂಳಿದ ವರ್ಗದ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಘೋಷಿಸಲಾಗಿದೆ. ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನಗಳು ಈ ಕೆಳಗಿನಂತಿವೆ.

ಬೆಂಗಳೂರು, (ಮೇ 21): ಬೆಂಗಳೂರು, ಮೇ 21): ಸಿಎಂ ಸಿದ್ದರಾಮಯ್ಯ (Sidaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ (karnataka Cabinet Meeting) ಮುಕ್ತಾಯವಾಗಿದ್ದು, ಆರೋಗ್ಯ, ಶಿಕ್ಷಣ ಇಲಾಖೆ ಸಂಬಂಧಿಸಿದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಉತ್ತರ ಕನ್ನಡ ಭಾಗದ ಜನರ ಬಹು ವರ್ಷಗಳ ಬೇಡಿಕೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, 200 ಹಾಸಿಗೆಗಳ ಸಾಮರ್ಥ್ಯದ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು 100.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇನ್ನು ಹಿಂದೂಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ NEET/ JEE/ CET ಪರೀಕ್ಷಾ ಪೂರ್ವ ತರಬೇತಿ ನೀಡಲು ತೀರ್ಮಾನಿಸಲಾಗಿದೆ.
ಮುಖ್ಯಾಂಶಗಳು
- ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಅಂತ್ಯ
- ಆರೋಗ್ಯ, ಶಿಕ್ಷಣ ಇಲಾಖೆ ಸಂಬಂಧಿಸಿದ ಯೋಜನೆಗಳಿಗೆ ಅನುಮೋದನೆ
- ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ತೀರ್ಮಾನ
ಸಂಪುಟ ಸಭೆಯ ತೀರ್ಮಾನಗಳು
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು 100.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
ಕಾರವಾರ ಬಂದರಿನ ತೈಲ ಸೋರಿಕೆ ತುರ್ತು ನಿರ್ವಹಣೆ ಯೋಜನೆ ಅನ್ವಯ ತೈಲ ಸೋರಿಕೆ ಪ್ರತಿಕ್ರಿಯೆ ಉಪಕರಣ ಖರೀದಿಗೆ 13.00 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸುವ ಬಗ್ಗೆ ಅನುಮೋದನೆ.
ಇದನ್ನೂ ಓದಿ: ಕಾಂಗ್ರೆಸ್ ‘ಪಟ್ಟದಾಟ’ಕ್ಕೆ ತೆರೆ ಯಾವಾಗ?: ಸಾಧ್ಯಾಸಾಧ್ಯತೆ ಬಗ್ಗೆ ‘ಕೈ ಪಾಳಯದಲ್ಲೇ ಹೀಗೊಂದು ಚರ್ಚೆ
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗಳ 10.61 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
ಕಲಬುರಗಿ ಜಿಲ್ಲೆ, ಕಲಬುರಗಿ ತಾಲ್ಲೂಕು, ಶರಣಸಿರಸಗಿ ಗ್ರಾಮದ ಸ.ನಂ. 243/*/*ರಲ್ಲಿ 4.00 ಎಕರೆ “ಗೋಮಾಳ” ಜಮೀನನ್ನು ಕಲಬುರಗಿ ಜಿಲ್ಲಾ ಆದಿ ವೀರಶೈವ ಬಣಜಿಗ ಸಮಾಜ ಇವರಿಗೆ ಮಂಜೂರು.
ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟದ ಹತ್ತಿರ ಕಬಿನಿ ನದಿಗೆ ಅಡ್ಡಲಾಗಿ ವಿಯರ್ ನಿರ್ಮಾಣ ಕಾಮಗಾರಿಯನ್ನು ರೂ.15.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಾಲೀಕತ್ವದಲ್ಲಿರುವ ಪ್ರಾಧಿಕಾರದ ಹಾಗೂ ಬಡಾವಣೆಯಲ್ಲಿರುವ ಉದ್ಯಾನವನ/ ಬಯಲು ಜಾಗಕ್ಕೆ ಕಾಯ್ದಿರಿಸಿರುವ ಮೈಸೂರು ಜಿಲ್ಲೆ, ಸಾತಗಳ್ಳಿ ಗ್ರಾಮದ ಸ.ನಂ. 85, 88, 106 ಹಾಗೂ 107ರಲ್ಲಿನ ಕೆರೆ ಜಾಗವನ್ನು ಹೊರತುಪಡಿಸಿ 17.35 ಎಕರೆ ಜಮೀನನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಅನುಮೋದನೆ.
ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿನ ಬೆಳ್ಳೂರು ಹೋಬಳಿಯ ದಾಸನಕೆರೆ ಅಭಿವೃದ್ಧಿ ಹಾಗೂ ವಿದ್ಯುದ್ದೀಕರಣ ಕಾಮಗಾರಿಗಳನ್ನು 25.00 ಕೋಟಿಗಳ 5/5 ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
32 ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(GTTC) ಗಳಲ್ಲಿ ಹೊಸ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ರೂ.90.00 ಕೋಟಿಗಳ ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
ರಾಯಚೂರು ಜಿಲ್ಲೆ, ರಾಯಚೂರು ಮತ್ತು ತಾಲ್ಲೂಕಿನ ವ್ಯಾಪ್ತಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಡಿ ಬರುವ ವಿತರಣಾ ಕಾಲುವೆ ಸಂಖ್ಯೆ: 102 ಮತ್ತು 1022 ಗಳ ಅಚ್ಚುಕಟ್ಟು ಪ್ರದೇಶದಲ್ಲಿ 8320 ಹೆಕ್ಟೇರ್ ಬಾಧಿತ ಅಚ್ಚುಕಟ್ಟಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 182.70 ಕೋಟಿಗಳ ಅಂದಾಜು ಮೊತ್ತದ “ಮಟಮಾರಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ,
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿ ಜಿಲ್ಲೆಗೆ 15 ವಿದ್ಯಾರ್ಥಿಗಳಂತೆ 500 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರೂ.15.00 ಕೋಟಿಗಳ ವೆಚ್ಚದಲ್ಲಿ 02 ವರ್ಷಗಳ ವಸತಿ ಸಹಿತ ಪಿ.ಯು.ಸಿ. (ಪ್ರಥಮ ಪಿ.ಯು.ಸಿ ಮತ್ತು ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ) ಶಿಕ್ಷಣದೊಂದಿಗೆ NEET/ JEE/ CET ಪರೀಕ್ಷಾ ಪೂರ್ವ ತರಬೇತಿ ನೀಡಲು ಅನುಮೋದನೆ.
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನೆರವಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿವರ್ತನೆ (KSHET) ಯೋಜನೆಯಡಿ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಸಾಲದ ಮಾತುಕತೆ ಸಿದ್ಧತೆಯ ಮಾನದಂಡಗಳ ಪ್ರಕಾರ 53 ಸರ್ಕಾರಿ ಪದವಿ ಕಾಲೇಜುಗಳು, 14 ಸರ್ಕಾರಿ ಪಾಲಿಟೆಕ್ನಿಕ್ಗಳು, 5 ಉತ್ಕೃಷ್ಟತಾ ಕೇಂದ್ರಗಳು ಹಾಗೂ ಯೋಜನಾ ನಿರ್ವಹಣಾ (PMU) ಘಟಕಕ್ಕೆ ಒಟ್ಟು ರೂ.802.00 ಕೋಟಿಗಳ ಮೊತ್ತದ ವಸ್ತುಗಳ ಮುಂಗಡ ಖರೀದಿಗೆ ಅನುಮೋದನೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಶಾಲಾಪೂರ್ವ ಶಿಕ್ಷಣ ಕಿಟ್ಗಳನ್ನು ಪ್ರತಿ ಕೇಂದ್ರಕ್ಕೆ, ರೂ.3000/- ಘಟಕ ವೆಚ್ಚದಲ್ಲಿ 69,922 ಅಂಗನವಾಡಿಗಳಿಗೆ 20.98 ಕೋಟಿಗಳ ಮೊತ್ತದಲ್ಲಿ ಖರೀದಿಸುವ ಬಗ್ಗೆ ಅನುಮೋದನೆ.
ಕೋರಮಂಡಲ್ ಶುಗರ್ಸ್ ಲಿಮಿಟೆಡ್ ಇವರಿಗೆ ಮಂಜೂರಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಸ.ನಂ. 119, ಹೊಸ ಸ.ನಂ. 151 ರಲ್ಲಿನ 100 ಎಕರೆ ಜಮೀನನ್ನು ಶ್ರೀ ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್ ನ ಸಮೂಹ ಕಂಪನಿಯಾದ ಮೆ. ಹೇಮಗಿರಿ ಶುಗರ್ಸ್ & ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್ಗೆ ಮಾರಾಟ ಮಾಡಲು ಅನುಮತಿ.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ನಮ್ಮ ಕ್ಲಿನಿಕ್ಗಳಿಗೆ ಅವಶ್ಯವಿರುವ ಪ್ರಯೋಗಾಲಯ ಉಪಭೋಗ್ಯಗಳನ್ನು (RD KIT) ಮತ್ತು ವಿವಿಧ ಉಪಕರಣಗಳನ್ನು 22.00 ಕೋಟಿಗಳ ಅಂದಾಜು ಮೊತ್ತದಲ್ಲಿ 15 ಹಣಕಾಸು ಆಯೋಗದ ಅನುದಾನದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿನ ವೈದ್ಯಕೀಯ ಬೋಧನಾ ಕಾಲೇಜು ಆಸ್ಪತ್ರೆಗಳಲ್ಲಿನ ABArK ಕ್ಲೇಮ್ ಪ್ರಕ್ರಿಯೆಯನ್ನು ರೂ.17.85 ಕೋಟಿಗಳ ಅಂದಾಜು ಮೊತ್ತದಲ್ಲಿ ಸುವ್ಯವಸ್ಥಿತಗೊಳಿಸುವ ಡಿಜಿಟಲೀಕರಣಕ್ಕೆ ಅನುಮೋದನೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ತಲಾ 50 ಹಾಸಿಗೆಗಳ MCH ಆಸ್ಪತ್ರೆ ನಿರ್ಮಾಣ ಕಾಮಗಾರಿಗಳನ್ನು ಒಟ್ಟಾರೆ ರೂ.38.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ.
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 52 ಕ್ರಿಮಿನಲ್ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್ ಅನುಮೋದನೆ.
ಬೆಂಗಳೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ಕಾರಾಗೃಹ ಇಲಾಖೆಗೆ ಸೇರಿದ ಜಮೀನಿನಲ್ಲಿ Dealership Model ಮಾದರಿಯಲ್ಲಿ M/s Indian Oil Corporation Ltd., (IOCL) ವತಿಯಿಂದ ಪೆಟ್ರೋಲ್ ಪಂಪ್ ಮತ್ತು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಅನುಮೋದನೆ.

