AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಗ್ರಾಮ ಪಂಚಾಯತಿಗಳ ಗ್ರಂಥಪಾಲಕರಿಗೆ ಕನಿಷ್ಠ ವೇತನ ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ

ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್​ಗಳಲ್ಲಿ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಕನಿಷ್ಠ ವೇತನ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಮಾಸಿಕ ಗೌರವಧನವನ್ನು ಏಳು ಸಾವಿರದಿಂದ ಹನ್ನೆರಡು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.

ಕರ್ನಾಟಕದ ಗ್ರಾಮ ಪಂಚಾಯತಿಗಳ ಗ್ರಂಥಪಾಲಕರಿಗೆ ಕನಿಷ್ಠ ವೇತನ ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ
ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯತಿ ಗ್ರಂಥಪಾಲಕರಿಗೆ ಕನಿಷ್ಠ ವೇತನ ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ
ಸಂಜಯ್ಯಾ ಚಿಕ್ಕಮಠ
| Updated By: Rakesh Nayak Manchi|

Updated on: Aug 17, 2023 | 8:53 PM

Share

ಕಲಬುರಗಿ, ಆಗಸ್ಟ್ 17: ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಮಾಸಿಕ ಕನಿಷ್ಠ ಮೂಲವೇತನ ನಿಗದಿಪಡಿಸಿ ಅವರ ಮಾಸಿಕ ಗೌರವಧನವನ್ನು ಏಳು ಸಾವಿರದಿಂದ ಹನ್ನೆರಡು ಸಾವಿರ ರೂಪಾಯಿಗೆ ಹೆಚ್ಚಿಸಿ ಕರ್ನಾಟಕ ಸರ್ಕಾರ (Karnataka Govt) ಆದೇಶ ಹೊರಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೇತನ ಹೆಚ್ಚಿಸಿರುವ ಬಗ್ಗೆ ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಗ್ರಂಥಪಾಲಕರ ಸಂಘದ ಪ್ರತಿನಿಧಿಗಳು ಜುಲೈ 27 ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ತಮ್ಮ ಹಲವಾರು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದರು. ಈ ಬೇಡಿಕೆಗಳಲ್ಲಿ ಪ್ರಮುಖವಾಗಿ ವೇತನ ಪರಿಷ್ಕರಣೆಯ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಹೊಸ ಪಡಿತರ ಚೀಟಿ ಮಂಜೂರು ಮಾಡದಂತೆ ಸರ್ಕಾರ ಆದೇಶ; ಸದ್ಯಕ್ಕಿಲ್ಲ ಅರ್ಜಿ ಸಲ್ಲಿಕೆ

ಸಮಾಜದ ಪ್ರಜ್ಞಾವಂತಿಕೆ ಹಾಗೂ ಗ್ರಾಮೀಣ ಯುವಜನರ ಉಜ್ವಲ ಭವಿಷ್ಯದ ಅವಕಾಶಕ್ಕೆ ಸಹಾಯಕವಾಗಿ ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳು ಅರಿವು ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲು ಗ್ರಂಥಪಾಲಕರ ಕೆಲಸದ ಸಮಯವನ್ನು ಹೆಚ್ಚಿಸಿ, ಹೆಚ್ಚಿದ ಗಂಟೆಗಳು ಹಾಗೂ ವಿಭಜಿತ ಸಮಯವನ್ನು ಗಮನದಲ್ಲಿರಿಸಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಕನಿಷ್ಠ ಮಾಸಿಕ ಮೂಲ ವೇತನವನ್ನು ನಿಗದಿಪಡಿಸಿ ಜೊತೆಗೆ ಕಾರ್ಮಿಕ ಇಲಾಖೆ ಕಾಲಕಾಲಕ್ಕೆ ನಿಗದಿಪಡಿಸುವ ವ್ಯತ್ಯಯವಾಗುವ ತುಟ್ಟಿ ಭತ್ಯೆಯನ್ನು ಪಾವತಿಸುವಂತೆ ಮಹತ್ವಾಕಾಂಕ್ಷಿ ಆದೇಶವನ್ನು ಹೊರಡಿಸಿದೆ.

ಬಸವಣ್ಣನವರ ಅರಿವೇ ಗುರು ತತ್ವದ ಆಶಯದಂತೆ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳನ್ನಾಗಿ ಮಾರ್ಪಡಿಸಿ ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಗ್ರಾಮೀಣ ವಿಶ್ವವಿದ್ಯಾಲಯಗಳಂತೆ ರೂಪಿಸಲು ಈ ಮಹತ್ವಾಕಾಂಕ್ಷಿ ಹೆಜ್ಜೆ ಇರಿಸಲಾಗಿದೆ.

ಸಮೃದ್ಧ ಸಮಾಜ ನಿರ್ಮಿಸಲು ಸ್ಥಿರ ಸಮಾಜದ ಅಗತ್ಯವಿದೆ. ಸ್ಥಿರ ಸಮಾಜ ನಿರ್ಮಾಣವಾಗಲು ಪ್ರಬುದ್ಧ ಸಮಾಜದ ಅಗತ್ಯವಿದೆ. ನಾಡಿನ ಗ್ರಂಥಾಲಯ ಹಾಗೂ ಇವುಗಳನ್ನು ಪೂರ್ಣಬಳಕೆಗೆ ಸನ್ನದ್ಧಗೊಳಿಸುವ ಗ್ರಂಥಪಾಲಕರನ್ನು ಸಬಲೀಕರಣಗೊಳಿಸಲು ಹೊರಡಿಸಲಾಗಿರುವ ಈ ಆದೇಶ ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ನಮ್ಮ ಸರ್ಕಾರದ ಬದ್ಧತೆಯ ಪ್ರತೀಕವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ