AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಕ್ಫ್ ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ವ್ಯಕ್ತಿಯ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ!

ರಾಯಚೂರಿನಲ್ಲಿ ವಕ್ಫ್ ಬೋರ್ಡ್ ಅನುದಾನ ದುರ್ಬಳಕೆ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ ಸನಾವುಲ್ಲಾ ಮೇಲೆ ಸುಮಾರು 30 ಜನರ ಗುಂಪು ಚಾಕು, ಭರ್ಜಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ತಹಶಿಲ್ದಾರ್ ಕಚೇರಿ ಬಳಿ ನಡೆದ ಈ ಘಟನೆಯಲ್ಲಿ ಸನಾವುಲ್ಲಾ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮುಖ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಕ್ಫ್ ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ವ್ಯಕ್ತಿಯ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ!
ರಾಯಚೂರಿನಲ್ಲಿ ಭೀಕರ ಹಲ್ಲೆ
ಭೀಮೇಶ್​​ ಪೂಜಾರ್
| Edited By: |

Updated on: May 21, 2026 | 8:29 AM

Share

ರಾಯಚೂರು, ಮೇ.21: ವಕ್ಫ್ ಬೋರ್ಡ್ ಅನುದಾನ ದುರ್ಬಳಕೆ ಬಗ್ಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎಂಬ ದ್ವೇಷಕ್ಕೆ ದೂರುದಾರ ಹಾಗೂ ಆತನ ಕಡೆಯವರ ಮೇಲೆ ಸುಮಾರು 30 ಜನ ಕಿರಾತಕರು ಸಿನಿಮೀಯ ಶೈಲಿಯಲ್ಲಿ ಚಾಕು, ಭರ್ಜಿ ಹಾಗೂ ಕಲ್ಲುಗಳಿಂದ ಭೀಕರ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ರಾಯಚೂರು ನಗರದ ತಹಶಿಲ್ದಾರ್ ಕಚೇರಿ ಬಳಿಯೇ ನಡೆದಿದೆ.

ರಾಯಚೂರು ತಾಲೂಕಿನ ತಲಮಾರಿ ಗ್ರಾಮದ ಮಸೀದಿ, ಖಬರಸ್ತಾನ ಹಾಗೂ ಈದ್ಗಾ ಮೈದಾನದ ಅಭಿವೃದ್ಧಿಗಾಗಿ 2017-19ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಬ್ ಹಾಗೂ ವಕ್ಫ್ ಮಂಡಳಿಯಿಂದ ಒಟ್ಟು 26 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಯಲ್ಲಿ ಭಾರಿ ಅನುದಾನ ದುರ್ಬಳಕೆಯಾಗಿದೆ ಎಂದು ಆರೋಪಿಸಿ ತಲಮಾರಿ ಗ್ರಾಮದ ಸನಾವುಲ್ಲಾ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇತ್ತೀಚೆಗಷ್ಟೇ ಲೋಕಾಯುಕ್ತ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿತ್ತು.

ತನಿಖೆ ನಡೆಸಿದ ಬೆನ್ನಲೇ, ಲೋಕಾಯುಕ್ತ ತನಿಖೆಯಿಂದ ತೀವ್ರ ಆಕ್ರೋಶಗೊಂಡಿದ್ದ ಎದುರಾಳಿಗಳು, ಪ್ರಕರಣವನ್ನು ಕಾಂಪ್ರಮೈಸ್ (ರಾಜಿ) ಮಾಡಿಕೊಳ್ಳುವ ನೆಪದಲ್ಲಿ ದೂರುದಾರ ಸನಾವುಲ್ಲಾನನ್ನು ರಾಯಚೂರಿನ ತಹಶಿಲ್ದಾರ್ ಕಚೇರಿ ಬಳಿ ಕರೆಸಿಕೊಂಡಿದ್ದಾರೆ. ಮಾತುಕತೆ ನಡೆಸುವಾಗಲೇ ಏಕಾಏಕಿ ಸಂಚು ರೂಪಿಸಿ ಬಂದಿದ್ದ ಸುಮಾರು 30 ಜನರ ಗುಂಪು ಚಾಕು, ಭರ್ಜಿ ಹಾಗೂ ಮಾರಕಾಸ್ತ್ರಗಳಿಂದ ಸನಾವುಲ್ಲಾ ಮತ್ತು ಆತನ ಸ್ನೇಹಿತರ ಮೇಲೆ ಮನಸ್ಸೋಇಚ್ಛೆ ದಾಳಿ ಮಾಡಿದ್ದಾರೆ. ನಡುರಸ್ತೆಯಲ್ಲೇ ನಡೆದ ಈ ರಕ್ತಪಾತದಿಂದಾಗಿ ಸನಾವುಲ್ಲಾ ಮೈತುಂಬಾ ಗಂಭೀರ ಗಾಯಗಳಾಗಿದ್ದು, ಬರೋಬ್ಬರಿ 24 ಸ್ಟಿಚ್‌ಗಳನ್ನು (ಹೊಲಿಗೆ) ಹಾಕಿದ್ದಾರೆ.

ಇದನ್ನೂ ಓದಿ: ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ

ಪ್ರಸ್ತುತ ಗಾಯಾಳು ಸನಾವುಲ್ಲಾಗೆ ರಾಯಚೂರಿನ ಓಪೆಕ್ (OPEC) ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಅಶುಪಟೇಲ್, ನಿಜಾಮ್ ಪಟೇಲ್, ಇರ್ಫಾನ್ ಸೇರಿದಂತೆ 15ಕ್ಕೂ ಹೆಚ್ಚು ಜನರ ವಿರುದ್ಧ ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಇತ್ತ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಕಡೆಯವರೂ ಸಹ ಗಾಯಾಳು ಸನಾವುಲ್ಲಾ ಮತ್ತು ಆತನ ಕಡೆಯವರ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Bhemesh Poojar
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More