
ಬೆಂಗಳೂರು, (ಸೆಪ್ಟೆಂಬರ್ 11): ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿರುವುದು, ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದರ ಮಧ್ಯೆ ಇಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಚಿವರ ಬೆಂಗಳೂರಿನ ನಿವಾಸ, ಪುತ್ರಿ ಪ್ರಿಯಾಂಕಾ, ಮಗ ರಾಹುಲ್ ಹಾಗೂ ಆಪ್ತರ ಒಟ್ಟು 21 ಕಡೆ ಮಾಡಿದ್ದ ದಾಳಿಯಲ್ಲಿ ಏನೇನು ಸಿಕ್ತು ಎನ್ನುವುದನ್ನು ಇಂಚಿಚು ಮಾಹಿತಿ ನೀಡಿದೆ. ಇದರಲ್ಲಿ ಪ್ರಮುಖವಾಗಿ PWD ಇಲಾಖೆಯಲ್ಲಿ ಅಕ್ರಮ ಹಾಗೂ ಗುತ್ತಿಗೆದಾರರಿಂದ ಲಂಚ ಸಂಗ್ರಹ ಸಂಬಂಧಿಸಿದ ದಾಖಲೆ, ಡಿಜಿಟಲ್ ಸಾಧನ ಪತ್ತೆಯಾಗಿದೆ ಎಂದು ಇಡಿ ಸ್ಫೋಟ ವಿಚಾರಗಳನ್ನು ಬಹಿರಂಗಪಡಿಸಿದೆ.
ಸತೀಶ್ ಜಾರಕಿಹೊಳಿ ನಿವಾಸ ಸೇರಿದಂತೆ 21 ಕಡೆ ದಾಳಿ ನಡೆಸಲಾಗಿದೆ. ಸತೀಶ್ ಜಾರಕಿಹೊಳಿ, ಸಂಸದೆ ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್ಗೆ ಸಂಬಂಧಿಸಿದ ಸ್ಥಳ, ಅಳಿಯ ವೈ.ಡಿ. ಮಂಜುನಾಥ್ ಸೇರಿದಂತೆ ಆಪ್ತರ ಮನೆ, ಕಚೇರಿ ಸೇರಿದಂತೆ ಬೆಂಗಳೂರು, ಬೆಳಗಾವಿ, ಗೋಕಾಕ ಹಾಗೂ ಕೋಲ್ಕತ್ತಾದಲ್ಲೂ ಸಹ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ. ವಿದೇಶಿ ಹೂಡಿಕೆ, ಕ್ರಾಸ್ ಬಾರ್ಡರ್ ವ್ಯವಹಾರಗಳ ಬಗ್ಗೆ ತನಿಖೆ ನಡೆದಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ದಾಳಿ ವೇಳೆ ಕಾಂಗೋದ ಮೆಸ್ಸರ್ಸ್ನಲ್ಲಿ ಗಣಿಗಾರಿಕೆ ಸಂಸ್ಥೆಯಲ್ಲಿ ಸತೀಶ್ ಜಾರಕಿಹೊಳಿ ಪಾಲು, ಚಿನ್ನದ ಗಣಿಗಾರಿಕೆಯಲ್ಲಿ ಶೇ.40ರಷ್ಟು ಪಾಲು ಹೊಂದಿರುವುದು ಬೆಳಕಿಗೆ ಬಂದಿದೆ. ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ದಾಳಿ ವೇಳೆ ಲೆಕ್ಕಕ್ಕೆ ತೋರಿಸದ 3.3 ಕೋಟಿ ರೂಪಾಯಿ ನಗದು, 15 ಲಕ್ಷ ಮೌಲ್ಯದ ಡಾಲರ್, ಯುರೋ ಸೇರಿದಂತೆ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು ಅದೆಲ್ಲಾವನ್ನೂ ಸೀಜ್ ಮಾಡಲಾಗಿದೆ.
ಲೋಕೋಪಯೋಗಿ ಇಲಾಖೆಯಲ್ಲಿ ಅಕ್ರಮ ಹಾಗೂ ಗುತ್ತಿಗೆದಾರರಿಂದ ಲಂಚ ಸಂಗ್ರಹ ಸಂಬಂಧಿಸಿದ ದಾಖಲೆ, ಡಿಜಿಟಲ್ ಸಾಧನ ಪತ್ತೆಯಾಗಿದ್ದು, ಸಚಿವ ಸತೀಶ್ ನಿವಾಸದ ಮೇಲೆ ದಾಳಿ ಸಂಬಂಧ ತನಿಖೆ ಮುಂದುವರಿದಿದೆ ಎಂದು ಬೆಂಗಳೂರು ಜಾರಿ ನಿರ್ದೇಶನಾಲಯ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ.
PWD ಇಲಾಖೆಯಲ್ಲಿ ಟೆಂಡರ್ ಪಡೆಯಲು ಭಾರಿ ಲಂಚ ನೀಡಲಾಗಿದೆ. ಭಾರತೀಯ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆ ಲಂಚ ಪಡೆದಿರುವ ಆರೋಪ ಇದ್ದು, ಈ ಹಣದಿಂದಲೇ ವಿದೇಶಿದಲ್ಲಿ ಆಸ್ತಿ ಖರೀದಿಸಲು ಬಳಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಕಂಪನಿ ಅಧಿಕಾರಿಗಳು ಹಾಗೂ ಮಾಲೀಕರ ಮನೆ, ಕಚೇರಿಗಳ ಮೇಲು ದಾಳಿ ಮಾಡಲಾಗಿದೆ.
ಸತೀಶ್ ಜಾರಕಿಹೊಳಿ ಕುಟುಂಬಸ್ಥರು ಎಲ್ದೋರಾಡೋ ಮೈನಿಂಗ್ ರಿಸೋರ್ಸ್ ಮತ್ತು ಜಾಂಬಿಯಾದ ನವ ಔರಂ ಮೈನಿಂಗ್ ಲಿಮಿಟೆಡ್ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳಲ್ಲಿ ಷೇರು ಹೊಂದಿರುವುದು ಕಂಡು ಬಂದಿದೆ. ಅಲ್ಲದೆ ಚಿನ್ನದ ಗಣಿಗಾರಿಕೆ ನಡೆಸುತ್ತಿರುವ ಮ್ಯಾಗ್ನಿಟ್ಯೂಡ್ ಸ್ಟಾರ್ ಕಂಪನಿಯಲ್ಲಿ ಸತೀಶ್ ಜಾರಕಿಹೊಳಿ ಪಾಲುದಾರಿಕೆ ಶೇಕಡಾ 40 ರಷ್ಟು ಪಾಲುದಾರಿಕೆ ಹೊಂದಿದ್ದಾರೆ ಎನ್ನುವ ವಿಚಾರ ಬಯಲಾಗಿದೆ.
ED, Bengaluru conducted searches at 21 premises linked to Karnataka Public Works Minister Satish Jarkiholi & associates at Bengaluru, Belagavi, Gokak, & Kolkata on 09.09.2026 to 10.09.2026 under FEMA, 1999 & seized unaccounted cash of Rs 3.3 Cr, & foreign currency of Rs 15 Lakh. pic.twitter.com/RfPbuISA4F
— ED (@dir_ed) September 11, 2026
ವಿದೇಶದಲ್ಲಿ ಹೂಡಿಕೆ ಸಂಬಂಧ ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಯಾಗಿದೆ ಎಂದು ವಿಪಕ್ಷ ಬಿಜೆಪಿಗರು ಮಾತು. ಆದ್ರೆ, ಇತ್ತ ಕಾಂಗ್ರೆಸ್ ನಾಯಕರು, ಇಲ್ಲ ಇದು ಟಾರ್ಗೆಟ್ ಮಾಡಿ ದಾಳಿ ಮಾಡಿಸಲಾಗಿದೆ. ಕೇಂದ್ರ ಸರ್ಕಾರವೇ ಮಾಡಿಸಿದೆ ಎಂದು ಆಕ್ರೋಶಗೊಂಡಿದ್ದಾರೆ. ಅಲ್ಲದೇ ಇಡಿ ವಿರುದ್ಧ ಮತ್ತು ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಸರಣಿ ಪ್ರತಿಭಟನೆಗಳನ್ನು ನಡೆಸಿದ್ದು, ಕೇವಲ ಇಡಿ, ಬಿಜೆಪಿಯ ಹೊರತುಪಡಿಸಿ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ, ಮುಂದಿನ ಮುಖ್ಯಮಂತ್ರಿ ಆಗುವ ಅವಕಾಶ ಸತೀಶ್ ಜಾರ್ಕಿಹೋಳಿ ಅವರಿಗೆ ಇದ್ದು, ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ರಾಜಕೀಯವಾಗಿ ಸತೀಶ್ ಜಾರ್ಕಿಹೋಳಿಯನ್ನು ಕಟ್ಟಿಹಾಕಲು ಇಡಿ ದಾಳಿ ನಡೆಸಲಾಗಿದೆ ಎಂಬುದು ಸತೀಶ್ ಬೆಂಬಲಿಗರ ಆರೋಪವಾಗಿದೆ.
ಆದ್ರೆ, ಇದೀಗ ದಾಳಿ ವೇಳೆ ಲೋಕೋಪಯೋಗಿ ಇಲಾಖೆಯಲ್ಲಿ ಅಕ್ರಮ ಹಾಗೂ ಗುತ್ತಿಗೆದಾರರಿಂದ ಲಂಚ ಸಂಗ್ರಹ ಸಂಬಂಧಿಸಿದ ದಾಖಲೆ ಸಿಕ್ಕಿರುವುದಾಗಿ ಸ್ವತಃ ಇಡಿಯೇ ಮಾಧ್ಯಮ ಪ್ರಕಟಣೆ ಮೂಲಕ ಬಹಿರಂಗಪಡಿಸಿದ್ದು, ಇದೀಗ ವಿಪಕ್ಷಗಳಿಗೆ ಒಂದು ರೀತಿಯಾಗಿ ಅಸ್ತ್ರ ಸಿಕ್ಕಂತಾಗಿದೆ. ಅಕ್ರಮ ಹಾಗೂ ಲಂಚ ದಾಖಲೆ ಪತ್ತೆಯಾಗಿರುವುದನ್ನು ಮುಂದಿಟ್ಟುಕೊಂಡೇ ಸತೀಶ್ ಜಾರಕೊಹೊಳಿ ಮೇಲೆ ಮುಗಿಬೀಳುವ ಸಾಧ್ಯತೆಗಳಿವೆ.
Published On - 8:25 pm, Fri, 11 September 26