
ಕೋಲಾರ, ಮೇ 12: ಮನುಷ್ಯರಿಗೆ ರೋಗ ಬಂದರೆ ಆಸ್ಪತ್ರೆಗೆ ಹೋಗುತ್ತೇವೆ. ಆದರೆ ರೈತರು ಬೆಳೆಯುವ ಬೆಳೆಗಳಿಗೆ ರೋಗ ಬಂದರೆ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರಿಸಲು ಕೋಲಾರ (Kolar) ಜಿಲ್ಲಾಡಳಿತವು ದೇಶದಲ್ಲೇ ಮೊದಲ ಬಾರಿಗೆ ರೈತರಿಗಾಗಿ ‘ಅಗ್ರಿ ಕ್ಲಿನಿಕ್’ (Agri Clinic) ಆರಂಭಿಸುವ ಅದ್ಭುತ ಯೋಜನೆಯನ್ನು ರೂಪಿಸಿದೆ.
ಕೃಷಿ ಪ್ರಧಾನ ಜಿಲ್ಲೆಯಾದ ಕೋಲಾರದಲ್ಲಿ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಅವೈಜ್ಞಾನಿಕ ಬಳಕೆಯಿಂದ ಮಣ್ಣಿನ ಸತ್ವ ಕಡಿಮೆಯಾಗುತ್ತಿದೆ. ತರಕಾರಿಗಳಲ್ಲಿ ಲೆಡ್ ಹಾಗೂ ಇತರೆ ವಿಷಕಾರಿ ಅಂಶಗಳು ಪತ್ತೆಯಾಗುತ್ತಿರುವುದು ಮತ್ತು ಬೆಳೆಗಳು ನಿರಂತರವಾಗಿ ರೋಗಕ್ಕೆ ತುತ್ತಾಗುತ್ತಿರುವುದು ಕೃಷಿ ವಲಯಕ್ಕೆ ಆತಂಕ ತಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು, ತಜ್ಞರೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಸುಮಾರು 1.36 ಕೋಟಿ ರೂ. ಯೋಜನಾ ವರದಿಯನ್ನು ಸಲ್ಲಿಸಿದ್ದಾರೆ.
ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಒಬ್ಬ ಕೃಷಿ ತಜ್ಞರನ್ನು ನೇಮಕ ಮಾಡಲಾಗುತ್ತದೆ. ತಜ್ಞರು ರೈತರ ಹೊಲಗಳಿಗೆ ಭೇಟಿ ನೀಡಿ, ಮಣ್ಣಿನ ಪೌಷ್ಠಿಕಾಂಶ ಮತ್ತು ಬೆಳೆಗಳಿಗೆ ಬಂದಿರುವ ರೋಗಗಳನ್ನು ಪರಿಶೀಲಿಸಿ ಸೂಕ್ತ ಚಿಕಿತ್ಸೆ ಸೂಚಿಸಲಿದ್ದಾರೆ. ರೈತರಿಗೆ ಅಗತ್ಯವಿರುವ ತಾಂತ್ರಿಕ ಮಾಹಿತಿ, ಹವಾಮಾನ ಮುನ್ಸೂಚನೆ ಮತ್ತು ಕೀಟನಾಶಕಗಳ ಸರಿಯಾದ ಬಳಕೆಯ ಬಗ್ಗೆ ಒಂದೇ ಸ್ಥಳದಲ್ಲಿ ಮಾಹಿತಿ ಸಿಗಲಿದೆ.
ಇದನ್ನೂ ಓದಿ ಕಬ್ಬನ್ ಪಾರ್ಕ್ನಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಮಾವು ಪ್ರಿಯರು
ಕೋಲಾರದ ರೈತರು ಟೊಮ್ಯಾಟೊ, ಮಾವು, ಪಪ್ಪಾಯ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲು ಪ್ರಸಿದ್ಧರಾಗಿದ್ದಾರೆ. ಆದರೆ ಸಾವಯವ ಗೊಬ್ಬರದ ಬಳಕೆ ಕಡಿಮೆಯಾಗಿ ಮಣ್ಣಿನಲ್ಲಿ ಇಂಗಾಲದ ಪ್ರಮಾಣ ಕ್ಷೀಣಿಸುತ್ತಿದೆ. ಈ ಯೋಜನೆಯು ಮಣ್ಣನ್ನು ವಿಷಮುಕ್ತಗೊಳಿಸಿ, ಮುಂದಿನ ಪೀಳಿಗೆಗೆ ಉತ್ತಮ ಬೇಸಾಯ ಪದ್ಧತಿಯನ್ನು ಪರಿಚಯಿಸುವ ಗುರಿ ಹೊಂದಿದೆ. ಒಟ್ಟಾರೆಯಾಗಿ, ಈ ‘ಅಗ್ರಿ ಕ್ಲಿನಿಕ್’ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದರೆ, ಇದು ಕೃಷಿ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದಲ್ಲದೆ ರಾಜ್ಯದ ಇತರ ಜಿಲ್ಲೆಗಳಿಗೂ ಮಾದರಿಯಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ