ಹೆರಿಗೆಗೂ ಮೊದಲೇ ಮೃತಪಟ್ಟ ಹಸುಗೂಸು: ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಪುಟ್ಟ ಜೀವ?
ರಾಯಚೂರಿನ ಸಿಂಧನೂರು ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ನವಜಾತ ಶಿಶು ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಆಸ್ಪತ್ರೆ ಆಡಳಿತ ಮಗುವಿನ ಸ್ಥಿತಿ ಗಂಭೀರವಾಗಿತ್ತು, ಶಕ್ತಿ ಮೀರಿ ಪ್ರಯತ್ನ ಮಾಡಿದರೂ ಜೀವ ಉಳಿಸಲು ಆಗಲಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇಂತಹದೇ ಘಟನೆ ಹಾವೇರಿಯಲ್ಲೂ ವರದಿಯಾಗಿದ್ದು, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣಗಳ ತನಿಖೆಗೆ ಆಗ್ರಹಿಸಲಾಗಿದೆ.

ರಾಯಚೂರು/ಹಾವೇರಿ, ಏಪ್ರಿಲ್ 28: ಹೆರಿಗೆಗೂ ಮೊದಲೇ ಹಸುಗೂಸು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನ ಜಂಗಮರ ಹಳ್ಳಿ ಗ್ರಾಮದ ಗುಂಡಪ್ಟ ಅವರ ಪತ್ನಿ ಪರಮ್ಮಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದರು ಎನ್ನಲಾಗಿದೆ.
ನಿನ್ನೆಯಿಂದ ಸಹಜ ಹೆರಿಗೆ ಆಗಲಿದೆ ಎಂದು ವೈದ್ಯರು ಹೇಳಿದ್ದರಾದರೂ ಅದು ಸಾಧ್ಯವಾಗದೇ ಇದಲ್ಲಿ ಸಿಜರಿಯನ್ ನಡೆಸುವಂತೆ ಪರಮ್ಮ ಕಡೆಯವರು ವೈದ್ಯರಿಗೆ ತಿಳಿಸಿದ್ದರು. ಇಂದು ಮುಂಜಾನೆ ಇಂಜೆಕ್ಷನ್ ನೀಡಿ ಸಹಜ ಹೆರಿಗೆಗೆ ಆಸ್ಪತ್ರೆಯವರು ಯತ್ನಿಸಿದ್ದು, ಅದು ನೆರವೇರದ ಕಾರಣ ಸಿಜರಿಯನ್ ಮಾಡಿ ಹೆರಿಗೆ ಮಾಡಿಸಲಾಗಿತ್ತು. ಆದರೆ ಅದಾಗಲೇ ಮಗು ಮೃತಪಟ್ಟಿತ್ತು ಎನ್ನಲಾಗಿದೆ. ಸಿಂಧನೂರು ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಸ್ಪತ್ರೆ ಆಡಳಿತಾಧಿಕಾರಿಯಿಂದ ಸ್ಪಷ್ಟನೆ
ಇನ್ನು ಮಗು ಮೃತಪಟ್ಟಿರುವ ಬಗ್ಗೆ ಸಿಂಧನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕಾವೇರಿ ಪ್ರತಿಕ್ರಿಯೆ ನೀಡಿದ್ದಾರೆ. ಹೆರಿಗೆಗಾಗಿ ಬೆಳಿಗ್ಗೆ 6 ಗಂಟೆಗೆ ಔಷಧಿ ನೀಡಿದ್ದೆವು. ಆಗ ಮಗು ಸುಸ್ತಾಗಿದೆ ಎಂಬ ಬಗ್ಗೆ ಗೊತ್ತಾಗಿದೆ. ತಂತ್ರಜ್ಞಾನದ ಮೂಲದ ಮಗುವಿನ ಹಾರ್ಟ್ ಬೀಟ್ ಪತ್ತೆ ಮಾಡಿದ್ದು, ಕೂಡಲೇ ಸಿಜರಿಯನ್ಗೆ ಸಿದ್ಧರಾಗಿದ್ದೇವೆ. ಆ ಬಳಿಕ ಮಗುವಿನ ಸ್ಥಿತಿ ಗಂಭೀರವಾಗಿತ್ತು. ನಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿದರೂ ಜೀವ ಉಳಿಸಲು ಆಗಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್
ಆಪರೇಷನ್ ವೇಳೆ ಕೋಮಾಗೆ ಹೋದ ಬಾಲಕ
ಇತ್ತ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿಯೂ ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಹರ್ನಿಯಾ ಆಪರೇಷನ್ ವೇಳೆ 7 ವರ್ಷದ ಚಾಂದ್ಪೀರ್ ಸಾಬ್ ದೊಡ್ಡಮನಿ ಎಂಬ ಬಾಲಕ ಕೋಮಾಗೆ ಹೋಗಿದ್ದು, ಜಿಲ್ಲಾಸ್ಪತ್ರೆ ವೈದ್ಯ, ಸಿಬ್ಬಂದಿ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕೋಮಾಗೆ ಹೋದ ಬಾಲಕನನ್ನ ಖಾಸಗಿ ಆಸ್ಪತ್ರೆಗೆ ವೈದ್ಯರು ರೆಫರ್ ಮಾಡಿದ್ದು, ಬಾಲಕನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣವನ್ನು ಕುಟುಂಬದ ಸದಸ್ಯರು ಖರ್ಚು ಮಾಡಿದ್ದಾರೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಾಂದ್ಪೀರ್ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹರ್ನಿಯಾ ಆಪರೇಷನ್ ಮಾಡಿದ ವೈದ್ಯರ ವಿರುದ್ಧ ದೂರು ದಾಖಲಾಗಬೇಕು. ತನಿಖೆ ನಡೆಸಿ ಬಾಲಕನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸೋದಾಗಿ ಸ್ಥಳೀಯರು ಕೂಡ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:56 pm, Tue, 28 April 26



