ಕೇಂದ್ರ ಸಚಿವ ಅಮಿತ್ ಶಾ ಸಭೆಯ ಬಗ್ಗೆ ಸಿಟಿ ರವಿ, ವಿಜಯೇಂದ್ರ ವ್ಯತಿರಿಕ್ತ ಹೇಳಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 11, 2024 | 8:07 PM

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮೈಸೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ಅಂತ್ಯವಾಗಿದೆ. ಆದರೆ ಸಭೆಯಲ್ಲಿ ಚರ್ಚೆ ಆದ ವಿಚಾರಗಳ ಬಗ್ಗೆ ಮಾಜಿ ಶಾಸಕ ಸಿ.ಟಿ.ರವಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ಸಿಎಂ ಧರಣಿ ಬಗ್ಗೆ ಚರ್ಚೆ ನಡೆಯಿತು ಎಂದು ಸಿ.ಟಿ.ರವಿ ಹೇಳಿದರೆ, ಸಿಎಂ ಧರಣಿ ಬಗ್ಗೆ ಚರ್ಚೆ ನಡೆದಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಸಭೆಯ ಬಗ್ಗೆ ಸಿಟಿ ರವಿ, ವಿಜಯೇಂದ್ರ ವ್ಯತಿರಿಕ್ತ ಹೇಳಿಕೆ
ಮಾಜಿ ಶಾಸಕ ಸಿ.ಟಿ.ರವಿ, ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ
Follow us on

ಮೈಸೂರು, ಫೆಬ್ರವರಿ 11: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಾರಿಯೂ ಕಮಾಲ್ ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ. ಅದರ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ಕೂಡ ರಾಜ್ಯಕ್ಕೆ ಭೇಟಿ ನೀಡಿದ್ದರು. ಮೈಸೂರಿನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಸದ್ಯ ಈ ಸಭೆಯ ಬಗ್ಗೆ ಮಾಜಿ ಶಾಸಕ ಸಿ.ಟಿ.ರವಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಸಿಎಂ ಧರಣಿ ಬಗ್ಗೆ ಚರ್ಚೆ ನಡೆಯಿತು ಎಂದ ಸಿ.ಟಿ.ರವಿ ಹೇಳಿದರೆ, ಆದರೆ ಸಿಎಂ ಧರಣಿ ಬಗ್ಗೆ ಚರ್ಚೆ ನಡೆದಿಲ್ಲ. ಸಿಎಂ ದೆಹಲಿ ಹೋರಾಟ ಚರ್ಚೆಯ ವಿಷಯವೇ ಅಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಹೀಗಾಗಿ ಸಭೆ ಬಗ್ಗೆ ಇಬ್ಬರು ನಾಯಕರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ

ಕೊಟ್ಟ ಕುದುರೆ ಏರದವನು ಶೂರನು ಅಲ್ಲ, ಧೀರನೂ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಕಾಂಗ್ರೆಸ್ ನಾಯಕರು ಕುಂಟು ನೆಪ ಹೇಳುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿಯೂ ಎನ್​ಡಿಎ ಗೆಲ್ಲುವ ವಿಶ್ವಾಸ: ಬಿವೈ ವಿಜಯೇಂದ್ರ

ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಎನ್​ಡಿಎ ಮೈತ್ರಿ ಬಿಜೆಪಿ ಜೆಡಿಎಸ್ ಗೆಲ್ಲುವ ವಾತಾವರಣ ಇದೆ. ನರೇಂದ್ರ ಮೋದಿ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸಿ ಅದಕ್ಕೆ ಕಾರ್ಯಯೋಜನೆ‌, ಕಾರ್ಯತಂತ್ರದ ಬಗ್ಗೆ ಸಲಹೆ ನೀಡಿದ್ದು, ನಮಗೆ ಸಂಪೂರ್ಣ ವಿಶ್ವಾಸ ಬಂದಿದೆ. ಅವರು ತೋರಿಸಿದ ಕಾರ್ಯತಂತ್ರ ಅನುಷ್ಠಾನಗೊಳಿಸಲಾಗುವುದು ಎಂದಿದ್ದಾರೆ.

ಒಗ್ಗಟ್ಟಾಗಿ ಒಂದಾಗಿ ದುಡಿಯುವ ಬಗ್ಗೆ ವಿಶ್ವಾಸ ನೀಡಿದ್ದೇವೆ. ಅವರ ಸಭೆ ನಮಗೆ ಹೊಸ ಹುಮ್ಮಸ್ಸು ನೀಡಿದೆ. ಸೀಟಿನ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಸಿಎಂ ನಡೆಸಿದ್ದ ಧರಣಿ ಬಗ್ಗೆ ಚರ್ಚೆ ನಡೆದಿದೆ ಎಂದ ಸಿ.ಟಿ.ರವಿ

ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿ ಸಿ.ಟಿ.ರವಿ ದೆಹಲಿಯಲ್ಲಿ ಸಿಎಂ ನಡೆಸಿದ್ದ ಧರಣಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ದುರುದ್ದೇಶದ ಪ್ರತಿಭಟನೆ ಬಗ್ಗೆ ಜನ ಜಾಗೃತಿ ಮೂಡಿಸುವಂತೆ ಸಲಹೆ ಸಭೆಯಲ್ಲಿ ಅಮಿತ್ ಶಾ ಸಲಹೆ ನೀಡಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ಕರ್ನಾಟಕಕ್ಕೆ ಎಷ್ಟು ಅನುದಾನ ಕೊಟ್ಟಿದೆ? ಡಾ.ಮನಮೋಹನ್ ಸಿಂಗ್ ಸರ್ಕಾರ ಎಷ್ಟು ಅನುದಾನ ಕೊಟ್ಟಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮೈಸೂರು: ಜೆಡಿಎಸ್ ಮೈತ್ರಿ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಎಚ್ಚರಿಗೆ

ತೆರಿಗೆಯಿಂದ ಕೊಟ್ಟ ಪಾಲು, ಸಹಾಯಧನ, ಅನುದಾನದ ಬಗ್ಗೆ ಜಾಗೃತಿ ಮೂಡಿಸಿ. ಜನರಿಗೆ ಮನವರಿಕೆ ಮಾಡಿಕೊಡಲು ಅಮಿತ್ ಶಾರವರು ಹೇಳಿದ್ದಾರೆ. ಸಿಎಂ ಹಾಗೂ ಡಿಸಿಎಂ ನಡುವೆ ಲೂಟಿಗಾಗಿ ಪೈಪೋಟಿ ನಡೆದಿದೆ. ಸಿಎಂ ಸಿದ್ದರಾಮಯ್ಯಗೆ ಇದು ಫೈನಲ್ ಆಟ. ಡಿಸಿಎಂಗಿಂತಾ ಯಾವುದರಲ್ಲೂ ಕಡಿಮೆ ಆಗಬಾರದೆಂದು ಲೂಟಿ ಮಾಡ್ತಿದ್ದಾರೆ. 40% ಕಮಿಷನ್‌, ವರುಣ ಹಾಗೂ ಕನಕಪುರ ಸಬ್‌ಚಾರ್ಜ್‌ ಸಹ ಸೇರಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.