ಅಜಾನ್ ಅಥವಾ ಇಸ್ಲಾಂ ಧಾರ್ಮಿಕ ಕರೆಯನ್ನು ನಿಷೇಧಿಸಿಲ್ಲ; ಧ್ವನಿವರ್ಧಕಗಳನ್ನು ನಿಯಂತ್ರಿಸಲಾಗಿದೆಯಷ್ಟೇ: ಸ್ಪಷ್ಟನೆ
ಧ್ವನಿವರ್ಧಕಗಳ ಮೂಲಕ ಅಜಾನ್ ಅಥವಾ ಯಾವುದೇ ಇಸ್ಲಾಮಿಕ್ ಕರೆಯನ್ನು ಇಲಾಖೆ ನಿರ್ಬಂಧನೆ ಹೇರಿದ ಅವಧಿಯಲ್ಲಿ ನೀಡುವಂತಿಲ್ಲ ಎಂಬುದರ ಅರ್ಥ ಅಜಾನ್ ನಡೆಸಬಾರದು ಎಂದಲ್ಲ, ಬದಲಾಗಿ ಧ್ವನಿವರ್ಧಕಗಳನ್ನಷ್ಟೇ ನಿಯಂತ್ರಿಸಲಾಗಿದೆ

ಬೆಂಗಳೂರು: ಶಬ್ದ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಮಾಲಿನ್ಯ ನಿಯಂತ್ರಣಾ ಮಂಡಳಿಯ ಸೂಚನೆಯ ಅನುಸಾರ ಮಸೀದಿ ಹಾಗೂ ದರ್ಗಾಗಳಲ್ಲಿನ ಧ್ವನಿವರ್ಧಕಗಳಿಗೆ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ತನಕ ನಿಷೇಧ ಹೇರಿ ಹೊರಡಿಸಿದ್ದ ಆದೇಶದ ಕುರಿತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸ್ಪಷ್ಟನೆ ನೀಡಿದೆ. ನಿನ್ನೆ ಹೊರಡಿಸಲಾಗಿದ್ದ ಆದೇಶದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ನಡುವಿನ ಅವಧಿಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಹೇಳಲಾಗಿದೆಯೇ ವಿನಃ ಧಾರ್ಮಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಹೇಳಿಲ್ಲ. ಧ್ವನಿವರ್ಧಕಗಳ ಮೂಲಕ ಅಜಾನ್ ಅಥವಾ ಯಾವುದೇ ಇಸ್ಲಾಮಿಕ್ ಕರೆಯನ್ನು ಇಲಾಖೆ ನಿರ್ಬಂಧನೆ ಹೇರಿದ ಅವಧಿಯಲ್ಲಿ ನೀಡುವಂತಿಲ್ಲ ಎಂಬುದರ ಅರ್ಥ ಅಜಾನ್ ನಡೆಸಬಾರದು ಎಂದಲ್ಲ, ಬದಲಾಗಿ ಧ್ವನಿವರ್ಧಕಗಳನ್ನಷ್ಟೇ ನಿಯಂತ್ರಿಸಲಾಗಿದೆ ಎಂದು ತಿಳಿಸಿದೆ.
ನಿನ್ನೆ ಆದೇಶ ಪ್ರಕಟವಾದ ನಂತರ ಮುಸ್ಲಿಂ ಸಮುದಾಯದ ಅನೇಕ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರಲ್ಲದೇ, ಹಲವೆಡೆ ಅಜಾನ್ ಅಥವಾ ಇಸ್ಲಾಮಿಕ್ ಕರೆಗಳ ಮೇಲೆಯೇ ನಿರ್ಬಂಧ ಹೇರಲಾಗಿದೆ ಎಂಬರ್ಥದಲ್ಲಿ ಬಿಂಬಿಸಲಾಗಿತ್ತು. ಅದಾದ ನಂತರ ಈ ಆದೇಶದ ಹಿಂದೆ ಆಡಳಿತ ಪಕ್ಷ ಬಿಜೆಪಿಯ ಪಿತೂರಿ ಇದೆ. ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆಗಳನ್ನು ಹತ್ತಿಕ್ಕುವ ಯತ್ನ ಆಗುತ್ತಿದೆ ಎಂಬ ರೀತಿಯಲ್ಲಿ ವಿಶ್ಲೇಷಿಸಲಾಗಿತ್ತು. ಆದರೆ, ಇಂದು ಸ್ಪಷ್ಟನೆ ನೀಡಿರುವ ಕರ್ನಾಟಕ ವಕ್ಫ್ ಮಂಡಳಿ, ಇದು ಧಾರ್ಮಿಕ ಆಚರಣೆಯ ಮೇಲಿನ ನಿಷೇಧವಲ್ಲ, ಧ್ವನಿವರ್ಧಕಗಳ ನಿಯಂತ್ರಣ ಎಂದು ಸ್ಪಷ್ಟವಾಗಿ ತಿಳಿಸಿದೆ.
ಮಸೀದಿ ಅಥವಾ ದರ್ಗಾಗಳಲ್ಲಿ ಬೇರೆ ಅವಧಿಯಲ್ಲಿ ಧ್ವನಿವರ್ಧಕ ಬಳಸುವಾಗಲೂ ಅದರಿಂದ ಹೊರಹೊಮ್ಮುವ ಧ್ವನಿ ಪ್ರಮಾಣ 10 ಡೆಸಿಬಲ್ ದಾಟಬಾರದು ಎನ್ನುವುದನ್ನು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಆದೇಶದ ಕುರಿತು ಇಲ್ಲಸಲ್ಲದ ಗೊಂದಲ ಬೇಡ. ಇದರಲ್ಲಿ ಯಾವುದೇ ರಾಜಕೀಯ ಒತ್ತಡವೂ ಇಲ್ಲ ಎಂದು ಕರ್ನಾಟಕ ವಕ್ಫ್ ಮಂಡಳಿ ತಿಳಿಸಿದೆ.
ಮಸೀದಿ ಹಾಗೂ ದರ್ಗಾದ ಸುತ್ತಮುತ್ತಲೂ ಕೆಲ ನಿಯಮಗಳನ್ನು ಪಾಲಿಸಲು ಕರ್ನಾಟಕ ವಕ್ಫ್ ಮಂಡಳಿ ಸೂಚಿಸಿದ್ದು, ಅವು ಇಂತಿವೆ:
- ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಧ್ವನಿವರ್ಧಕ ಬಳಸಕೂಡದು
- ಬೇರೆ ಸಮಯದಲ್ಲಿ ಬಳಸಲಾಗುವ ಧ್ವನಿವರ್ಧಕದ ಶಬ್ಧವೂ ಗಾಳಿಯ ಗುಣಮಟ್ಟಕ್ಕೆ ಅನುಗುಣವಾಗಿರಬೇಕು ಹಾಗೂ ಮಿತಿಯಲ್ಲಿರಬೇಕು
- ಬೇರೆ ಸಂದರ್ಭದಲ್ಲಿಯೂ ಅಜಾನ್ ಹೊರತುಪಡಿಸಿ ಚಂದ್ರ ದರ್ಶನ, ಯಾವುದೇ ಸಾವು ಸಂಭವಿಸಿದಾಗ ಹಾಗೂ ಇತರೆ ಅತಿ ಪ್ರಮುಖ ಸಂದರ್ಭದಲ್ಲಿ ಮಾತ್ರ ಬಳಸಬೇಕು
- ಮಸೀದಿಯಲ್ಲಿ ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆ ಅಥವಾ ಯಾವುದೇ ಕಾರ್ಯಕ್ರಮಗಳಿದ್ದರೆ ಕಟ್ಟಡದ ಆವರಣದಲ್ಲಿ ಧ್ವನಿವರ್ಧಕಗಳನ್ನು ಬಳಸಬೇಕು. ಧ್ವನಿ ಮಾಪಕಗಳನ್ನು ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಅಳವಡಿಸಿಕೊಳ್ಳಬಹುದು
- ಮಸೀದಿಯಲ್ಲಿ ಪ್ರಾರ್ಥನೆಗೆ ಕರೆ ನೀಡುವವರಿಗೆ ಧ್ವನಿವರ್ಧಕಗಳನ್ನು ಸಮರ್ಪಕವಾಗಿ ನಿರ್ವಹಿಸಲು ತರಬೇತಿ ನೀಡಬೇಕು
- ಯಾವುದೇ ಸಂದರ್ಭದಲ್ಲೂ ಅತಿಯಾದ ಶಬ್ಧ ಹೊರಸೂಸುವ ಪಟಾಕಿ ಅಥವಾ ಸಿಡಿಮದ್ದುಗಳನ್ನು ಮಸೀದಿ ಹಾಗೂ ದರ್ಗಾ ಸುತ್ತಮುತ್ತಲ ಜಾಗದಲ್ಲಿ ಬಳಸುವಂತಿಲ್ಲ
- ಮಸೀದಿಯ ಆವರಣದಲ್ಲಿ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಸ್ಥಳ, ಚಟುವಟಿಕೆಗಳಲ್ಲಿ ಅತಿಯಾದ ಶಬ್ಧ ಹೊರಡಿಸುವುದನ್ನು ತಪ್ಪಿಸಬೇಕು ಹಾಗೂ ಅದಕ್ಕೆ ಧ್ವನಿ ಮಾಪಕ ಅಳವಡಿಸಿಕೊಳ್ಳಬಹುದು
- ಮಸೀದಿ, ದರ್ಗಾ ಸುತ್ತಮುತ್ತಲಿನ ಖಾಲಿ ಆವರಣದಲ್ಲಿ ಹಣ್ಣಿನ ಮರಗಳು, ನೆರಳು ನೀಡುವ ಮರಗಳು, ಅಲಂಕಾರಿಕ ಸಸ್ಯಗಳನ್ನು ಬೆಳೆಸಲು ಗಮನಹರಿಸಬೇಕು. ಅಂತೆಯೇ, ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವಂತೆ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಗಮನ ಹರಿಸಬೇಕು
- ಮಸೀದಿ, ದರ್ಗಾ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಬೇಕು
- ಮಸೀದಿ, ದರ್ಗಾ ಬಳಿ ಭಿಕ್ಷಾಟನೆ ಮಾಡುವುದನ್ನು ಪ್ರೋತ್ಸಾಹಿಸಬಾರದು. ಅದರ ಬದಲಾಗಿ, ಸಮಾಲೋಚನೆ ನಡೆಸಿ ಪರೋಪಕಾರಿ ಕ್ರಮಗಳನ್ನು ಕೈಗೊಳ್ಳಬೇಕು
ಇದನ್ನೂ ಓದಿ: ಮಸೀದಿ ಹಾಗೂ ದರ್ಗಾದಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಧ್ವನಿ ವರ್ಧಕ ಬಳಸುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ
ಇದನ್ನೂ ಓದಿ: ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್ಸ್ಪೀಕರ್ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ