Koppala News: ಆಸ್ತಿಗೋಸ್ಕರ ಹೆತ್ತವಳ ಮೇಲೆಯೇ ಹಲ್ಲೆ; ನ್ಯಾಯಕ್ಕಾಗಿ ಕಣ್ಣೀರಿಡುತ್ತಿರುವ ತಾಯಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 11, 2023 | 10:52 AM

ಮಕ್ಕಳು ಚೆನ್ನಾಗಿ ಓದಿ ಒಳ್ಳೆ ನೌಕರಿ ಪಡೆಯಲಿ, ಕೊನೆ ಕಾಲದಲ್ಲಿ ಆಸರೆಯಾಗ್ತಾರೆ ಎಂದು ತಂದೆ ತಾಯಿ ಆಸೆ ಪಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ಓದಿ ವಿದ್ಯಾವಂತನಾಗಿ ಸರ್ಕಾರಿ ನೌಕರಿಯನ್ನು ಪಡೆದು, ಜನರಿಗೆ ರಕ್ಷಣೆ ನೀಡುವ ಆರಕ್ಷಕ ಹುದ್ದೆಯಲ್ಲಿರುವವನೇ ಸ್ಚಂತ ತಾಯಿಗೆ ರಾಕ್ಷಸನಾಗಿದ್ದಾನೆ. ಏನಿದು ಕಥೆ ಅಂತೀರಾ? ಇಲ್ಲಿದೆ ನೋಡಿ.

Koppala News: ಆಸ್ತಿಗೋಸ್ಕರ ಹೆತ್ತವಳ ಮೇಲೆಯೇ ಹಲ್ಲೆ; ನ್ಯಾಯಕ್ಕಾಗಿ ಕಣ್ಣೀರಿಡುತ್ತಿರುವ ತಾಯಿ
ತಾಯಿ, ಸೊಸೆ, ಕಿರಿಯ ಮಗ
Follow us on

ಕೊಪ್ಪಳ: ಕಣ್ಣೀರು ಹಾಕುತ್ತ ದಿಕ್ಕೆ ತೋಚದೆ ಪೊಲೀಸ್ ಠಾಣೆಗೆ ಅಲೆದಾಡುತ್ತಿರುವ ವೃದ್ಧೆ, ಇತ್ತ ತಾಯಿಗೆ ಜೊತೆಯಾಗಿ ಪತ್ನಿಯನ್ನ ಕರೆದುಕೊಂಡು ಬಂದಿರುವ ಸಹೋದರ. ಇವರ ಅಲೆದಾಟ ನೋಡಿದ್ರೆ, ಎಂತಹವರಿಗೂ ಕರುಳು ಚುರಕ್ ಎನ್ನುತ್ತದೆ. ಹೌದು ಈ ತಾಯಿಯ ಹೆಸರು ನಿಂಗಮ್ಮ ಗೊರವರ್ ಕೊಪ್ಪಳ(Koppala) ತಾಲೂಕಿನ ಬೆಟಗೇರಿ ನಿವಾಸಿ. ಈಕೆಯ ಜೊತೆಗೆ ಇರುವವರು ಸೊಸೆ ನಿಂಗಮ್ಮ, ಕಿರಿಯ ಮಗ ಮಂಜುನಾಥ ಕೊರವರ್​. ಇನ್ನು ನಿಂಗಮ್ಮಳ ಹಿರಿಯ ಮಗ ಮಲ್ಲೇಶಪ್ಪ ಎಂಬಾತ ಇವರಿಗೆ ಕಿರುಕುಳ ನೀಡುತ್ತಿದ್ದಾನಂತೆ. ಈ ಮಲ್ಲೇಶಪ್ಪ ಪೊಲೀಸ್ ಇಲಾಖೆಯಲ್ಲಿ ಕಾನ್ಸ್​ಟೇಬಲ್ ಆಗಿದ್ದು, ಕೊಪ್ಪಳ ಜಿಲ್ಲೆಯ ಕುಕುನೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದಾನೆ.

ಹಿರಿಯ ಮಗನ ಕಾಟಕ್ಕೆ ಹೈರಾಣಾದ ತಾಯಿ

ಸದ್ಯ ಈ ಪೊಲೀಸಪ್ಪನ ಕಾಟಕ್ಕೆ ಈ ತಾಯಿ ಮಗ ಇಬ್ಬರು ಹೈರಾಣಾಗಿದ್ದಾರೆ. ಪಿರ್ತಾರ್ಜಿತ ಆಸ್ತಿಯಲ್ಲಿ ತಾಯಿಗೆ ಹಾಗೂ ಕಿರಿಯ ಮಗನಿಗೆ ಪಾಲು ಕೊಡದೆ ಇಬ್ಬರ ಮೇಲೆ ದೌರ್ಜನ್ಯ ನಡೆಸಿದ್ದಾನೆ. ಜಮೀನಿನಲ್ಲಿ ಉಳುಮೆ ಮಾಡಲು ಹೋದಾಗ ಸಹೋದರ ಹಾಗೂ ಹೆತ್ತ ತಾಯಿಯ ಮೇಲೆಯೇ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನಂತೆ. ಹೀಗಾಗಿಯೇ ಮಗನ ಕಿರುಕುಳ ತಾಳಲಾರದೇ ಖುದ್ದು ಹೆತ್ತಕರುಳೇ ಕೊಪ್ಪಳ ಎಸ್ಪಿ ಅವರಿಗೆ ದೂರು ನೀಡಿದ್ದಾಳೆ. ತನ್ನ ಮಗನಿಂದ ತಮಗೆ ನೆಮ್ಮದಿಯಾಗಿ ಬದಕುಲು ಬಿಡಿ ಎನ್ನುತ್ತಿದ್ದಾಳೆ.

ಇದನ್ನೂ ಓದಿ:ಜಯನಗರ ಆಸ್ಪತ್ರೆ ಮೆಡಿಕಲ್ ಸೂಪರ್ಡೆಂಟ್ ಹಾಗೂ ಆರ್​ಟಿಇ ಕಾರ್ಯಕರ್ತನಿಂದ ವೈದ್ಯರಿಗೆ ಕಿರುಕುಳ ಆರೋಪ; ಶಾಸಕರ ಬಳಿ ಅಳಲು ತೋಡಿಕೊಂಡ ಸಿಬ್ಬಂದಿ

ಒಂದು ವರ್ಷದಿಂದ ಕಿರುಕುಳ

ಕಳೆದ ಒಂದು ವರ್ಷದಿಂದ ಹಿರಿಯ ಮಗ ಮಲ್ಲೇಶಪ್ಪ ನಿರಂತರವಾಗಿ ತಾಯಿ ಹಾಗೂ ಸಹೋದರನಿಗೆ ತೊಂದರೆ ನೀಡುತ್ತಾ ಬಂದಿದ್ದಾನೆ. ತಾಯಿಯ ಹೆಸರಲ್ಲಿದ್ದ ಕೊಪ್ಪಳದ ಮನೆ ಕೂಡ ಮಾರಾಟ ಮಾಡಿದ್ದಲ್ಲದೇ, ಒಂದು ಬಿಡಿಗಾಸು ಹಣ ಕೊಡದೆ ಯಾಮಾರಿಸಿದ್ದಾನಂತೆ. ಬೇರೆ ಕಡೆ ಮನೆ ಖರೀದಿ ಮಾಡಿ ತನ್ನ ಹೆಂಡತಿಯ ಸಹೋದರ ಹೆಸರಿಗೆ ಮಾಡಿಸಿದ್ದಾನೆ. ಇತ್ತ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿಯೂ ತಾಯಿ ಮಗ ಉಳುಮೆ ಮಾಡಿ ಜೀವನ ನಡೆಸಲು ಅವಕಾಶ ಕೊಡುತ್ತಿಲ್ಲ. ಇಲ್ಲ ಸಲ್ಲದ ಆರೋಪ ಮಾಡಿ ದಬ್ಬಾಳಿಕೆ ಮಾಡುತ್ತಿದ್ದಾನೆ.

ದೂರು ಪಡೆದುಕೊಳ್ಳದ ಪೊಲೀಸರು

ಇನ್ನು ಈತನ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ಪೊಲೀಸರು ದೂರು ಪಡೆದುಕೊಳ್ಳುತ್ತಿಲ್ಲ. ಮಗ ಪೊಲೀಸ್​ ಆಗಿರುವ ಕಾರಣ ನಮ್ಮ ಸಹಾಯಕ್ಕೆ ಯಾರು ಬರುತ್ತಿಲ್ಲ. ಹೀಗೆ, ಆದ್ರೆ ನಾವು ಬದುಕೋದು ಹೇಗೆ ಎಂದು ಮಲ್ಲೇಶನ ಸಹೋದರ ಕಣ್ಣಿರು ಹಾಕುತ್ತಿದ್ದಾರೆ. ಸದ್ಯ ಈ ತಾಯಿ ಮಗನೇ ಪೊಲೀಸ್ ಇಲಾಖೆಯಲ್ಲಿ ಇದ್ದರೂ, ಆತನಿಂದ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಳೆ. ಆರಕ್ಷಕನಾಗಿರೋ ಮಲ್ಲೇಶಪ್ಪ ಹೆತ್ತ ತಾಯಿಯ ಪಾಲಿಗೆ ರಾಕ್ಷಸನಾಗಿದ್ದಾನೆ. ಸದ್ಯ ಮಗನಿಂದ ನ್ಯಾಯ ಕೊಡಿಸಿ, ಬದುಕೋಕೆ ಅವಕಾಶ ಕೇಳುತ್ತಿದ್ದಾಳೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ದೂರು ಪಡೆದು ಈ ತಾಯಿಗೆ ನ್ಯಾಯ ಕೊಡಿಸುತ್ತಾರಾ ಕಾದು ನೋಡಬೇಕಿದೆ.

ಆರೋಪ ಅಲ್ಲಗಳೆದ ಮಗ ಮಲ್ಲೇಶಪ್ಪ

ಇನ್ನು ತಾಯಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಗ ಮಲ್ಲೇಶಪ್ಪ ‘ನಾನು ಯಾವುದೇ ಕಿರುಕುಳ ನೀಡ್ತಿಲ್ಲ. ಬದಲಾಗಿ ಅವರಿಗೆ ನಾನು ಬಹಳ ಸಹಾಯ ಮಾಡಿದ್ದೆನೆ. ಆದ್ರೆ, ಹೆತ್ತ ತಾಯಿಯೇ ಈ ರೀತಿ ಮಾತನಾಡಿದ್ರೆ ಏನು ಮಾಡೋಕ್ಕಾಗಲ್ಲ ಎನ್ನೋದಲ್ಲದೇ, ತಮ್ಮ ಮೇಲಿನ ಆರೋಪವನ್ನ ಮಲ್ಲೇಶಪ್ಪ ಅಲ್ಲಗಳೆಯುತ್ತಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:23 am, Tue, 11 July 23