ಸಿಡಿಮದ್ದು ಸ್ಫೋಟಗೊಂಡು ಹಸು ಬಾಯಿ ಛಿದ್ರ: ಸಾವು-ಬದುಕಿನ ಮಧ್ಯೆ ಮೂಕ ಜೀವ ನರಳಾಟ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹಳ್ಳಿಯಲ್ಲಿ ಕಾಡುಹಂದಿ ಬೇಟೆಗೆ ಇರಿಸಿದ್ದ ಸಿಡಿಮದ್ದು ಅನಾಹುತಕ್ಕೆ ಕಾರಣವಾಗಿದೆ. ಹಸು ಮೇಯುತ್ತಿದ್ದಾಗ ಸಿಡಿಮದ್ದು ಸ್ಫೋಟಗೊಂಡು ಅದರ ಮುಖಕ್ಕೆ ಗಂಭೀರ ಗಾಯವಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಹಸು ಸಾವು-ಬದುಕಿನ ನಡುವೆ ಹೋರಾಡುತ್ತಿದೆ.

ಮೈಸೂರು, ಮಾರ್ಚ್ 24: ಹಂದಿ ಬೇಟೆಗೆ ಇಟ್ಟಿದ್ದ ಸಿಡಿಮದ್ದು (Explosives) ಸ್ಫೋಟಿಸಿ ಹಸುವಿನ (cow) ಬಾಯಿ ಛಿದ್ರವಾಗಿರುವಂತಹ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡಗೆ ಹಸು ಸೇರಿದ್ದು, ಮೇಯಲು ಬಿಟ್ಟಾಗ ಅವಘಡ ಸಂಭವಿಸಿದೆ. ಕಿಡಿಗೇಡಿಗಳಿಂದ ಈ ಕೃತ್ಯ ಶಂಕೆ ವ್ಯಕ್ತವಾಗಿದೆ. ಸದ್ಯ ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸಿದೆ. ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚನ್ನನಂಜೇಗೌಡ ಅವರು ಕೆಂಪಿಸಿದ್ದನಹುಂಡಿ ಗ್ರಾಮದ ವಾಟರ್ ಟ್ಯಾಂಕ್ ಬಳಿ ಜಾನುವಾರು ಮೇಯಲು ಬಿಟ್ಟಿದ್ದರು. ಕಾಡು ಹಂದಿ ಬೇಟೆಗೆ ಅದೇ ಜಾಗದಲ್ಲಿ ಸಿಡಿಮದ್ದು ಅಡಗಿಸಿಟ್ಟಿದ್ದರು. ಹಸು ಮೇಯುತ್ತಿದ್ದ ವೇಳೆ ಸಿಡಿಮದ್ದು ಸ್ಫೋಟಗೊಂಡು ಗಾಯಗೊಂಡಿದೆ.
ಗೋ ಹತ್ಯೆ ಮಾಡಿ ಮಾಂಸ ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿ: ಚಾಲಕ ಪರಾರಿ
ಹುಣಸೂರಿನಲ್ಲಿ ಗೋ ಹತ್ಯೆ ಮಾಡಿ ಮಾಂಸ ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿ ಆಗಿರುವಂತಹ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಮಾಂಸ ಸಾಗಾಟ ವಾಹನ ಬೆನ್ನಟ್ಟಿದ್ದ ಪೋಲಿಸರು, ಈ ವೇಳೆ ನಿಯಂತ್ರಣ ತಪ್ಪಿ ಮಾಂಸ ತುಂಬಿಕೊಂಡು ಹೋಗುತ್ತಿದ್ದ ವಾಹನ ಪಲ್ಟಿ ಆಗಿದೆ. ವಾಹನ ಅಲ್ಲೇ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ್ ಠಾಣೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಇಲಾಖೆಗೆ ಧನ್ಯವಾದ ಹೇಳಿದ ಪ್ರತಾಪ್ ಸಿಂಹ
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಹುಣಸೂರಿನಲ್ಲಿ ಗೋಹತ್ಯೆ ಮಾಡಿ ಮಾಂಸ ಸಾಗಿಸುತ್ತಿದ್ದ ವಾಹನವನ್ನು ಮಾಹಿತಿ ಆಧಾರದ ಮೇಲೆ ಮೈಸೂರು ಪೋಲೀಸರು ಬೆನ್ನಟ್ಟಿದಾಗ ವಾಹನ ಮಗುಚಿ ಬಿದ್ದಿದ್ದು, ಎಫ್ಐಆರ್ ದಾಖಲು ಮಾಡಿ ತನಿಖೆ ಆರಂಭಿಸಿದ ಪೊಲೀಸ್ ಇಲಾಖೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಹತ್ತಕ್ಕೂ ಹೆಚ್ಚು ನಾಯಿಗಳಿಂದ ವೃದ್ದೆ ಮೇಲೆ ದಾಳಿ
ಇತ್ತೀಚೆಗೆ ಸುಮಾರು ಏಳೆಂದು ನಾಯಿಗಳ ಗುಂಪು ಶ್ರೀನಿವಾಸಪುರ ಪಟ್ಟಣದ ವಿಜಯಲಕ್ಷ್ಮೀ ರಸ್ತೆಯಲ್ಲಿ ನಾಲ್ಕೈದು ಜನರ ಮೇಲೆ ದಾಳಿ ಮಾಡಿದ್ದವು. ಈ ಘಟನೆ ಮಾಸುವ ಮುನ್ನವೇ ಕೆಲ ದಿನಗಳಲ್ಲಿ ಶ್ರೀನಿವಾಸಪುರದ ಪಟ್ಟಣದ ಮಾರುತಿನಗರದ ನಿವಾಸಿ 65 ವರ್ಷದ ಅರಿಕೇರಿ ಗ್ರಾಮದ ಲಕ್ಷ್ಮಮ್ಮ ಎಂಬುವವರಿಗೆ ಹತ್ತಕ್ಕೂ ಹೆಚ್ಚು ನಾಯಿಗಳ ಗುಂಪು ವೃದ್ದೆ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿತ್ತು.
ಇದನ್ನೂ ಓದಿ: ಬೀದರ್ನಲ್ಲಿ ನೀರಿಗಾಗಿ ಹಾಹಾಕಾರ: ಪ್ರಾಣಿ-ಪಕ್ಷಿಗಳ ದಾಹ ಇಂಗಿಸುತ್ತಿರುವ ಯುವಕರು
ವೃದ್ದೆಗೆ ಗಾಯಗೊಳಿಸಿದ ಪರಿಣಾಮ ತೀವ್ರ ರಕ್ತಸ್ರಾವವಾದ ಪರಿಣಾಮ ಸ್ಥಳಿಯರು ಕೂಡಲೇಆಂಬುಲೆನ್ಸ್ಗೆ ಕರೆ ಮಾಡಿ ವೃದ್ದೆಯನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷಕ್ಕೆ ಇನ್ನು ಎಷ್ಟು ಜನರ ಬಲಿಯಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.