ಬೀದರ್ನಲ್ಲಿ ನೀರಿಗಾಗಿ ಹಾಹಾಕಾರ: ಪ್ರಾಣಿ-ಪಕ್ಷಿಗಳ ದಾಹ ಇಂಗಿಸುತ್ತಿರುವ ಯುವಕರು
ಬೀದರ್ನಲ್ಲಿ ಭೀಕರ ಬಿಸಿಲಿನಿಂದ ಪ್ರಾಣಿ-ಪಕ್ಷಿಗಳು ನಲುಗುತ್ತಿವೆ. ನೀರಿನ ಕೊರತೆಯಿಂದಾಗಿ ಅವುಗಳಿಗೆ ತೊಂದರೆಯಾಗುತ್ತಿದೆ. ಆದರೆ, ಸ್ವಾಭಿಮಾನಿ ಗೆಳೆಯರ ಬಳಗದ ಯುವಕರು ಅರಣ್ಯ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ಪ್ರಾಣಿ-ಪಕ್ಷಿಗಳಿಗೆ ನೀರು ಒದಗಿಸುತ್ತಿದ್ದಾರೆ. ಇದು ಅವರ ಅದ್ಭುತ ಸೇವೆಯಾಗಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿರುವ ಜೀವಿಗಳಿಗೆ ನೆರವಾಗುತ್ತಿದೆ.
Updated on: Mar 24, 2025 | 11:17 AM

ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬೀರು ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಸೂರ್ಯನ ಪ್ರಕರತೆ ಹೆಚ್ಚಾಗುತ್ತಿದ್ದು ಪ್ರಾಣಿ, ಪಕ್ಷಿಗಳು ಬಿಸಿಲಿನ ತಾಪಕ್ಕೆ ನಲುಗುತ್ತಿವೆ. ಈ ಬಿಸಿಲಿನ ತಾಪ ಜನರಿಗಷ್ಟೇ ಅಲ್ಲದೇ, ಮೂಕ ಪ್ರಾಣಿ ಪಕ್ಷಿಗಳಿಗೂ ತಟ್ಟುತ್ತಿದೆ. ಕೆರೆಗಳು ಬತ್ತುತ್ತಿದ್ದು, ಕಾಡು ಪ್ರಾಣಿಗಳು ಮತ್ತು ಪಕ್ಷೀಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ.

ಇದನ್ನು ಅರಿತ ಬೀದರ್ ಪಟ್ಟಣದ ಸ್ವಾಭಿಮಾನಿ ಗೆಳೆಯರ ಬಳಗದ ಯುವಕರು ಅರಣ್ಯ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಸಿಮೆಂಟ್ ತೊಟ್ಟಿಯನ್ನ ನಿರ್ಮಾಣ ಮಾಡಿ ಪಕ್ಷಿಗಳಿಗೆ ನೀರು ಹಾಕುತ್ತಿದ್ದಾರೆ. ಪ್ರತಿವರ್ಷ ಬೇಸಿಗೆಯಲ್ಲಿ ಈ ಯುವಕರು ಅರಣ್ಯದಲ್ಲಿ ತೊಟ್ಟಿಯನ್ನ ನಿರ್ಮಾಣ ಮಾಡಿ ಅಲ್ಲಿಗೆ ಪ್ರತಿದಿನವೂ ನೀರು ತಂದು ಹಾಕುತ್ತಿದ್ದಾರೆ. ಇದು ಕಾಡು ಪ್ರಾಣಿಗಳಿಗೆ ದಾಹ ಇಂಗಿಸಿಕೊಳ್ಳಲು ಅನುಕೂಲವಾಗಿದ್ದು ಗುಬ್ಬಿ, ಅಳಿಲು, ಕಾಗೆ ಹೀಗೆ ಅನೇಕ ಪಕ್ಷಿಗಳು ಇಲ್ಲಿಗೆ ಬಂದು ನೀರು ಕುಡಿದು, ಆಹಾರ ಸೇವಿಸಿ ಹೋಗುತ್ತಿವೆ ಎಂದು ಸ್ವಾಭಿಮಾನಿ ಗೆಳೆಯರ ಬಳಗದವರು ಹೇಳಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಬಿಸಿಲು ವಿಫರಿತವಾಗಿ ಹೆಚ್ಚಾಗುತ್ತಿದೆ. ಪ್ರತಿದಿನವೂ ಸರಾಸರಿ 40 ಡಿಗ್ರಿ ಆಸುಪಾಸಿನಲ್ಲಿ ಬಿಸಲು ದಾಖಲಾಗುತ್ತಿದೆ ಇದರಿಂದಾಗಿ ಜನರು ಹೊರಗಡೆಗೆ ಓಡಾದಂತ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಬಿಸಿಲಿನಿಂದ ದೇಹವನ್ನ ತಪ್ಪು ಮಾಡಿಕೊಳ್ಳಲು ಜನರು ತಂಪು ಪಾನೀಯದ ಮೊರೆ ಹೋಗಿದ್ದರೆ. ದ್ವಿಚಕ್ರ ವಾಹನದ ಚಾಲಕರಂತೂ ಮುಖಕ್ಕೆ ಕೆಂಡ ಎರಚಿದ ಅನುಭವಕ್ಕೆ ಒಳಗಾಗುತ್ತಿದ್ದಾರೆ.

ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರನ್ನು ಹಾಕುವ ಮೂಲಕ ಸ್ವಾಭಿಮಾನಿ ಗೆಳೆಯರ ಬಳಗದವರು ಪ್ರಾಣಿ-ಪಕ್ಷಿಗಳ ಪ್ರೇಮವನ್ನ ಮೇರೆಯುತ್ತಿದ್ದಾರೆ. ಪ್ರಾಣಿ-ಪಕ್ಷಿಗಳು ಹೆಚ್ಚಿಗೆ ಇರುವ ಸ್ಥಳಗಳಾದ ಚಿಟ್ಟಾ ಅರಣ್ಯ ಪ್ರದೇಶ, ದೇವ ವಣದ ಅರಣ್ಯ ಪ್ರದೇಶ, ಜಿಂಕೆಗಳು ಅತಿ ಹೆಚ್ಚಾಗಿ ಕಂಡು ಬರುವ ಬೆಳ್ಳೂರಾ ಅರಣ್ಯ ಹಾಗೂ ಬೀದರ್ ಜಿಲ್ಲೆಯ ಚಿಟಗುಪ್ಪಾ ಅರಣ್ಯ ಪ್ರದೇಶದಲ್ಲಿ ಹತ್ತಾರು ಸಿಮೇಂಟ್ ತೊಟ್ಟಿಯನ್ನ ನಿರ್ಮಿಸಿ ಅಲ್ಲಿ ನೀರು ತಂದು ಹಾಕುತ್ತಿದ್ದಾರೆ.

ಈ ಯುವಕರು ಹಾಕಿದ ನೀರನ್ನ ಕಾಡು ಪ್ರಾಣಿಗಳು ಪಕ್ಷಿಗಳು ಕುಡಿಯುವ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೇರೆಯಾಗಿದ್ದು ಯುವಕರ ಕಾರ್ಯಕ್ಕೆ ಸಾರ್ಥಕತೆ ದೊರೆತಿದೆ.

ಬೇಸಿಗೆಯಾಗಲಿ, ಮಳೆಗಾಲವಾಗಲಿ, ಚಳಿಗಾಲವಾಗಲಿ ಈ ಮೂರು ಋತುಗಳು ಬೀದರ್ ಜನರನ್ನ ನಲುಗುವಂತೆ ಮಾಡುತ್ತದೆ. ಸದಾಕಾಲ ಬರಗಾಲವನ್ನೇ ನೋಡುವ ಇಲ್ಲಿನ ಜನರು ಬಿರು ಬಿಸಿಲಿನ ಹೊಡೆತಕ್ಕೆ ನಲುಗಿ ಹೋಗಿದ್ದಾರೆ. ಪ್ರಾಣಿ ಪಕ್ಷಗಳಿಗೆ ಕೂಡಾ ಬಿಸಿಲಿನ ಹೊಡೆತಕ್ಕೆ ನಲುಗಿ ಹೋಗಿದ್ದು, ನೀರು ಸಿಗದಂತ ವಾತಾವರಣ ನಿರ್ಮಾಣವಾಗಿದೆ. ಆದರೆ ಕೆಲವು ಗ್ರಾಮದ ಯುವಕರು ಪಕ್ಷಿಗಳಿಗೆ ನೀರು ಆಹಾರ ಕೊಟ್ಟು ಹಕ್ಕಿಗಳಿಗೆ ಆಸರೆಯಾಗುವ ಕೆಲಸ ಮಾಡುತ್ತಿದ್ದಾರೆ.



















