ಗಿರವಿ ಇಟ್ಟ ಚಿನ್ನದಲ್ಲಿ ವ್ಯತ್ಯಾಸ: ನಂಬಿಕೆಯ ಸರ್ಕಾರಿ ಬ್ಯಾಂಕ್​​ಗಳಲ್ಲಿ ಹೀಗಾದ್ರೆ ಹೇಗೆ?

ಚಿನ್ನ ಗಿರವಿ ಇಟ್ಟ ಗ್ರಾಹಕರಿಗೆ ಬ್ಯಾಂಕ್‌ನಿಂದ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಮೈಸೂರಿನಲ್ಲಿರುವ ಆ ಬ್ಯಾಂಕ್​ ಬಳಿ ಜಮಾಯಿಸಿದ ನೂರಕ್ಕೂ ಹೆಚ್ಚು ಗ್ರಾಹಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತನಿಖೆ ನಡೆಸಿದ್ದಾರೆ.

ಗಿರವಿ ಇಟ್ಟ ಚಿನ್ನದಲ್ಲಿ ವ್ಯತ್ಯಾಸ: ನಂಬಿಕೆಯ ಸರ್ಕಾರಿ ಬ್ಯಾಂಕ್​​ಗಳಲ್ಲಿ ಹೀಗಾದ್ರೆ ಹೇಗೆ?
ಬ್ಯಾಂಕ್‌ನಿಂದ ಮೋಸ ಆರೋಪ
Edited By:

Updated on: Dec 17, 2025 | 8:14 PM

ಮೈಸೂರು, ಡಿಸೆಂಬರ್​ 17: ಕಷ್ಟ ಕಾಲಕ್ಕೆ ನೆರವಾಗಲಿ ಎಂದು ಜನರು ತಮ್ಮ ಚಿನ್ನವನ್ನು (Gold) ಗಿರವಿ ಇಡುತ್ತಾರೆ. ಖಾಸಗಿ ಕಂಪನಿಗಳಲ್ಲಿ ಮೋಸವಾಬಹುದು ಎಂದು ಪ್ರತಿಷ್ಠಿತ ಬ್ಯಾಂಕ್‌ನಲ್ಲಿ‌ (Bank) ಗಿರವಿ ಇಡುವುದು ಸಾಮಾನ್ಯ. ಆದರೆ ಇದೀಗ ಬ್ಯಾಂಕ್‌ನಲ್ಲೂ ಗ್ರಾಹಕರಿಗೆ ಚಿನ್ನದಲ್ಲಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಇಂತಹ ಘಟನೆಗೆ ಸಾಕ್ಷಿಯಾಗಿದ್ದು ಸಾಂಸ್ಕೃತಿಕ ನಗರಿ ಮೈಸೂರಿನ ಹಿನಕಲ್ ಗ್ರಾಮದ ಕೆನರಾ ಬ್ಯಾಂಕ್‌.

ಬ್ಯಾಂಕ್​​ಗೆ ಮುತ್ತಿಗೆ ಹಾಕಿದ ಜನರು

ಹೌದು. ಕೆನರಾ ಬ್ಯಾಂಕ್​​ನಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ ಚಿನ್ನದ ವಿಚಾರದಲ್ಲಿ ಮೋಸವಾಗಿರುವ ಆರೋಪ ಕೇಳಿಬಂದಿದೆ. ಚಿನ್ನವನ್ನು ಗ್ರಾಹಕರಿಗೆ ವಾಪಸ್​​ ನೀಡುವ ಸಂದರ್ಭದಲ್ಲಿ ಮೋಸ ಮಾಡಲಾಗಿದೆ ಎಂಬುದು ಗ್ರಾಹಕರ ಆರೋಪ. ಈ ಹಿನ್ನೆಲೆಯಲ್ಲಿ ನೂರಾರು ಗ್ರಾಹಕರು ಇಂದು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಇದನ್ನೂ ಓದಿ: ವಿಶ್ವ ವಿಖ್ಯಾತ ಮೈಸೂರು ಅರಮನೆ ಅಪಾಯದಲ್ಲಿದೆಯಾ? ಆ ಘಟನೆ ಮುನ್ಸೂಚನೆ ಕೊಡ್ತಾ?

ಪ್ರಮುಖವಾಗಿ ಹಿನಕಲ್ ಗ್ರಾಮದ ಲಾವಣ್ಯ ಎಂಬುವರು 56 ಗ್ರಾಂ ತೂಕದ ಚಿನ್ನದ ನೆಕ್ಲೆಸ್‌, ದೊಡ್ಡ ಹಾರ, ಚಿಕ್ಕ ಹಾರ ಹಾಗೂ ಬಳೆಗಳನ್ನು ಬ್ಯಾಂಕ್‌ನಲ್ಲಿ ಗಿರವಿ ಇಟ್ಟಿದ್ದರು‌. ಎರಡು ದಿನಗಳ ಹಿಂದೆ ಅದನ್ನು ಬಿಡಿಸಿಕೊಂಡಿದ್ದರು. ಅವರು ಬಿಡಿಸಿಕೊಂಡ ಚಿನ್ನ ಅಷ್ಟೇ ಪ್ರಮಾಣದಲ್ಲಿ ಇತ್ತು. ಆದರೆ ಸರವನ್ನು ಧರಿಸುವ ವೇಳೆ ಚಿಕ್ಕದಾಗಿ ಕಾಣಿಸಿದೆ. ಅನುಮಾನ ಬಂದು ಸರವನ್ನು ಪರಿಶೀಲನೆ ಮಾಡಿದ್ದಾರೆ. ಆಗ ಮೋಸವಾಗಿರುವುದು ಗೊತ್ತಾಗಿದೆ.

ಲಾವಣ್ಯ ಅವರು ಚಿನ್ನ ಅಡಮಾನ ಮಾಡುವ ವೇಳೆ ಅದರ ಫೋಟೋ ತೆಗೆದುಕೊಂಡಿದ್ದರು, ಅದನ್ನ ಬಿಡಿಸಿಕೊಂಡ ಚಿನ್ನದ ಸರದ ಜೊತೆಗೆ ತಾಳೆ ಹಾಕಿದ್ದಾರೆ. ಮೊದಲು 81 ಗುಂಡುಗಳನ್ನು ಒಳಗೊಂಡಿದ್ದ ಸರ, ಈಗ ಕೇವಲ‌ 73 ಗುಂಡುಗಳನ್ನು ಒಳಗೊಂಡಿದೆಯಂತೆ. ಇದನ್ನು ಬಂದು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಆರಂಭದಲ್ಲಿ ಸರಿಯಾದ ಉತ್ತರ ನೀಡಲಿಲ್ಲವಂತೆ. ನಂತರ ತಪ್ಪು ಸರಿ ಪಡಿಸುತ್ತೇವೆ ಅಂತ ಹಾರಿಕೆ ಉತ್ತರ ನೀಡಿದ್ದಾರೆ ಎನ್ನುವುದು ಅವರ ಆರೋಪ.

ಒಬ್ಬೊಬ್ಬರದ್ದು ಒಂದೊಂದು ಕಥೆ

ಇನ್ನು ಅಷ್ಟರಲ್ಲಾಗಲೇ ಅಲ್ಲಿ ಸಾಕಷ್ಟು ಜನರು ಜಮಾಯಿಸಿದ್ದಾರೆ. ಇದು ಕೇವಲ ಲಾವಣ್ಯಗೆ ಮಾತ್ರವಲ್ಲ, ಇದೇ‌ ರೀತಿ ಸಾಕಷ್ಟು ಜನರಿಗೆ ಮೋಸ ಆಗಿದೆ ಎಂಬುದು ಅಲ್ಲಿದ್ದ ಗ್ರಾಹಕರ ಆರೋಪವಾಗಿತ್ತು. ಇಲ್ಲಿ ಚಿನ್ನ ಗಿರವಿ ಇಟ್ಟ ಒಬ್ಬೊಬ್ಬರದ್ದು ಒಂದೊಂದು ಕಥೆಯಾಗಿತ್ತು. ಎಲ್ಲರೂ ಬ್ಯಾಂಕ್ ಸಿಬ್ಬಂದಿ ಹಾಗೂ ಚಿನ್ನ ಪರಿಶೀಲನೆ ಮಾಡುವಾತನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಹಕರಿಗೆ ನ್ಯಾಯ ಕೊಡಿಸುತ್ತೇವೆ: ಭರವಸೆ ನೀಡಿದ ಬ್ಯಾಂಕ್​ ಪ್ರಾದೇಶಿಕ ವ್ಯವಸ್ಥಾಪಕ

ಕೆನರಾ ಬ್ಯಾಂಕ್​​ನಲ್ಲಿ ಅಡವಿಟ್ಟ ಚಿನ್ನ ಮೋಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನರಾ ಬ್ಯಾಂಕ್​ ಪ್ರಾದೇಶಿಕ ವ್ಯವಸ್ಥಾಪಕ ರಾಜಶೇಖರ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಆಂತರಿಕ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ಗ್ರಾಹಕರು ಆರೋಪ ಮಾಡಿರುವಂತೆ ಬ್ಯಾಂಕ್​ನಲ್ಲಿ ಯಾವುದೇ ಮೋಸ ಆಗುವುದಿಲ್ಲ. ಆದರೆ ಗ್ರಾಹಕರು ನಮಗೆ ಬಹಳ ಮುಖ್ಯ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಹಕರ ದೂರು ಆಧಾರಿಸಿ ತನಿಖೆ ಮಾಡಲಾಗುವುದು. ಅಕ್ಕಸಾಲಿಗ ಅಶ್ವಿನ್ ವಿರುದ್ಧ ಯಾವುದೇ ಲಿಖಿತ ದೂರು ಬಂದಿಲ್ಲ. ಆತ ಚಿನ್ನ ಮೌಲ್ಯಮಾಪನ ಮಾಡಿಕೊಟ್ಟು ಹೋಗುತ್ತಿದ್ದ. ಇಂತಹ ಪ್ರಕರಣ ಇದೇ ಮೊದಲಿಗೆ ಬೆಳಕಿಗೆ ಬಂದಿದ್ದು, ತಪ್ಪಾಗಿದ್ದರೆ ಬ್ಯಾಂಕ್ ನಿಯಮಗಳ ಪ್ರಕಾರ ಗ್ರಾಹಕರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ: ಝೀರೋ ಟ್ರಾಫಿಕ್​ನಲ್ಲಿ ಹಾಸನದಿಂದ ಮೈಸೂರಿಗೆ ಸಾಗಿದ ಹೃದಯ

ಕಷ್ಟಕ್ಕಾಗಿ ಕೂಡಿಟ್ಟ ಚಿನ್ನವನ್ನ ಬ್ಯಾಂಕ್‌ನಲ್ಲಿ ಇಟ್ಟ ಗ್ರಾಹಕರೆಲ್ಲಾ ಈಗ ಆತಂಕದಲ್ಲಿದ್ದಾರೆ. ಅತ್ತ ವಿಜಯನಗರ ಪೊಲೀಸರು ಕೂಡ ತನಿಖೆ ನಡೆಸಿದ್ದು, ಇತ್ತ ಬ್ಯಾಂಕ್‌ನವರು ನಾಳೆಯವರೆಗೂ ಸಮಯ ತೆಗೆದುಕೊಂಡಿದ್ದಾರೆ. ಒಟ್ಟಾರೆ ಸದ್ಯ ಆತಂಕದಲ್ಲಿರುವ ಗ್ರಾಹಕರಿಗೆ ಇವರು ಯಾವ ರೀತಿ ನ್ಯಾಯ ಕೊಡಿಸುತ್ತಾರೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.