ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಲಕ್ಷಾಂತರ ರೂ ಲೂಟಿ ಆರೋಪ: ದಾಖಲೆ ನೀಡಿದ ಕಾನೂನು ವಿದ್ಯಾರ್ಥಿ
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (KSOU) ವ್ಯಾಪಕ ಭ್ರಷ್ಟಾಚಾರ ನಡೆದಿರುವುದಾಗಿ ಒಬ್ಬ ಕಾನೂನು ವಿದ್ಯಾರ್ಥಿ ಆರೋಪಿಸಿದ್ದಾರೆ. ಕೋಟ್ಯಂತರ ರೂ. ಅಕ್ರಮವಾಗಿ ಖರ್ಚು ಮಾಡಲಾಗಿದೆ ಎಂದು ಅವರು ದಾಖಲೆಗಳೊಂದಿಗೆ ಬಹಿರಂಗಪಡಿಸಿದ್ದಾರೆ. ಕಂಪ್ಯೂಟರ್ಗಳು, ಬಟ್ಟೆ ಚೀಲಗಳು, ಕಟ್ಟಡ ದುರಸ್ತಿ ಮತ್ತು ಫೋಟೋಗ್ರಫಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹಣದ ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದಾರೆ.

ಮೈಸೂರು, ಫೆಬ್ರವರಿ 06: ಮುಡಾದ ಭ್ರಷ್ಟಾಚಾರದ (Corruption) ಪ್ರಕರಣದ ಬಳಿಕ ಇದೀಗ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರದ ಕೇಸ್ ಬೆಳಕಿಗೆ ಬಂದಿದೆ. ಮೈಸೂರಿನ ಕೆಎಸ್ಓಯುನಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರವನ್ನ ಕಾನೂನು ವಿಭಾಗದ ವಿದ್ಯಾರ್ಥಿಯೋರ್ವ ದಾಖಲೆ ಸಮೇತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೋಟಿ ಕೋಟಿ ಲೂಟಿ
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿಯಾಗಿರುವುದು ಇದೀಗ ಬೆಳಕಿಗೆ ಬಂದಿದೆ. ವಿವಿಯ ಕುಲಪತಿ ಪ್ರೊ, ಶರಣಪ್ಪ ವಿ ಹಲಸೆ ಸೇರಿದಂತೆ ವಿಶ್ವವಿದ್ಯಾನಿಲಯದ ಸಿಬ್ಬಂದಿ ಮೇಲೆ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಈ ಬಗ್ಗೆ ದಾಖಲೆ ಸಮೇತ ಕಾನೂನು ವಿದ್ಯಾರ್ಥಿ ಪುಟ್ಟಸ್ವಾಮಿ ಗೌಡ ಗಂಭೀರ ಆರೋಪ ಮಾಡಿದ್ದು, ಬಟ್ಟೆ ಬ್ಯಾಗ್, ಕಂಪ್ಯೂಟರ್ ಖರೀದಿ, ವರ್ಚುವಲ್ ಫೋಟೋ ಶೂಟ್, ಕಿಟಕಿ ಬಾಗಿಲು ಬದಲಾವಣೆ, ಕಂಪ್ಯೂಟರ್ ಖರೀದಿ ಸೇರಿದಂತೆ ಹಲವು ವಸ್ತುಗಳ ಖರೀದಿಯಲ್ಲೂ ಹಣ ದುರ್ಬಳಕೆ ಆಗಿಯಂತೆ.
ಇದನ್ನೂ ಓದಿ: ಸಿದ್ದರಾಮಯ್ಯ ಕುಟುಂಬ ಬೇನಾಮಿ ಆಸ್ತಿ ಹೊಂದಿರುವ ಆರೋಪ: ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ
ಇನ್ನೂ ಹಗರಣಗಳ ಊರಾಗ್ತಿದಿಯಾ ಮೈಸೂರು ಅನ್ನೋ ಆರೋಪ ಈ ರೀತಿಯ ಪ್ರಕರಣಗಳಿಂದ ಸದ್ದು ಮಾಡುತ್ತಿದೆ. ಕೆಎಸ್ಓಯು ಕಟ್ಟಡದ ವರ್ಚುವಲ್ ಟೂರ್ಗೆ 360° ಫೋಟೋಗ್ರಾಫಿ ಮಾಡಲು 96 ಲಕ್ಷದ 91 ಸಾವಿರದ 812 ರೂಪಾಯಿ. ಅದು ಕೂಡ 3-4 ಸಾವಿರ ರೂ ಖರ್ಚಿನಲ್ಲಿ ಮುಗಿಯುವ ನಾಲ್ಕು ನಿಮಿಷದ ವಿಡಿಯೋಗೆ ಮೈಸೂರು ಕಟ್ಟಡ ಒಂದಕ್ಕೆ 26,15,000 ಸಾವಿರ ರೂ. ಬಿಲ್, ಇನ್ನುಳಿದ 11 ಕಟ್ಟಡಗಳ ಫೋಟೋಗ್ರಾಫಿಗೆ ತಲಾ 4 ಲಕ್ಷ 5 ಲಕ್ಷ ಬಿಲ್ ತೋರಿಸಲಾಗಿದೆಯಂತೆ.
ಕೆಎಸ್ಓಯು ಕಟ್ಟಡಕ್ಕೆ ಎಲ್ಇಡಿ ಬಲ್ಬ್ ಹಾಕಿಸಲು ಬರೋಬ್ಬರಿ 2 ಕೋಟಿ ರೂ. ಬಿಲ್ ಮಾಡಿದ್ದು, ಕೆಎಸ್ಓಯು ಅತಿಥಿ ಗೃಹದ ಹಾಸಿಗೆ ದಿಂಬಿಗೆ 15 ಲಕ್ಷ ರೂ ಬಿಲ್. ಪುಸ್ತಕ ತುಂಬಿಕೊಂಡು ಹೋಗುವ ಬ್ಯಾಗ್ ಗೆ 60 ಲಕ್ಷ ರೂ ಬಿಲ್. ಒಂದು ಬ್ಯಾಗ್ 120 ರೂಪಾಯಿಯಂತೆ ಖರೀದಿ. ಈ ಬ್ಯಾಗ್ಗಳಿಗೆ ಮಾರುಕಟ್ಟೆಯಲ್ಲಿ 20 ರಿಂದ 30 ರೂಪಾಯಿ ಮೌಲ್ಯ ಇದೆ. 120 ರೂ ಕೊಟ್ಟು 50 ಸಾವಿರ ಬ್ಯಾಗ್ ಖರೀದಿ ಮಾಡಲಾಗಿದೆಯಂತೆ. ಕೆಎಸ್ಒಯು ಕ್ಯಾಂಪಸ್ನ ಮಾನಸ ಕಟ್ಟಡದ ಕಿಟಕಿ ಬಾಗಿಲು ಬದಲಾಯಿಸಲು 7 ಕೋಟಿ ರೂ. ಆಗಿದೆಯಂತೆ. 40 ಸಾವಿರ ಬೆಲೆಯ ಕಂಪ್ಯೂಟರ್ಗೆ 97 ಸಾವಿರ ಕೊಟ್ಟು 150 ಕಂಪ್ಯೂಟರ್ ಖರೀದಿ ಮಾಡಲಾಗಿದೆಯಂತೆ.
ಇದನ್ನೂ ಓದಿ: ಮುಡಾ ಹಗರಣ ಬೆನ್ನಲ್ಲೇ ಸಿದ್ದರಾಮಯ್ಯಗೆ ಮತ್ತೊಂದು ಕೇಸ್ ಸಂಕಷ್ಟ: ಏನದು?
ಹೀಗೆ ಸಾಲು ಆರೋಪ ಮಾಡಿರುವ ಕಾನೂನು ವಿದ್ಯಾರ್ಥಿ ಪುಟ್ಟಸ್ವಾಮಿಗೌಡ, ಕೆಎಸ್ಓಯುವ ಭ್ರಷ್ಟಾಚಾರದ ಲೀಲೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಗರಣದ ಬಗ್ಗೆ ಸರ್ಕಾರ ತನಿಖೆ ನಡೆಸಿದರೆ ಕೋಟಿ ಕೋಟಿ ಲೂಟಿ ತಡೆಗಟ್ಟಬಹುದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



