ರಂಗೇರಿದ ಮಂಡ್ಯ ಲೋಕಸಭಾ ಅಖಾಡ, ಕುಮಾರಸ್ವಾಮಿಯನ್ನು ಸೋಲಿಸಲು ಕಾಂಗ್ರೆಸ್​ ಮಾಸ್ಟರ್ ಪ್ಲ್ಯಾನ್

| Updated By: ರಮೇಶ್ ಬಿ. ಜವಳಗೇರಾ

Updated on: Apr 09, 2024 | 8:43 PM

ಮಂಡ್ಯ ಚುನಾವಣಾ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ವರ್ಧೆಯಿಂದಾಗಿ ಹೈ ವೋಲ್ಟೇಜ್ ಕದನವಾಗಿ ಮಾರ್ಪಟ್ಟಿದೆ. ಇನ್ನು ಮಂಡ್ಯದಲ್ಲಿ ದೋಸ್ತಿ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಕಟ್ಟಿಹಾಕಲು, ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ದಳಪತಿ ವಿರುದ್ದ ಪ್ರಚಾರ ಮಾಡಿಸಲು ಸ್ಟಾರ್ ನಾಯಕರನ್ನ ಕರೆಸುತ್ತಿದೆ.

ರಂಗೇರಿದ ಮಂಡ್ಯ ಲೋಕಸಭಾ ಅಖಾಡ, ಕುಮಾರಸ್ವಾಮಿಯನ್ನು ಸೋಲಿಸಲು ಕಾಂಗ್ರೆಸ್​ ಮಾಸ್ಟರ್ ಪ್ಲ್ಯಾನ್
ಡಿಕೆ ಶಿವಕುಮಾರ್​, ಹೆಚ್​ಡಿ ಕುಮಾರಸ್ವಾಮಿ
Follow us on

ಮಂಡ್ಯ, (ಏಪ್ರಿಲ್ 09): ಲೋಕಸಮರದ ಮಹಾಯುದ್ದಕ್ಕೆ ಇನ್ನೇನೂ ಕೆಲವು ದಿನಗಳು ಬಾಕಿ ಇವೆ. ಈ ಮಧ್ಯೆ ಸಕ್ಕರೆ ನಗರಿ ಮಂಡ್ಯದಲ್ಲಿ ಚುನಾವಣಾ(mandya Loksabha)  ಕಾವು ರಂಗೇರಿದೆ. ಅದರಲ್ಲೂ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅಖಾಡಕ್ಕೆ ಧುಮುಕಿರುವುದು ಹೈ ವೋಲ್ಟೇಟ್ ಕದನ ಕಣವಾಗಿ ಮಾರ್ಪಟ್ಟಿದೆ. ಇನ್ನು ಜೆಡಿಎಸ್ ಕೋಟೆ ಮಂಡ್ಯದಲ್ಲೇ ಕುಮಾರಸ್ವಾಮಿಯನ್ನ ಮಣಿಸಲು ಕಾಂಗ್ರೆಸ್​ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ. ಅಷ್ಟೇ ಅಲ್ಲದೆ ದಳಪತಿ ವಿರುದ್ದ ಮತಶಿಕಾರಿಗೆ ಘಟಾನುಘಟಿ, ಸ್ಟಾರ್ ನಾಯಕರನ್ನ ಪ್ರಚಾರಕ್ಕೆ ಕರೆಸುತ್ತಿದೆ. ಹೆಚ್ ಡಿಕೆ ವಿರುದ್ದ ಸ್ಯಾಂಡಲ್​ ವುಡ್ ಬ್ಯೂಟಿ ಕ್ವೀನ್, ನಟಿ, ಮಾಜಿ ಸಂಸದೆ ರಮ್ಯಾ(Sandalwood Queen Ramya)   ಮತಬೇಟೆಗೆ ಇಳಿಯಲಿದ್ದಾರೆ. ಇದೇ ತಿಂಗಳ ಏಪ್ರಿಲ್ 14 ಅಥವಾ 15ರಂದು ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಅಷ್ಟೇ ಅಲ್ಲದೆ ಏಪ್ರಿಲ್ 17ರಂದು ಮಂಡ್ಯದಲ್ಲಿ ಒಂದು ಲಕ್ಷ ಜನರನ್ನ ಸೇರಿಸಿ ಬೃಹತ್ ಸಮಾವೇಶ ಮಾಡಲು ಪ್ಲ್ಯಾನ್ ಮಾಡಿದ್ದು, ಮಂಡ್ಯ ಕೋಟೆಗೆ ಸ್ವತಃ ರಾಹುಲ್ ಗಾಂಧಿ ಲಗ್ಗೆ ಇಡುತ್ತಿದ್ದಾರೆ. ಇದರ ಜೊತೆಗೆ ಮಂಡ್ಯದ ಕೆ ಆರ್ ಪೇಟೆ ಹಾಗೂ ನಾಗಮಂಗಲದಲ್ಲಿ ಸಿಎಂ ಸಿದ್ದರಾಮಯ್ಯ ಮತ ಶಿಕಾರಿ ನಡೆಸಲಿದ್ದಾರೆ.

ಇನ್ನು ಸಂಸದೆ ಸುಮಲತಾ ಅಂಬರೀಶ್ ಈಗಾಗಲೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಎನ್ ಡಿಎ ಭಾಗವಾಗಿರೋ ಮಂಡ್ಯದ ಅಭ್ಯರ್ಥಿ ಕುಮಾರಸ್ವಾಮಿ ಪರ ಪ್ರಚಾರ ಕೂಡ ಮಾಡುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಲೇವಡಿ ಮಾಡಿದ್ದಾರೆ. ಅಣ್ಣ-ತಂಗಿ ಅಲ್ವಾ, ಮಾಜಿ ಸಿಎಂ ಹೆಚ್ ಡಿಕೆ ಪರ ಸುಮಲತಾ ಪ್ರಚಾರ ಮಾಡ್ತಾರೆ. ಅಕ್ಕ-ತಮ್ಮ ಒಂದಾಗಿದ್ದಾರೆ. ನಾವು ಯಾಕೆ ಮಾತನಾಡೋದು. ಕಳೆದ ಚುನಾವಣೆಯಲ್ಲಿಯೇ ಅಕ್ಕ-ತಮ್ಮ ಒಂದಾಗಿದ್ರೆ ಚೆನ್ನಾಗಿರೋದು‌. ಹೋದ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಬೆಂಬಲ ಕೊಟ್ಟಿಲ್ಲ ಎಂದು ಸುಮಲತಾ ಹೇಳ್ತಿದ್ದಾರೆ. ನಾನೇ ಗೆದ್ದೆ ಅಂತಿದ್ದಾರೆ, ಅದು ಮುಗಿದ ಅಧ್ಯಾಯ. ಈಗ ತಮ್ಮನ ಪರ ಅಕ್ಕ ಇದ್ದಾರೆ. ಅವರ ಚುನಾವಣೆ ಅವರದು, ನಮ್ಮ ಚುನಾವಣೆ ನಮ್ಮದು ಎಂದರು.

ಅಂಬರೀಶಣ್ಣನ ಅಭಿಮಾನಿಗಳ ರಕ್ತ, ದೇಹ, ಮನಸ್ಸು ಕಾಂಗ್ರೆಸ್. ಅವರ ಅಭಿಮಾನಿಗಳು ಕಾಂಗ್ರೆಸ್ ಪರ ಇದ್ದಾರೆ. ಅಂಬರೀಶ್ ಬದುಕಿರುವವರೆಗೂ ಕಾಂಗ್ರೆಸ್ ಆಗಿಯೆ ಇದ್ದರು. ಅವರನ್ನ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮಂತ್ರಿ ಮಾಡಿತ್ತು. ಕಳೆದ ಚುನಾವಣೆಯಲ್ಲಿ ಅಕ್ಕ-ತಮ್ಮಮ ನಡುವೆ ದಾಯಾದಿ ಕಲಹ ಮರೆತು ಹೋಗಿದ್ದಾರಾ. ತಮ್ಮ ಅಕ್ಕನಿಗೆ ಕೊಟ್ಟ ಕಾಟಾವನ್ನ ಅಂಬಿ ಅಭಿಮಾನಿಗಳು ಮರೆಯುತ್ತಾರಾ. ಅಂಬರೀಶ್ ಅಭಿಮಾನಿಗಳು ಕಾಂಗ್ರೆಸ್ ಪರ ಇರ್ತಾರೆ. 2 ಲಕ್ಷ ಮತಗಳಿಂದ ಸ್ಟಾರ್ ಚಂದ್ರು ಗೆಲ್ತಾರೆ ಎಂದರು.

ಕುಮಾರಸ್ವಾಮಿ ವಿರುದ್ದ ಚಲುವರಾಯಸ್ವಾಮಿ ಲೇವಡಿ

ಇನ್ನು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಶತಾಯ-ಗತಾಯ ಗೆಲ್ಲಿಸಲೇಬೇಕು ಎಂದು ಪಣತೊಟ್ಟು, ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರೊ ಸಚಿವ ಚಲುವರಾಯಸ್ವಾಮಿ,ಸಭೆಗಳ ಮೇಲೆ ಸಭೆಗಳನ್ನ ಮಾಡುತ್ತಿದ್ದಾರೆ. ಮಂಡ್ಯ ನಂತರ ನಾಗಮಂಗಲದಲ್ಲಿ ಎಸ್ ಸಿ, ಎಸ್ ಟಿ ಮುಖಂಡರ ಸಭೆ ಮಾಡಿ, ಚುನಾವಣೆಯಲ್ಲಿ ಗೆಲ್ಲಲು ಟಾಸ್ಕ್ ನೀಡಿದ್ದಾರೆ. ಇನ್ನು ಇದೇ ವೇಳೆ ಕುಮಾರಸ್ವಾಮಿ ವಿರುದ್ದ ಕೂಡ ಲೇವಡಿ ಮಾಡಿದ್ದಾರೆ.

ಜೆಡಿಎಸ್-ಬಿಜೆಪಿ ಮೈತ್ರಿ ಹೊಂದಾಣಿಕೆ ಜನರಿಗೆ ಸಮಾಧಾನ ಇಲ್ಲ. ಮೈತ್ರಿ ಅಭ್ಯರ್ಥಿ ಪ್ರಭಾವಿ ನಾಯಕರು ಅಂತ ಒಂದೇ ದಿನದಲ್ಲಿ ಬಂದು ಟಾಟಾ ಮಾಡ್ತಾರೇನೊ ಗೊತ್ತಿಲ್ಲ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಿಗಧಿಯಾಗಿದೆ. ಬಿಸಿಲಿನ ತಾಪಮಾನ ಜಾಸ್ತಿ ಇದೆ, ಅಭ್ಯರ್ಥಿಗಳು, ಕಾರ್ಯಕರ್ತರು ಪ್ರಚಾರ ಮಾಡ್ತಿದ್ದಾರೆ. ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಸುತ್ತಿನ ಪ್ರಚಾರ ಮಾಡಿದ್ದೇವೆ.ಜನರ ಉತ್ಸಹ ಕೂಡ ಕಾಂಗ್ರೆಸ್ ಪರ ಇದೆ ಎಲ್ಲರಿಗೂ ಒಳ್ಳೆಯದಾಗುತ್ತೆ. ಜೆಡಿಎಸ್-ಬಿಜೆಪಿಯಿಂದ ಸಾಕಷ್ಟು ಜನ ಕಾಂಗ್ರೆಸ್ ಸೇರ್ಪಡೆಯಾಗ್ತಿದ್ದಾರೆ. ಜೆಡಿಎಸ್-ಬಿಜೆಪಿ ಎರಡೂ ಪಕ್ಷದ ಹೊಂದಾಣಿಕೆ ಜನರಿಗೆ ಸಮಾಧಾನ ಇಲ್ಲ. ಹಿಂದೆ ಕಾಂಗ್ರೆಸ್-ಜೆಡಿಎಸ್ ಒಂದಾದಾಗ ಅಸಮಾಧಾನ ಇತ್ತೊ ಅದೇ ರೀತಿ ಬಿಜೆಪಿ-ಜೆಡಿಎಸ್ ಒಂದಾದಗಲೂ ಅಸಮಾಧಾನ ಇದೆ ಎಂದು ವಾಗ್ದಾಳಿ ನಡೆಸಿದ್ರು.

ಒಟ್ಟಾರೆ ಮಂಡ್ಯ ಚುನಾವಣಾ ರಣಕಣ ರಂಗೇರಿದ್ದು, ಮತ್ತೊಮ್ಮೆ ಇಡೀ ದೇಶವನ್ನ ತಿರುಗಿ ನೋಡುವಂತೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:42 pm, Tue, 9 April 24