ಉದಯಗಿರಿ ಗಲಭೆ: ಸತೀಶ್ ಗಡಿಪಾರು ನೋಟಿಸ್ ವಜಾಗೊಳಿಸಿದ ಕೋರ್ಟ್
ಮೈಸೂರಿನಲ್ಲಿ ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್ಗೆ ಸಂಬಂಧಿಸಿದಂತೆ ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗ ವಿರುದ್ಧ ಹೊರಡಿಸಲಾಗಿದ್ದ ಗಡಿಪಾರು ನೋಟಿಸ್ ಅನ್ನು ನ್ಯಾಯಾಲಯ ರದ್ದುಗೊಳಿಸಿದೆ. ಪೊಲೀಸರು ಸರಿಯಾದ ಕಾರ್ಯವಿಧಾನವನ್ನು ಪಾಲಿಸದಿರುವುದರಿಂದ ಈ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆರೋಪಿ ಪರ ವಕೀಲರು ಪೊಲೀಸರ ಕ್ರಮ ಕಾನೂನುಬಾಹಿರ ಎಂದು ವಾದಿಸಿದ್ದಾರೆ.

ಮೈಸೂರು, ಮಾರ್ಚ್ 15: ಮೈಸೂರಿನಲ್ಲಿ ವಿವಾದಿತ ಪೋಸ್ಟ್ನಿಂದ ಉದಯಗಿರಿಯಲ್ಲಿ (Udayagiri) ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಡಿಪಾರು ಕೋರಿ ಪೊಲೀಸರು ಸಲ್ಲಿಸಿದ್ದ ನೋಟಿಸ್ನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಗಡಿಪಾರು (Exile) ನೋಟಿಸ್ ನೀಡುವಾಗ ಕಾರ್ಯವಿಧಾನ ಲೋಪದಿಂದ ಕೂಡಿದೆ ಎಂಬ ಅಂಶ ಉಲ್ಲೇಖಿಸಿ ಸೆಷನ್ಸ್ ಕೋರ್ಟ್ ಗಡಿಪಾರು ನೋಟಿಸ್ ವಜಾಗೊಳಿಸಿ ಶನಿವಾರ ಆದೇಶ ಹೊರಡಿಸಿದೆ. ಇದರಿಂದ ಮೈಸೂರು ಪೊಲೀಸರಿಗೆ ಹಿನ್ನಡೆಯಾದಂತಾಗಿದೆ.
ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿ ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟದ ಆರೋಪ ಎದುರಿಸುತ್ತಿರುವ ಸತೀಶ್ ಗಡಿಪಾರಿಗೆ ಪೊಲೀಸರು ಸಿದ್ಧತೆ ಮಾಡಿದ್ದರು. ಆದರೆ ಪೊಲೀಸರ ಕ್ರಮ ಪ್ರಶ್ನಿಸಿ ಸತೀಶ್ ಪರ ವಕೀಲ ಮೈಸೂರು ಜಿಲ್ಲಾ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಆರೋಪಿ ಸತೀಶ್ನನ್ನು ಗಡಿಪಾರು ಮಾಡುವ ಸಲುವಾಗಿ ಪೊಲೀಸರು ನೀಡಿದ್ದ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ನಿರ್ಬಂಧ ತೆರವುಗೊಳಿಸುವ ಸಲುವಾಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ರಿವಿಜನ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಉದಯಗಿರಿ ಗಲಭೆ: ಮೈಸೂರು ಚಲೋಗೆ ಅನುಮತಿ ನಿರಾಕರಣೆ, ಕೋರ್ಟ್ ಮೊರೆ ಹೋದ ಬಿಜೆಪಿ
ಆರೋಪಿ ಪರ ವಕೀಲ ಅ.ಮ.ಭಾಸ್ಕರ್ ತಡೆಯಾಜ್ಞೆ ತೆರವಿಗೆ ಆಕ್ಷೇಪಣೆ ವ್ಯಕ್ತಪಡಿಸಿದರು. ಆರೋಪಿ ವಿರುದ್ಧ ಹೊರಡಿಸಿರುವ ಗಡಿಪಾರು ಆದೇಶ ಕಾನೂನುಬಾಹಿರ. ಈ ಆದೇಶ ಹೊರಡಿಸುವ ಮುನ್ನ ಪೊಲೀಸರು ನಿಯಮವನ್ನು ಪಾಲಿಸಿಲ್ಲ. ಸತೀಶ್ ಅಲಿಯಾಸ್ ಪಾಂಡುರಂಗ ವಿರುದ್ಧ ಆರೋಪದ ಬಗ್ಗೆ ಉಲ್ಲೇಖವಿಲ್ಲ. ತನಿಖಾ ವರದಿ ಸಹ ಇಲ್ಲ. ಜೊತೆಗೆ ಆರೋಪಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ. ಇಷ್ಟಾದರೂ ಯಾವ ಕಾರಣಕ್ಕಾಗಿ ಗಡಿಪಾರು ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಸ್ಪಷ್ಟಪಡಿಸಲಿ ಎಂದು ವಕೀಲ ಅ.ಮ.ಭಾಸ್ಕರ್ ವಾದಿಸಿದ್ದಾರೆ.
ಪ್ರಕರಣದ ವಿಚಾರಣೆ ಆಲಿಸಿದ್ದ ನ್ಯಾಯಾಧೀಶರು ತೀರ್ಪು ಕಾಯ್ದಿರಿಸಿದ್ದರು. ಇಂದು ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಪೊಲೀಸರು ನೀಡಿದ್ದ ಗಡಿಪಾರು ನೋಟಿಸ್ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಉದಯಗಿರಿ ಗಲಭೆ: ಸತೀಶ್ ಗಡಿಪಾರಿಗೆ ಸಿದ್ಧತೆ ನಡೆಸಿದ್ದ ಪೊಲೀಸರಿಗೆ ಹಿನ್ನಡೆ!
ಮೈಸೂರಿನ ಉದಯಗಿರಿ ಗಲಾಟೆ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಠಾಣೆ, ಪೊಲೀಸ್ ವಾಹನದ ಮೇಲೆ ಕಲ್ಲು ತೂರಿ ದಾಂದಲೆ ಮಾಡಿದ್ದರು. ಬಂಧಿತರ ವಿರುದ್ಧ UAPA ಕಾಯ್ದೆಯಡಿ ಕೇಸ್ ದಾಖಲಿಸಬೇಕು ಮತ್ತು ಎನ್ಐಎ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ವತಿಯಿಂದ ಮೈಸೂರು ಚಲೋ ಜನಾಂದೋಲನ ರ್ಯಾಲಿ ಮಾಡಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:29 pm, Sat, 15 March 25