ಓಂ ಪ್ರಕಾಶ್ ಕೊಲೆ ಪ್ರಕರಣದ ದಾಖಲೆ ಸಿಸಿಬಿಗೆ ಹಸ್ತಾಂತರ: ಕೃತಿ ವಿಚಾರಣೆಗೆ ಒಳಪಡಿಸಲು ಫಿಟ್ ಎಂದ ನಿಮ್ಹಾನ್ಸ್ ವೈದ್ಯರು

ಮಾಜಿ ಡಿಜಿ ಹಾಗೂ ಐಜಿಪಿ ಒಂ ಪ್ರಕಾಶ್ ಕೊಲೆ ಕೇಸ್​ನಲ್ಲಿ ಅವರ ಪತ್ನಿ ಪಲ್ಲವಿಯ ಬಂಧನವಾಗಿದೆ. ಮಗಳು ಕೃತಿಯನ್ನು ನಿಮ್ಹಾನ್ಸ್​ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈಗ ಕೃತಿ ತನಿಖೆಗೆ ಫಿಟ್ ಎಂದು ವೈದ್ಯಕೀಯ ವರದಿ ತಿಳಿಸಿದೆ. ಮತ್ತೊಂದೆಡೆ, ಪ್ರಕರಣದ ದಾಖಲೆಗಳನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ಚುರುಕುಪಡೆಯಲಿದೆ.

ಓಂ ಪ್ರಕಾಶ್ ಕೊಲೆ ಪ್ರಕರಣದ ದಾಖಲೆ ಸಿಸಿಬಿಗೆ ಹಸ್ತಾಂತರ: ಕೃತಿ ವಿಚಾರಣೆಗೆ ಒಳಪಡಿಸಲು ಫಿಟ್ ಎಂದ ನಿಮ್ಹಾನ್ಸ್ ವೈದ್ಯರು
ಓಂ ಪ್ರಕಾಶ್ ಪುತ್ರಿ ಕೃತಿ ಹಾಗೂ ಪತ್ನಿ ಪಲ್ಲವಿ
Updated By: Ganapathi Sharma

Updated on: Apr 24, 2025 | 7:46 AM

ಬೆಂಗಳೂರು, ಏಪ್ರಿಲ್ 24: ಕರ್ನಾಟಕದ ಮಾಜಿ ಡಿಜಿ ಹಾಗೂ ಐಜಿಪಿ ಒಂ ಪ್ರಕಾಶ್ (Om Prakash) ಕೊಲೆ ಪ್ರಕರಣ ಸಂಬಂಧ ಕೊಲೆ ನಡೆದ ದಿನವೇ ಅವರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯನ್ನು ಹೆಚ್​ಎಸ್​ಆರ್ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಪಲ್ಲವಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇನ್ನು ಓಂ ಪ್ರಕಾಶ್ ಮಗಳು ಕೃತಿಯ ವಿಚಾರಣೆಯನ್ನು ಆಕೆಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು. ಹೀಗಾಗಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿಮ್ಹಾನ್ಸ್ (NIMHANS) ಆಸ್ಪತ್ರೆಗೆ ಕಳುಹಿಸಿದ್ದ ಪೊಲೀಸರು, ವೈದ್ಯಕೀಯ ವರಿದಿ ಕೇಳಿದ್ದರು. ಇದೀಗ, ತನಿಖೆಗೆ ಒಳಪಡಿಸಲು ಕೃತಿ ಮಾನಸಿಕವಾಗಿ ಫಿಟ್ ಇದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ಹೀಗಾಗಿ ಹೆಚ್​ಎಸ್​ಆರ್ ಲೇಔಟ್ ಪೊಲೀಸರು (Bengaluru Police) ವಿಚಾರಣೆಗೆ ಒಳಪಡಿಸಿದ್ದಾರೆ.

ಎರಡು ದಿನದ ಹಿಂದೆಯೇ, ಅಂದರೆ ಕೊಲೆ ನಡದ ಮರುದಿನವೇ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದರು. ಆದರೆ, ಬುಧವಾರ ಕೇಸ್ ಫೈಲ್ ಅನ್ನು ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ. ಕೇಸ್ ಫೈಲ್ ಅನ್ನು ಹೊಸದಾಗಿ ಪ್ರಕರಣದ ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಸಿಸಿಬಿಯ ಎಸಿಪಿ ಧರ್ಮೇಂದ್ರ ಪಡೆದುಕೊಂಡಿದ್ದಾರೆ.

ವಿಚಾರಣೆಗೆ ಸಹಕರಿಸಿದ ಕೃತಿ

ಓಂ ಪ್ರಕಾಶ್ ಮಗಳು ಕೃತಿಯನ್ನು ಬುಧವಾರ ಬೆಳಗ್ಗೆಯಿಂದಲೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಆಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಿದ್ದಾರೆ. ಕೃತಿಯೇ ಕೊಲೆ ಮಾಡಿದ್ದಾಳೆ ಎಂದು ಬಂಧಿಸಲು ಸಾಕ್ಷಿಗಳು ಸಿಕ್ಕಿಲ್ಲ. ಸಂಜೆಯವರೆಗೂ ವಿಚಾರಣೆ ನಡೆಸಿ ಕೇಸ್ ಫೈಲ್ ಹಸ್ತಾಂತರ ಮಾಡುವ ಮೊದಲು ಆಕೆಯನ್ನು ಮನೆಗೆ ಕಳುಹಿಸಲಾಗಿದೆ. ಜೊತೆಗೆ ಸಿಸಿಬಿ ಅಧಿಕಾರಿಗಳು ಅವಶ್ಯಕತೆ ಇದ್ದಾಗ ನೋಟಿಸ್ ನೀಡಿ ಕೃತಿಯ ವಿಚಾರಣೆ ನಡೆಸಲು ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ
ತಾಯಿ ಕೊಲೆ ಬೆದರಿಕೆ ಹಾಕಿದ್ರು, ಅವರಿಂದಲೇ ಹತ್ಯೆ ಶಂಕೆ: ಓಂ ಪ್ರಕಾಶ್ ಪುತ್ರ
ಓಂ ಪ್ರಕಾಶ್​ ಕೊಲೆ ಪ್ರಕರಣ: ನಿವೃತ್ತ ಪೊಲೀಸ್‌ ಮಹಾನಿರ್ದೇಶಕರ ಪತ್ನಿ ಬಂಧನ
ಓಂ ಪ್ರಕಾಶ್​ ಕೊಲೆ: ತನಿಖಾಧಿಕಾರಿಗಳ ಎದುರು ಕೊಲೆ ರಹಸ್ಯ ಬಿಚ್ಚಿಟ್ಟ ಪಲ್ಲವಿ
ಉತ್ತರ ಕನ್ನಡದ ಜೋಯಿಡಾದಲ್ಲಿ ಶ್ರೀಗಂಧ ತೋಟ ಹೊಂದಿದ್ದ ಓಂ ಪ್ರಕಾಶ್

ಇದನ್ನೂ ಓದಿ: ಓಂ ಪ್ರಕಾಶ್​ ಕೊಲೆ: ಪತಿಯನ್ನು 8-10 ಬಾರಿ ಇರಿದು ಪತ್ನಿ ಹತ್ಯೆ ಮಾಡಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ

ಈ ಎಲ್ಲ ಬೆಳವಣಿಗೆಗಳ ನಡುವೆ ಕೇಸ್ ಫೈಲ್ ಪಡೆದಿರುವ ಸಿಸಿಬಿ ಅಧಿಕಾರಿಗಳು ಇಂದು, ಜೈಲಿನಲ್ಲಿ ಇರುವ ಪಲ್ಲವಿಯನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಇಂದು ಮುಕ್ತ ನ್ಯಾಯಾಲಯದಲ್ಲಿಯೇ ಪಲ್ಲವಿಯನ್ನು ಸಿಸಿಬಿ ವಶಕ್ಕೆ ಪಡೆಯುವ ಸಾದ್ಯತೆ ಇದ್ದು, ವಿಚಾರಣೆ ನಂತರ ಯಾವ ಯಾವ ಅಂಶಗಳು ಹೊರಬರುತ್ತವೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ