ಕೋಲಾರ: ಕಾಂಗ್ರೆಸ್ ಮುಖಂಡ ಕೊಲೆ ಪ್ರಕರಣ, ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಸಚಿವ ಪರಮೇಶ್ವರ್
ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡ, ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷರೂ ಆಗಿದ್ದ ಶ್ರೀನಿವಾಸ್ ಮೇಲೆ ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದರು.

ಕೋಲಾರ, ಅಕ್ಟೋಬರ್ 23: ಕೋಲಾರದ ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಮುಖಂಡ ಎಂ ಶ್ರೀನಿವಾಸ್ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಗೃಹ ಸಚಿವ ಜಿ ಪರಮೇಶ್ವರ (G Parameshwara) ಅಲ್ಲಿಗೆ ಧಾವಿಸಿದ್ದಾರೆ. ಅರ್ಎಲ್ ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿದ ಅವರು, ತಮ್ಮ ಆಪ್ತರೂ ಆಗಿದ್ದ ಹತ್ಯೆಗೀಡಾದ ಶ್ರೀನಿವಾಸನ್ ಕುಟುಂಬದವರಿಗೆ ಸಾಂತ್ವನ ಹೇಳಿದರು. ಪರಮೇಶ್ವರ್ ಜತೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar), ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಸಮೃದ್ಧಿ ಮಂಜುನಾಥ್, ಅನಿಲ್ ಕುಮಾರ್ ಇದ್ದರು. ಹತ್ಯೆಗೀಡಾದ ಶ್ರೀನಿವಾಸ್ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತರೂ ಆಗಿದ್ದರು.
ಬಳಿಕ ಮಾತನಾಡಿದ ಪರಮೇಶ್ವರ, ಮೃತ ಶ್ರೀನಿವಾಸ ಜಿ.ಪಂ ಅಧ್ಯಕ್ಷರಾಗಿ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಜನಮನ್ನಣೆ ಗಳಿಸಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪೋಲಿಸರು ಟೀಂ ರೆಡಿ ಮಾಡಿ ತನಿಖೆ ಶುರು ಮಾಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕೊಲೆಗೆ ಯಾವುದರ ಲಿಂಕ್ ಇದೆ ಅನ್ನೋದು ಈಗಲೇ ಹೇಳೋಕೆ ಆಗಲ್ಲ. ಶೀಘ್ರವೇ ಬಂಧಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಮಧ್ಯೆ, ಅರ್ಎಲ್ ಜಾಲಪ್ಪ ಆಸ್ಪತ್ರೆ ಎದುರು ದಲಿತ ಮುಖಂಡರು ಜಮಾಯಿಸಿದ್ದಾರೆ. ನೂರಾರು ಜನರು, ಮುಖಂಡರು ಜಮಾಯಿಸಿದ್ದಾರೆ.
ಅರ್ಎಲ್ ಜಾಲಪ್ಪ ಆಸ್ಪತ್ರೆಯ ಶವಾಗಾರಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್ ಹಿತೇಂದ್ರ ಭೇಟಿ ನೀಡಿದ್ದು, ಘಟನೆಯ ಬಗ್ಗೆ ಎಸ್ಪಿ ನಾರಾಯಣ್ರಿಂದ ಮಾಹಿತಿ ಪಡೆದಿದ್ದಾರೆ. ಗೃಹ ಸಚಿವರ ಆಗಮನಕ್ಕೂ ಮುನ್ನ ಜಾಲಪ್ಪ ಆಸ್ಪತ್ರೆಗೆ ಎಡಿಜಿಪಿ ಹಿತೇಂದ್ರ ಭೇಟಿ ನೀಡಿದ್ದಾರೆ.
ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಜಾಲಪ್ಪ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ್ದಾರೆ. ನಂತರ ಶ್ರೀನಿವಾಸ್ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ: ಕೋಲಾರ: ಗೃಹಸಚಿವ ಪರಮೇಶ್ವರ್ ಆಪ್ತ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈಬಂಟ ಎಂ ಶ್ರೀನಿವಾಸ್ ಬರ್ಬರ ಹತ್ಯೆ
ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡ, ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷರೂ ಆಗಿದ್ದ ಶ್ರೀನಿವಾಸ್ ಮೇಲೆ ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದರು. ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಿರಬಹುದು. ಪರಿಚಯಸ್ಥರು ಹಾಗೂ ಶ್ರೀನಿವಾಸಪುರ ಸ್ಥಳೀಯರೇ ಕೃತ್ಯ ಎಸಗಿರಬಹುದು. ಜಮೀನು ವಿವಾದದ ಹಿನ್ನಲೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಕೆಲವೇ ದಿನಗಳ ಹಿಂದಷ್ಟೇ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ಭೀಕರ ಕೊಲೆ ಮಾಡಲಾಗಿತ್ತು. ಅನಿಲ್ ಕುಮಾರ್ ಎಂಬ ಗ್ರಾಮ ಪಂಚಾಯ್ತಿ ಸದಸ್ಯನನ್ನು ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದರು. ಆ ಕಹಿ ಘಟನೆಯ ನೆನಪು ಮಾಸುವ ಮುನ್ನವೇ ಶ್ರೀನಿವಾಸ್ ಅವರ ಹತ್ಯೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:02 pm, Mon, 23 October 23