AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಜನರಿಗೆ ಗಾಯ‌, ಐಟಿ ಪಾರ್ಕ್​ನ ಶೌಚಾಲಯದಲ್ಲಿ ಸೆಕ್ಯೂರಿಟಿ ಗಾರ್ಡ್​​​ ಮೃತದೇಹ ಪತ್ತೆ

ಯಾದಗಿರಿಯ ಶಹಾಪುರ‌ ತಾಲೂಕಿನ ದೋರನಹಳ್ಳಿಯಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಜನರಿಗೆ ಗಾಯ‌ವಾದ ಘಟನೆ ನಡೆದಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯವಾಗಿದೆ.

ಅಡುಗೆ ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಜನರಿಗೆ ಗಾಯ‌, ಐಟಿ ಪಾರ್ಕ್​ನ ಶೌಚಾಲಯದಲ್ಲಿ ಸೆಕ್ಯೂರಿಟಿ ಗಾರ್ಡ್​​​ ಮೃತದೇಹ ಪತ್ತೆ
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat|

Updated on: Feb 25, 2022 | 5:54 PM

Share

ರಾಮನಗರ: ಚೆನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಬಳಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ನಂತರ ಟಿಟಿಗೆ ಬಡಿದು ಬಸ್ ಮರಕ್ಕೆ ಡಿಕ್ಕಿಯಾಗಿದೆ. ಬಸ್​ ಡಿಕ್ಕಿ ರಭಸಕ್ಕೆ ಟೆಂಪೊಟ್ರಾವೆಲರ್ ಉರುಳಿಬಿದ್ದಿದೆ. ಅದೃಷ್ಟವಶಾತ್​ ಟಿಟಿ, ಬಸ್​ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕೆಎಸ್​ಆರ್​ಟಿಸಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಶಿವರಾತ್ರಿ ಹಿನ್ನೆಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ಸಾಗಿದ್ದಾರೆ. ಈ ಮಧ್ಯೆ, ನದಿಯನ್ನು ದಾಟುವ ವೇಳೆ ನೀರಿನ ರಭಸಕ್ಕೆ ಭಕ್ತಾಧಿಗಳು ಕೊಚ್ಚಿ ಹೋಗಿದ್ದಾರೆ. ಸ್ಥಳದಲ್ಲಿ‌ ಇದ್ದವರಿಂದ ಕೆಲವರ ರಕ್ಷಣೆ ಮಾಡಲಾಗಿದೆ. ರಾಮನಗರ ಜಿಲ್ಲೆ ಕನಕಪುರ‌ ತಾಲೂಕಿನ ಬೊಮ್ಮಸಂದ್ರ ಬಳಿ ಘಟನೆ ನಡೆದಿದೆ. ಕಾವೇರಿ‌ ನದಿ ದಾಟಿ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಭಕ್ತರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ದೆಯ ಶವ ಪತ್ತೆ ಆಗಿದೆ. ನದಿ ದಾಟುವ ವೇಳೆ ಅವಘಡ ಸಂಭವಿಸಿದೆ.

ಇತರ ಅಪರಾಧ ಸುದ್ದಿಗಳು

ಬೆಳಗಾವಿ ಕಿಲ್ಲಾ ರಸ್ತೆಯ ಮಾಡರ್ನ್ ಗಾದಿ ಕಾರ್ಖಾನೆ ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಘಟನೆ ನಡೆದಿದೆ. ಮನ್ಸೂರ್ ಎಂಬುವರ ಗಾದಿ ಕಾರ್ಖಾನೆ ಬೆಂಕಿಗಾಹುತಿ ಆಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗದಗದ ರೋಣ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿಗೆ ಲಾರಿ ಹಾಗೂ ಅಪಾರ ಪ್ರಮಾಣದ ಗೋವಿನಜೋಳ ಆಹುತಿಯಾದ ಘಟನೆ ನಡೆದಿದೆ. ಜಮೀನಿನಲ್ಲಿ ರಾಶಿ ಮಾಡಿ ಮಾರಾಟಕ್ಕೆ ಲಾರಿಯಲ್ಲಿ ಲೋಡ್‌ ಮಾಡಿದ್ದ ರೈತ ಶಿವನಗೌಡ ಪಾಟೀಲ್ ಅವರ ಲಾರಿ ಹಾಗೂ ಗೋವಿನಜೋಳ ಆಹುತಿ ಆಗಿದೆ.

ಯಾದಗಿರಿಯ ಶಹಾಪುರ‌ ತಾಲೂಕಿನ ದೋರನಹಳ್ಳಿಯಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಜನರಿಗೆ ಗಾಯ‌ವಾದ ಘಟನೆ ನಡೆದಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೀಮಂತ‌ ಕಾರ್ಯಕ್ರಮಕ್ಕೆ ಅಡುಗೆ ಮಾಡುವಾಗ ಸ್ಫೋಟಗೊಂಡು ಅವಘಡ ಸಂಭವಿಸಿದೆ.

ನೆಲಮಂಗಲದಲ್ಲಿ ಸಾಲ ನೀಡಿದ್ದವರಿಂದ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಅವಮಾನ ತಾಳತಾರದೆ ಪತ್ನಿ ಮನೆಯಲ್ಲಿ ನೇಣಿಗೆ ಶರಣಾದ ಪ್ರಕರಣ ನಡೆದಿದೆ. ಸಾಲ ವಾಪಸ್​ ನೀಡಲು ಕಿರುಕುಳ ಕೊಟ್ಟ ಚನ್ನಕೇಶವ, ಪತ್ನಿ ಶಶಿ ಎಂಬವರನ್ನು ನೆಲಮಂಗಲ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ಐಟಿ ಪಾರ್ಕ್​ನ ಶೌಚಾಲಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಸೆಕ್ಯೂರಿಟಿ ಗಾರ್ಡ್​​​ ಚನ್ನಮಲ್ಲಯ್ಯ ಹಿರೇಮಠ ಎಂಬುವರ ಮೃತದೇಹ ಪತ್ತೆ ಆಗಿದೆ. ಉಪನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಳಗಾವಿ ನಗರದಲ್ಲಿ ಗಾಂಜಾ ಹಾವಳಿ ತಡೆಯಲು ಪೊಲೀಸರು ವಿಫಲರಾಗಿದ್ದಾರೆ ಎಂದು ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಶಾಲೆಗೆ ಹೋಗುವ ಮಕ್ಕಳು ಗಾಂಜಾ ಸೇವನೆ ಮಾಡ್ತಿದ್ದಾರೆ. ಗಾಂಜಾ ಪೂರೈಸುವವರನ್ನ ಬಂಧಿಸಿ ಕ್ರಮ ಕೈಗೊಳ್ಳಲು ಶಾಸಕ ಮನವಿ ಮಾಡಿದ್ದಾರೆ. ಗಾಂಜಾ ಮಾರಾಟ ಮಾಡುವವರ ಬಂಧನಕ್ಕೆ ವಿಶೇಷ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: Shivamogga: ಹರ್ಷ ಹತ್ಯೆ ಪ್ರಕರಣ: ಕೊಲೆಗೆ ಬಳಸಿದ್ದ ಕಾರು ಜಪ್ತಿ ಮಾಡಿದ ಪೊಲೀಸರು

ಇದನ್ನೂ ಓದಿ: ಹರ್ಷ ಕೊಲೆ ನಡೆಯುವ ಕೆಲ ಗಂಟೆ ಮೊದಲು ಹತ್ಯೆಗೆ ಸ್ಕೆಚ್; ಮಹತ್ವದ ವಿಚಾರಗಳು ಬಹಿರಂಗ