ಹೊಸ ಬಟ್ಟೆ ತರಲು ಹೋಗಿದ್ದ ವಿದ್ಯಾರ್ಥಿ ದುರಂತ ಅಂತ್ಯ: ಚೀಲದಲ್ಲಿ ತುಂಬಿ ಕೆರೆಗೆಸೆದ ಸ್ನೇಹಿತರು
ಶಾಲೆಯಲ್ಲಿ ಬೀಳ್ಕೊಡಿಗೆ ಸಮಾರಂಭ ಹಿನ್ನೆಲೆಯಲ್ಲಿ ಸ್ನೇಹಿತರು ಜಾಮ್ ಝೂಮ್ ಆಗಿ ಮಿಂಚಲು ಹೊಸ ಬಟ್ಟೆ ಖರೀದಿಗೆ ಹೋಗಿದ್ದರು. ಇನ್ನೇನು ಬಟ್ಟೆ ಖರೀದಿಸಿ ಮನೆಗೆ ವಾಪಸ್ ಆಗುವ ವೇಳೆಯೇ ಮಾರ್ಗಮಧ್ಯೆ ಆಗಿದ್ದೇ ಬೇರೆ. ಆ ಸಾವಿನ ರಹಸ್ಯ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಅವನ ಬಾಯಾರಿಕೆ ಅವನನ್ನು ಬಲಿಪಡೆದುಕೊಂಡಿದೆ. ಅಷ್ಟಕ್ಕೂ ಮಾರ್ಗ ಮಧ್ಯೆ ಆಗಿದ್ದೇನು?

ರಾಯಚೂರು, (ಮಾರ್ಚ್ 10): ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಗೆ ಸ್ನೇಹಿತರೊಂದಿಗೆ ಹೋದ ಬಾಲಕ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ರಾಯಚೂರು (Raichur) ಜಿಲ್ಲೆ ಲಿಂಗಸೂಗೂರಿನಲ್ಲಿ ನಡೆದಿದೆ. ಗುಂಡಸಾಗರ ಗ್ರಾಮದ 15 ವರ್ಷದ ಕಾರ್ತಿಕ್ ಸಾವನ್ನಪ್ಪಿದ ಯುವಕ. ಬಟ್ಟೆ ಖರೀದಿಸಿ ವಾಪಸ್ ಬರುವ ವೇಳೆ ನೀರು ಕುಡಿಯಲೆಂದು ಹೋದಾಗ ಕಾರ್ತಿಕ್ ವಿದ್ಯುತ್ ತಗುಲಿ ಸಾವನ್ನಪ್ಪಿದ್ದು, ಇದರಿಂದ ಆತಂಕಗೊಂಡ ಜೊತೆಗಿದ್ದ ಸ್ನೇಹಿತರು, ತಮ್ಮ ಮೇಲೆ ಬರುತ್ತೆಂಬ ಭಯಕ್ಕೆ ಕಾರ್ತಿಕನ ಶವವನ್ನು ಗೋಣಿಚೀಲದಲ್ಲಿ ತುಂಬಿ ಕಲ್ಲು ಕಟ್ಟಿ ಕೆರೆಗೆ ಎಸೆದಿದ್ದಾರೆ.
ಹೊಸ ಬಟ್ಟೆ ತರಲು ಹೋಗಿದ್ದ ಸ್ನೇಹಿತರು
ಇಂದು (ಮಾರ್ಚ್ 10) ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಇತ್ತು. ಹೀಗಾಗಿ ಸ್ನೇಹಿತರು ಸೇರಿಕೊಂಡು ನಿನ್ನೆ(ಮಾರ್ಚ್ 09) ಹೊಸ ಬಟ್ಟೆ ಖರೀದಿಸಲು ಬೈಕ್ನಲ್ಲಿ ಲಿಂಗಸ್ಗೂರಿಗೆ ಹೋಗಿದ್ದರು. ಬಟ್ಟೆ ಎಲ್ಲಾ ಖರೀದಿಸಿ ವಾಪಸ್ ಗುಂಡಸಾಗರಕ್ಕೆ ಹೊರಟ್ಟಿದ್ದರು. ಆದ್ರೆ, ದಾರಿಯಲ್ಲಿ ಕಾರ್ತಿಕನಿಗೆ ಬಾಯಾರಿಕೆಯಾಗಿದ್ದರಿಂದ ಗುಂಡಸಾಗರಕ್ಕೆ ಇನ್ನೂ ನಾಲ್ಕೈದು ಕಿಮಿ ಇರುವ ಮಾರ್ಗ ಮಧ್ಯೆ ರಸ್ತೆ ಪಕ್ಕದ ಹೊಲದಲ್ಲಿ ನೀರು ಕುಡಿಯಕು ಹೋಗಿದ್ದ. ಆಗ ಬೋರ್ ವೆಲ್ ನ ವಿದ್ಯುತ್ ತಗುಲಿದ್ದು, ಬಿದ್ದು ಒದ್ದಾಡಿದ್ದಾನೆ. ಬಳಿಕ ಸ್ನೇಹಿತರು ಕಾರ್ತಿಕ್ ನನ್ನು ಬೈಕ್ನಲ್ಲಿ ಕೂರಿಸಿಕೊಂಡು ಚಿಕಿ ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದ್ರೆ ಮಾರ್ಗ ಮಧ್ಯೆ ಕಾರ್ತಿಕ್ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಅನ್ಯಧರ್ಮದವನೊಂದಿಗೆ ಮೊಮ್ಮಗಳು ವಿವಾಹ: ಇದೇ ಸಿಟ್ಟಿನಲ್ಲಿ ಮರಿಮೊಮ್ಮಗನನ್ನ ಕೊಂದ ಅಜ್ಜಿ
ಕಾರ್ತಿಕ್ ಮೃತದೇಹವನ್ನು ಕೆರೆಗೆಸೆದ ಸ್ನೇಹಿತರು
ಈ ವೇಳೆ ಆತನ ಕಾಲುಗಳು ರಸ್ತೆಯುದ್ದಕ್ಕೂ ತಾಗಿ ರಕ್ತ ಗಾಯಗಳಾಗಿವೆ.ಇದರಿಂದ ತಮ್ಮ ಮೇಲೆ ಕೊಲೆ ಆರೋಪ ಬರುತ್ತೆ ಎಂದು ಆತಂಕಗೊಂಡ ಸ್ನೇಹಿತರು, ಕಾರ್ತಿಕ್ ನ ಮೃತದೇಹವನ್ನ ಬೈಕ್ ಮೇಲೆ ಕೂರಿಸಿಕೊಂಡು ಲಿಂಗಸುಗೂರು ಎಪಿಎಂಸಿ ಬಳಿ ತೆರಳಿದ್ದು, ಅಲ್ಲಿ ಚೀಲವೊಂದರಲ್ಲಿ ಕಾರ್ತಿಕ್ ಮೃತದೇಹ ಹಾಕಿ ಮೂಟೆ ಕಟ್ಟಿದ್ದಾರೆ. ಬಳಿಕ ಅದರಲ್ಲಿ ಮೂರ್ನಾಲ್ಕು ಕಲ್ಲುಗಳನ್ನ ಹಾಕಿ ಎಪಿಎಂಸಿ ಬಳಿಯ ಕರಡಕಲ್ ಕೆರೆಯಲ್ಲಿ ಬೀಸಾಡಿದ್ದಾರೆ.ಬಳಿಕ ಊರಿಗೆ ಬಂದು ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಆದ್ರೆ ಘಟನೆ ಬಗ್ಗೆ ತುಟಿ ಬಿಚ್ಚಿಲ್ಲ. ಇನ್ನೊಂದೆಡೆ ತಡರಾತ್ರಿ ಆದರೂ ಮಗ ಮನೆ ಬಾರದಕ್ಕೆ ಕಾರ್ತಿಕ್ ಮನೆಯವರು ಹುಡುಕಾಟ ನಡೆಸಿದ್ದು, ಕೊನೆಗೆ ಸಂಬಂಧಿಯೊಬ್ಬರು ಕಾರ್ತಿಕ್ ಸ್ನೇಹಿತರನ್ನು ಪ್ರಶ್ನಿಸಿದಾಗ ಮೂಟೆ ಕಟ್ಟಿ ಕರೆಗೆ ಬೀಸಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಈ ಮಾಹಿತಿ ತಿಳಿದು ಕರಡಕಲ್ ಕೆರೆ ಬಳಿ ಪೊಲೀಸರು ಭೇಟಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಕರೆಯಲ್ಲಿ ಹುಡುಕಾಟ ನಡೆಸಿದ್ದು, ಗೋಣಿ ಚೀಲದಲ್ಲಿ ಕಾರ್ತಿಕ್ ಶವ ಪತ್ತೆಯಾಗಿದೆ. ಇನ್ನು ಕಾರ್ತಿಕ್ ಪೋಷಕರು ಆತನನ್ನ ಕರೆದೊಯ್ದಿದ್ದ ಸ್ನೇಹಿತರ ವಿರುದ್ಧ ಕೊಲೆ ಆರೋಪದಡಿ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸದ್ಯ ಪೊಲೀಸರು ಇಬ್ಬರು ಅಪ್ರಾಪ್ತರನ್ನ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
