ನಾಳೆ ಬೆಂಗಳೂರಿನಲ್ಲಿ ರಾಹುಲ್ ಪ್ರತಿಭಟನಾ ಸಮಾವೇಶ: ಹಲವು ರಸ್ತೆಗಳು ಬಂದ್, ಬಿಗಿ ಬಂದೋಬಸ್ತ್
2024ರ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ. ನಮ್ಮ ಬಳಿ ದಾಖಲೆಗಳಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಆಡಳಿತರೂಢ ಬಿಜೆಪಿ ಜೊತೆಗೆ ಚುನಾವಣಾ ಆಯೋಗ ಶಾಮೀಲಾಗಿದೆ ಎಂದು ಆರೋಪಿಸಿದ್ದರು. ಆದ್ರೆ, ಇಂದು (ಆಗಸ್ಟ್ 07) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಕರ್ನಾಟಕ, ಮಹಾರಾಷ್ಟ್ರದಲ್ಲಿ ಮತಗಳ್ಳತನಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನ ರಿಲೀಸ್ ಮಾಡಿದ್ದಾರೆ. ಇನ್ನು ನಾಳೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಹೇಗಿರಲಿದೆ ಸೆಕ್ಯೂರಿಟಿ, ಯಾವೆಲ್ಲ ರಸ್ತೆಗಳಲ್ಲಿ ಸಂಚಾರ ನಿಷೇಧ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಂಗಳೂರು, (ಆಗಸ್ಟ್ 07): 2024ರ ಲೋಕಸಭೆ ಚುನಾವಣೆಯಲ್ಲಿ (Loksabha Election ) ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ (Rahul Gandhi) ಆಟಂ ಬಾಂಬ್ ಸಿಡಿಸಿದ್ದಾರೆ. ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಾಳೆ (ಆಗಸ್ಟ್ 08) ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್ನಲ್ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನಾ ಸಮಾವೇಶಕ್ಕೆ ‘ವೋಟ್ ಅಧಿಕಾರ್ ರ್ಯಾಲಿ’ ಎಂದು ಹೆಸರಿಸಲಾಗಿದ್ದು, ಪ್ರತಿಭಟನಾ ರ್ಯಾಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಹೀಗಾಗಿ ಟ್ರಾಫಿಕ್ ಬಿಸಿ ತಪ್ಪಿಸುವ ನಿಟ್ಟಿನಲ್ಲಿ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ. ಇನ್ನು ಭದ್ರತೆಗಾಗಿ 6 ಸಾವಿರ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸಿದ ಕಾಂಗ್ರೆಸ್, ಆಗಸ್ಟ್ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ಮೊದಲು ಯೋಜಿಸಿತ್ತು ಆದರೆ ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೇನ್ ಅವರ ನಿಧನದಿಂದಾಗಿ ಪ್ರತಿಭಟನೆಯನ್ನು ನಾಳೆ ಅಂದರೆ ಆಗಸ್ಟ್ 8ರಂದು ಫ್ರಿಂಡಂ ಪಾರ್ಕ್ ನಲ್ಲಿ ನಡೆಯಲಿದೆ. ದೇಶದ ಪ್ರಮುಖ ನಗರ ಸೇರಿದಂತೆ ಹಲವೆಡೆ ಈ ಪ್ರತಿಭಟನೆ ನಡೆಯಲಿದೆ. ಈ ಮೂಲಕ ಈ ಪ್ರತಿಭಟನೆಯನ್ನು ಜನಾಂದೋಲನವನ್ನಾಗಿ ಮಾಡಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಫ್ರೀಡಂ ಪಾರ್ಕ್ ಪ್ರತಿಭಟನೆಗೆ ಬೃಹತ್ ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆ ರಾಹುಲ್ ಗಾಂಧಿ ಪ್ರತಿಭಟನೆ: ಹಲವೆಡೆ ವಾಹನ ಸಂಚಾರ ಬಂದ್, ಇಲ್ಲಿದೆ ಪರ್ಯಾಯ ಮಾರ್ಗ
ಇನ್ನು ಈ ಪ್ರತಿಭಟನಾ ಸಮಾವೇಶದಲ್ಲಿ ಮತಗಳ್ಳತನದ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಇಂದು ದೆಹಲಿ ಸುದ್ದಿಗೋಷ್ಠಿ ನಡೆಸಿ ಅಂಕಿ-ಸಂಖ್ಯೆ ಸಮೇತ ದಾಖಲೆಗಳನ್ನು ರಿಲೀಸ್ ಮಾಡಿದ್ದು, ನಾಳೆ ಬೆಂಗಳೂರು ಸೆಂಟ್ರಲ್ ಕ್ಷೇತ್ರಕ್ಕೆ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವೋಟ್ ಸ್ಕ್ಯಾಮ್ ಬಗ್ಗೆ ಮತ್ತಷ್ಟು ದಾಖಲೆ ಸಮೇತ ಅಂಕಿ-ಸಂಖ್ಯೆ ಬಿಚ್ಚಿಡಲಿದ್ದಾರೆ.
6 ಸಾವಿರ ಪೊಲೀಸರ ನಿಯೋಜನೆ
ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಸಂಬಂಧ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಆ.8ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ 6000 ಪೊಲೀಸರನ್ನು ನಿಯೋಜಿಸಲಾಗಿದೆ. 15 ಸೆಕ್ಟರ್ ಗಳನ್ನ ವಿಂಗಡಣೆ ಮಾಡಿ, ಪ್ರತಿ ಸೆಕ್ಟರ್ಗೆ ಓರ್ವ ಡಿಸಿಪಿ ನೇತೃತ್ವದಲ್ಲಿ ತಾತ್ಕಾಲಿಕ ಕಂಟ್ರೋಲ್ ರೂಂ ತೆಗೆಯಲಾಗಿದೆ. ರಾಹುಲ್ ಪ್ರತಿಭಟನಾ ರ್ಯಾಲಿ ಸಾಗಲಿರುವ ಮಾರ್ಗದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಭದ್ರತೆಗೆ 15 ಸೆಕ್ಟರ್ಗಳಾಗಿ ವಿಂಗಡಣೆ ಮಾಡಲಾಗಿದ್ದು, ಪ್ರತಿ ಸೆಕ್ಟರ್ ನಲ್ಲಿ ಓರ್ವ ಡಿಸಿಪಿ ನೇತೃತ್ವದಲ್ಲಿ ಸೆಕ್ಯೂರಿಟಿ ಹೊಣೆ ನೀಡಲಾಗಿದೆ. ಪ್ರತಿಭಟನಾ ನಿರತರ ನಡುವೆ 500 ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಮಹಾರಾಣಿ ಕಾಲೇಜು ಜಂಕ್ಷನ್, ಶೇಷಾದ್ರಿ ರಸ್ತೆ, ಮೆಜೆಸ್ಟಿಕ್, ಉಪ್ಪಾರಪೇಟೆ, ಕಾಟನ್ಪೇಟೆ, ಕೆಂಪೇಗೌಡ ಬಸ್ ನಿಲ್ದಾಣ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲೂ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.ಗರುಡ ಫೋರ್ಸ್ ಮತ್ತು ಡಿ ಸ್ವಾತ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆ್ಯಂಬುಲೆನ್ಸ್, ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 5 ವಾಯುವಜ್ರ ಬಸ್ ಸೇರಿ ಒಟ್ಟು 15 ಬಸ್ ಗಳ ನಿಯೋಜಿಸಲಾಗಿದೆ.
ಪ್ರತಿಭಟನಾ ಮೆರವಣಿಗೆ ಮಾರ್ಗದಲ್ಲಿ ಹದ್ದಿನ ಕಣ್ಣು
ಪ್ರತಿಭಟನಾ ಮೆರವಣಿಗೆ ಸಾಗುವ ಮಹಾರಾಣಿ ಜಂಕ್ಷನ್, ಮುಖ್ಯ ಚುನಾವಣಾ ಆಯುಕ್ತರ ಕಚೇರಿ, ಕಾವೇರಿ ಗೆಸ್ಟ್ ಹೌಸ್, ಬಿಎಂಸಿ ಹಾಸ್ಟೆಲ್, ಓಣಿ ಆಂಜನೇಯ ದೇವಾಲಯ, ಜ್ಞಾನಜ್ಯೋತಿ ಆಡಿಟೋರಿಯಂ, ಅರಮನೆ ರಸ್ತೆ ಜಂಕ್ಷನ್, ವೈ.ರಾಮಚಂದ್ರ ರಸ್ತೆ, ಕುರುಬರ ಸಂಘ ವೃತ್ತ, ಸಾಗರ್ ಜಂಕ್ಷನ್, ಗಾಂಧಿನಗರ, ಪೋತಿಸ್ ಜಂಕ್ಷನ್ ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧ
ನಾಳೆ ಬೆಳಗ್ಗೆ 10.30ರಿಂದ 11.30ರವರೆಗೆ ಹಾಗೂ ಮಧ್ಯಾಹ್ನ 3.30ರಿಂದ ಸಂಜೆ 4.30ರವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ.
ಶಾಂತಲಾ ಜಂಕ್ಷನ್ – ಖೋಡೆ ಸರ್ಕಲ್ ನಿಂದ ಆನಂದರಾವ್ ಫ್ಲೈ ಓವರ್ – ಓಲ್ಡ್ ಜೆಡಿಎಸ್ ಕ್ರಾಸ್ – ಶೇಷಾದ್ರಿ ರಸ್ತೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು ಲುಲು ಮಾಲ್ – ಕೆಎಫ್ಎಂ – ರಾಜೀವ್ ಗಾಂಧಿ ಸರ್ಕಲ್ – ಮಂತ್ರಿ ಮಾಲ್ – ಸ್ವಸ್ತಿಕ್ ಸರ್ಕಲ್, ಶೇಷಾದ್ರಿ ಪುರಂ, ನೆಹರೂ ಸರ್ಕಲ್, ರೇಸ್ ಕೋರ್ಸ್, ಫ್ಲೈ ಓವರ್ – ರೇಸ್ ಕೋರ್ಸ್ ರಸ್ತೆ ಮೂಲಕ ಸಂಚರಿಸುವಂತೆ ಕೋರಲಾಗಿದೆ.
ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಸರ್ಕಲ್ ರಸ್ತೆ ಮೂಲಕ ಹೋಗಬೇಕಾದ ವಾಹನಗಳು ಕೆಜಿ ರಸ್ತೆ – ಮೈಸೂರು ಬ್ಯಾಂಕ್ ಸರ್ಕಲ್ ಜಂಕ್ಷನ್ – ಸಾಗರ್ ಜಂಕ್ಷನ್ – ಕೆಜೆ ಜಂಕ್ಷನ್ – ಎಲೈಟ್ – ಟಿಬಿ ರಸ್ತೆ – ಕೆಎಫ್ಎಂ – ರಾಜೀವ್ ಗಾಂಧಿ ಸರ್ಕಲ್ – ಸ್ವಸ್ತಿಕ್ – ನೆಹರೂ ಸರ್ಕಲ್ – ರೇಸ್ ಕೋರ್ಸ್ ರಸ್ತೆ – ಫ್ಲೈಓವರ್ ರಸ್ತೆ ಮೂಲಕ ಸಂಚರಿಸಬೇಕು.
ಚಾಲುಕ್ಯ ಸರ್ಕಲ್ ನಿಂದ ಮೈಸೂರು ಬ್ಯಾಂಕ್ ಕಡೆಗೆ ಹೋಗುವ ವಾಹನಗಳು ಚಾಲುಕ್ಯ ಸರ್ಕಲ್ – ಎಲ್ಆರ್ ಡಿ – ರಾಜಭವನ ರಸ್ತೆ – ಇನ್ ಫೆಂಟ್ರಿ ರಸ್ತೆ – ಇಂಡಿಯನ್ ಎಕ್ಸ್ ಪ್ರೆಸ್ ರಸ್ತೆ ಮೂಲಕ ತೆರಳಬೇಕಿದೆ.
ಇನ್ನು, ಕಾಳಿದಾಸ ರಸ್ತೆ – ಕನಕದಾಸ ಜಂಕ್ಷನ್ ಕಡೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು ಕನಕದಾಸ ಜಂಕ್ಷನ್ ಬಲ ತಿರುವು ಪಡೆದು ಸಾಗರ ಜಂಕ್ಷನ್ ಕಡೆಗೆ ಸಂಚರಿಸಬೇಕಿದೆ.
ಮೌರ್ಯ/ಸುಬ್ಬಣ್ಣ ಜಂಕ್ಷನ್ ನಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು ಸುಬ್ಬಣ್ಣ ಜಂಕ್ಷನ್ ಕಡೆಯಿಂದ ಬಲ ತಿರುವು ಪಡೆದು ಆನಂದ್ ರಾವ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
ಪ್ರತಿಭಟನಾ ಸ್ಥಳದಲ್ಲಿ ಮರ, ಗೋಡೆ ನೆಲಸಮ
ಆಗಸ್ಟ್ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕ ಮಾಡಿರುವ ಮತಕಳ್ಳತನದ ಆರೋಪದ ವಿರುದ್ಧ ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಈ ಪ್ರತಿಭಟನಾ ಸಮಾವೇಶಕ್ಕೆ ಖುದ್ದು ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸುವಾಗ ಫ್ರೀಡಂ ಪಾರ್ಕ್ನ ಗೋಡೆಗಳನ್ನು ನೆಲಸಮ ಮಾಡಲಾಗಿದೆ ಮತ್ತು ಮರಗಳನ್ನು ಕಡಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.
Published On - 6:35 pm, Thu, 7 August 25








