AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಕೆಆರ್‌ಎಸ್‌ಗೆ ಒಳಹರಿವು ಮತ್ತಷ್ಟು ಕುಸಿತ; ತುಂಗಭದ್ರೆಯಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ನೀರು

ಕರ್ನಾಟಕದ ಜಲಾಶಯಗಳ ಜುಲೈ 17ರ ನೀರಿನ ಮಟ್ಟ: ಕರ್ನಾಟಕದಲ್ಲಿ ಮುಂಗಾರು ದುರ್ಬಲವಾಗಿರುವ ಪರಿಣಾಮ ಪ್ರಮುಖ ಜಲಾಶಯಗಳ ಒಳಹರಿವು ನಿರೀಕ್ಷಿತ ಮಟ್ಟ ತಲುಪಿಲ್ಲ. ಕೆಆರ್‌ಎಸ್‌ಗೆ ಒಳಹರಿವು ಮತ್ತಷ್ಟು ಇಳಿಕೆಯಾಗಿದ್ದು, ಹೇಮಾವತಿ, ತುಂಗಭದ್ರೆ ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಡಿಮೆಯಾಗಿದೆ.

Karnataka Dam Water Level: ಕೆಆರ್‌ಎಸ್‌ಗೆ ಒಳಹರಿವು ಮತ್ತಷ್ಟು ಕುಸಿತ; ತುಂಗಭದ್ರೆಯಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ನೀರು
ಕೆಆರ್​ಎಸ್ ಡ್ಯಾಂ (ಸಾಂದರ್ಭಿಕ ಚಿತ್ರ)Image Credit source: tv9
ಗಣಪತಿ ಶರ್ಮಾ
|

Updated on:Jul 17, 2026 | 12:04 PM

Share

ಮುಖ್ಯಾಂಶಗಳು

  • ಕೆಆರ್‌ಎಸ್ ಒಳಹರಿವು ಮತ್ತಷ್ಟು ಕುಸಿತ
  • ತುಂಗಭದ್ರೆಯಿಂದ ನೀರು ಬಿಡಲು ರೈತರ ಒತ್ತಾಯ
  • ಎಲ್ಲ ಡ್ಯಾಂಗಳಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ನೀರು

ಬೆಂಗಳೂರು, ಜುಲೈ 17: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon Rain) ಕೊರತೆ ಮುಂದುವರಿದಿರುವ ಪರಿಣಾಮ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ (Karnataka Dam Water Level) ಏರಿಕೆ ಕಾಣುತ್ತಿಲ್ಲ. ಕೆಆರ್‌ಎಸ್, ಹೇಮಾವತಿ, ತುಂಗಭದ್ರೆ ಹಾಗೂ ಆಲಮಟ್ಟಿ ಜಲಾಶಯಗಳ ಒಳಹರಿವು ಸೀಮಿತ ಪ್ರಮಾಣದಲ್ಲಿದ್ದು, ರೈತರು ಹಾಗೂ ನೀರಾವರಿ ವಲಯದ ಅಧಿಕಾರಿಗಳ ಆತಂಕ ಹೆಚ್ಚಾಗಿದೆ. ಬೆಂಗಳೂರಿಗೆ (Bengaluru) ನೀರು ಪೂರೈಸುವ ಪ್ರಮುಖ ಡ್ಯಾಂ ಕೆಆರ್​​ಎಸ್​ಗೆ ಒಳಹರಿವು ಮತ್ತೆ ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕೆಆರ್‌ಎಸ್‌ಗೆ ಒಳಹರಿವು ಮತ್ತೆ ಇಳಿಕೆ

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಶುಕ್ರವಾರ ಬೆಳಿಗ್ಗೆ ನೀರಿನ ಮಟ್ಟ 92.92 ಅಡಿ ದಾಖಲಾಗಿದೆ. ಜಲಾಶಯಕ್ಕೆ 1,335 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 1,090 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಪ್ರಸ್ತುತ 17.753 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಕೆಆರ್‌ಎಸ್‌ಗೆ ಒಳಹರಿವು ಇನ್ನೂ ಹೆಚ್ಚಾಗಿಲ್ಲ.

ಹೇಮಾವತಿ ಜಲಾಶಯದಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ಸಂಗ್ರಹ

ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿ (37 ಟಿಎಂಸಿ) ಆಗಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 2903.91 ಅಡಿ ಇದ್ದು, 22.314 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,512 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 350 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.

ಕಳೆದ ವರ್ಷದ ಇದೇ ದಿನ ಜಲಾಶಯದಲ್ಲಿ 2920.99 ಅಡಿ ನೀರಿನ ಮಟ್ಟ ಹಾಗೂ 36.127 ಟಿಎಂಸಿ ನೀರು ಸಂಗ್ರಹವಿತ್ತು. ಆಗ 6,413 ಕ್ಯೂಸೆಕ್ ಒಳಹರಿವು ಹಾಗೂ 2,900 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು. ಹೀಗಾಗಿ ಈ ಬಾರಿಯ ಸಂಗ್ರಹ ಹಾಗೂ ಒಳಹರಿವು ಎರಡೂ ಗಮನಾರ್ಹವಾಗಿ ಕಡಿಮೆಯಾಗಿದೆ.

ತುಂಗಭದ್ರೆಯಲ್ಲಿ 26.125 ಟಿಎಂಸಿ ನೀರು ಸಂಗ್ರಹ

ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಆಗಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 1603.32 ಅಡಿ ಇದ್ದು, 26.125 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 4,349 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಪ್ರಸ್ತುತ 4,120 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 751 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಬಿಡುಗಡೆ ಮಾಡಲಾಗಿದ್ದು, ನದಿಗೆ ಯಾವುದೇ ನೀರನ್ನು ಹರಿಸಲಾಗುತ್ತಿಲ್ಲ.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಲಾದ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದೆ. ಪ್ರಸ್ತುತ ನೀರಿನ ಮಟ್ಟ 517.40 ಮೀಟರ್ ದಾಖಲಾಗಿದೆ. ಜಲಾಶಯಕ್ಕೆ 5,686 ಕ್ಯೂಸೆಕ್ ಒಳಹರಿವು ಬರುತ್ತಿದ್ದು, 2,597 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.

ಬಸವಸಾಗರ ಜಲಾಶಯದ ನೀರಿನ ಮಟ್ಟ

  • ಗರಿಷ್ಟ ಮಟ್ಟ: 492.25 ಮೀಟರ್
  • ಇಂದಿನ ಮಟ್ಟ : 488.60 ಮೀಟರ್
  • ಒಳ ಹರಿವು: 154 ಕ್ಯೂಸೆಕ್
  • ಹೊರ ಹರಿವು : 1651 ಕ್ಯೂಸೆಕ್

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆಗೆ ರೈತರ ಒತ್ತಾಯ

ಕೊಪ್ಪಳ ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಬರದ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ನೀರಾವರಿ ವಲಯ ಕಚೇರಿ ಎದುರು ನೀರು ಬಳಕೆ ಸಹಕಾರ ಸಂಘದ ರೈತರು ಪ್ರತಿಭಟನೆ ನಡೆಸಿ, ಹುಲಗಿ, ಶಿವಪುರ ಹಾಗೂ ವಿಜಯನಗರ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಒತ್ತಾಯಿಸಿದರು. ‘ನಮ್ಮ ನೀರು, ನಮ್ಮ ಹಕ್ಕು’ ಎಂಬ ಘೋಷಣೆಗಳನ್ನು ಕೂಗಿ ಅಧಿಕಾರಿಗಳ ಗಮನ ಸೆಳೆದರು.

ಇದನ್ನೂ ಓದಿ: ಮಳೆ ಕೊರತೆ, ಕರ್ನಾಟಕದ ಕೆಲವೆಡೆ ವಾಡಿಕೆಗಿಂತ 3-5 ಡಿಗ್ರಿ ಹೆಚ್ಚಿರಲಿದೆ ಗರಿಷ್ಠ ತಾಪಮಾನ

ಜಲಾಶಯದಲ್ಲಿ 25 ಟಿಎಂಸಿಗೂ ಅಧಿಕ ನೀರು ಸಂಗ್ರಹವಿದ್ದರೂ, ಒಳಹರಿವು ಇಳಿಮುಖವಾಗಿರುವುದರಿಂದ ಪರಿಸ್ಥಿತಿಯನ್ನು ಪರಿಶೀಲಿಸಿ ಮುಖ್ಯ ಇಂಜಿನಿಯರ್ ಆಗಮಿಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:31 am, Fri, 17 July 26

Follow Us