ಮಸ್ಕಿ ಕಾಂಗ್ರೆಸ್ ಶಾಸಕನ ಪುತ್ರ, ಸಹೋದರನಿಂದ ಮೊಲ ಬೇಟೆ, ಮೆರವಣಿಗೆ
ರಾಯಚೂರಿನ ಮಸ್ಕಿ ಕಾಂಗ್ರೆಸ್ ಶಾಸಕರ ಪುತ್ರ ಮತ್ತು ಸಹೋದರರು ಯುಗಾದಿ ಹಬ್ಬದ ಸಂದರ್ಭದಲ್ಲಿ ಮೊಲಗಳನ್ನು ಬೇಟೆಯಾಡಿ ಮೆರವಣಿಗೆ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಿಂದಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದ್ದು, ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
ರಾಯಚೂರು, ಏಪ್ರಿಲ್ 01: ಯುಗಾದಿ (Ugadi) ಹಬ್ಬ ಹಿನ್ನೆಲೆಯಲ್ಲಿ ಮಸ್ಕಿ (Maski) ಕಾಂಗ್ರೆಸ್ (Congress) ಶಾಸಕ ಆರ್.ಬಸನಗೌಡ ತುರ್ವಿಹಾಳ (Basanagouda Turvihal) ಪುತ್ರ ಮತ್ತು ಸಹೋದರ ಕಾಡುಪ್ರಾಣಿಗಳನ್ನು ಬೇಟೆಯಾಡಿ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಮೂಲಕ ಶಾಸಕರ ಪುತ್ರ ಸತೀಶ್ಗೌಡ, ಸಹೋದರ ಸಿದ್ದನಗೌಡ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಶಾಸಕರ ಪುತ್ರ, ಸಹೋದರನ ನೇತೃತ್ವದಲ್ಲಿ ಮೊಲಗಳನ್ನು ಬೇಟೆಯಾಡಲಾಗಿದೆ. ಬಳಿಕ, ಮೊಲಗಳ ಕಳೆಬರಹವನ್ನು ಕಟ್ಟಿಗೆಗಳಿಗೆ ಕಟ್ಟಿ ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಮೆರವಣಿಗೆ ಮಾಡಲಾಗಿದೆ. ಅಲ್ಲದೇ, ಖಡ್ಗ ಮತ್ತು ಕೊಡಲಿ ಪ್ರದರ್ಶನ ಮಾಡಲಾಗಿದೆ.
ಘಟನೆ ಸಂಬಂಧ ಮಸ್ಕಿ ಕಾಂಗ್ರೆಸ್ ಶಾಸಕ ಬನಸಗೌಡ ತುರ್ವಿಹಾಳ ಅವರ ಪುತ್ರ ಸತೀಶ್ ಗೌಡ ಹಾಗೂ ಸಹೋದರ ಸಿದ್ದನಗೌಡ ಹಾಗೂ ದುರ್ಗೇಶ್ ಸೇರಿ ಹಲವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.
ಮೂರು ವರ್ಷ ಜೈಲು ಶಿಕ್ಷೆ
ಘಟನೆ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಮಾತನಾಡಿ, ವಿಡಿಯೋದಲ್ಲಿ ಯಾರ್ಯಾರು ಇದ್ದಾರೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಡಿಯೋದಲ್ಲಿರುವಂತೆ ಅದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿದ್ದೇವೆ. ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ. ಇದು ಬೇಲೇಬಲ್ ಸೆಕ್ಷನ್ ಇರುವುದರಿಂದ ಮೂರು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆ ಇರತ್ತೆ ಎಂದು ಹೇಳಿದರು.
ಘಟನೆ ಸಂಬಂಧ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಮಾತನಾಡಿ, ಮೊಲಗಳನ್ನು ಮೆರವಣಿಗೆ ಮಾಡುವ ವಿಡಿಯೋ ವೈರಲ್ ಆಗಿದೆ. ಈಗಾಗಲೇ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. ಅಲ್ಲಿ, ಪ್ರಕರಣ ದಾಖಲಾದ ಬಳಿಕ ಮುಂದಿನ ಹಂತದಲ್ಲಿ ತನಿಖೆ ಕೈಗೊಳ್ಳುತ್ತೇವೆ. ಮೊಲಗಳನ್ನು ಮೆರವಣಿಗೆ ಮಾಡುವ ವೇಳೆ ಪೊಲೀಸ್ ಸಿಬ್ಬಂದಿ ಇದ್ದು, ಲೋಪ ಆಗಿದ್ದರೇ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದರು.
ಇನ್ನು, ಘಟನೆ ಸಂಬಂಧ ಮಸ್ಕಿ ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ, ಮೆರವಣಿಗೆಯಲ್ಲಿ ನಮ್ಮ ಪುತ್ರ, ಸಹೋದರ ಭಾಗಿಯಾಗಿದ್ದಾರೆ ಎಂಬುವುದು ಮಾದ್ಯಮಗಳಲ್ಲಿ ಬಂದಿದೆ. ಹಿಂದಿನಿಂದಲೂ ಈ ಪದ್ದತಿ ನಡೆದುಕೊಂಡು ಬರಲಾಗುತ್ತಿದೆ. ಆಯುಧಗಳನ್ನ ಕೆಟ್ಟ ವಿಚಾರಕ್ಕೆ ಬಳಸುವುದಿಲ್ಲ. ಪೂಜೆಗಳಿಗೆ ಬಳಸಲಾಗುತ್ತದೆ. ಪ್ರಾಣಿ ಹಿಂಸೆ, ಮೊಲದ ಬೇಟೆ ಬಗ್ಗೆ ಗೊತ್ತಿಲ್ಲ. ನಮ್ಮ ಕುಟುಂಬದವರು ಪ್ರಾಣಿ ಬೇಟೆಗೆ ಹೋಗಿಲ್ಲ. ಆಚರಣೆ ವೇಳೆ ಪುತ್ರ ಹಾಗೂ ಸಹೋದರನನ್ನ ಎತ್ತಿಕೊಂಡು ಮೆರವಣಿಗೆ ಮಾಡಲಾಗಿದೆ. ಈ ಪದ್ದತಿಯನ್ನು ಈಗಿನ ಕಾನೂನಿನಡಿ, ಸಂವಿಧಾನದ ಪ್ರಕಾರ ಕೈಬಿಡಬೇಕು. ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಬೆಕ್ಕನ್ನು ಸಾಕುತ್ತಿರುವಿರಾದರೆ ಫೆಲೈನ್ ಪ್ಯಾನ್ಲ್ಯೂಕೊಪೇನಿಯಾ ವೈರಸ್ ಬಗ್ಗೆ ಎಚ್ಚರದಿಂದಿರಿ, ಇದು ಮಾರಣಾಂತಿಕ
ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಮಾತನಾಡಿ ಸಾರ್ವಜನಿಕರ ಜೀವನದಲ್ಲಿರುವರು ಹೀಗೆ ಮಾಡಿದ್ದಾರೆ. ಶಾಸಕರ ಪುತ್ರ ಇದನ್ನು ತಿಳಿದು ಮಾಡಿದ್ದಾರೋ ಅಥವಾ ತಿಳಿಯದೇ ಮಾಡಿದ್ದಾರೋ ಗೊತ್ತಿಲ್ಲ. ವನ್ಯ ಜೀವಿಗಳಿಗೆ ಸಂಬಂಧಿಸಿದಂತೆ ರಾಜ್ಯ, ಕೇಂದ್ರ ಸರ್ಕಾರಗಳಿಂದ ಗಣ್ಯ ವ್ಯಕ್ತಿಗಳಿಗೆ ಏನೆಲ್ಲ ಶಿಕ್ಷೆಗಳಾಗಿವೆ ಎಂಬುವುದನ್ನು ಮನಗಂಡಿದ್ದೇವೆ. ಅವರು ಸಾರ್ವಜನಿಕವಾಗಿ ಮಾಡಬಾರದಿತ್ತು. ಜನಸಾಮಾನ್ಯರಿಗೂ ಒಂದೇ ಕಾನೂನು, ರಾಜಕೀಯ ನಾಯಕರಿಗೂ ಒಂದೇ ಕಾನೂನು ಎಂಬುವುದನ್ನು ಯಾರು ಮರೆಯಬಾರದು. ಅರಣ್ಯ ಇಲಾಖೆ ತಮ್ಮ ವ್ಯಾಪ್ತಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:27 pm, Tue, 1 April 25