ಸುದ್ದಿಗಳನ್ನು ವೈಭವೀಕರಣ ಮಾಡಬೇಡಿ: ಡಿಕೆ ಶಿವಕುಮಾರ್

ಟಿವಿ ಮತ್ತು ಯೂಟೂಬ್ ಚಾನೆಲ್ ಗಳು ಹೆಚ್ಚಾಗಿದ್ದು, ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾಮಾಣಿಕವಾಗಿರುವ ಮಾಧ್ಯಮಗಳಿಗೆ ಸಮಾಜ ಗೌರವ ನೀಡುತ್ತದೆ. ಹೀಗಾಗಿ ನೀವು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದರು.

ಸುದ್ದಿಗಳನ್ನು ವೈಭವೀಕರಣ ಮಾಡಬೇಡಿ: ಡಿಕೆ ಶಿವಕುಮಾರ್
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ರಾಮನಗರ
Follow us
|

Updated on: Aug 31, 2024 | 8:31 AM

ಬೆಂಗಳೂರು: ಸುದ್ದಿಗಳ ವೈಭವೀಕರಣ ಮಾಡಬೇಡಿ. ವಾಸ್ತವ ಸಂಗತಿಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ರಾಮನಗರ ಜಿಲ್ಲಾ ಘಟಕವು ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗ ಸಮಾಜದ ವೇಗ ಮಾಧ್ಯಮಕ್ಕಿಂತಲೂ ಹೆಚ್ಚಾಗಿದೆ. ಸಿಟಿಜನ್ ಜರ್ನಲಿಸಂ ಎಂಬ ಪರಿಕಲ್ಪನೆ ಆರಂಭವಾಗಿದ್ದು, ಹಳ್ಳಿಯಲ್ಲಿರುವ ಹುಡುಗ ತಮ್ಮ ವಿಚಾರವನ್ನು ತಾನೇ ವಿಡಿಯೋ ಮಾಡಿ ಪೋಸ್ಟ್ ಮಾಡುವ ವ್ಯವಸ್ಥೆ ಸೃಷ್ಟಿಯಾಗಿದೆ. ಹಾಗಾಗಿ ಮಾಧ್ಯಮಗಳಲ್ಲಿ ಸ್ಪರ್ಧೆ ಹೆಚ್ಚಾಗಿದೆ ಎಂದರು.

ಟಿವಿ ಮತ್ತು ಯೂಟೂಬ್ ಚಾನೆಲ್ ಗಳು ಹೆಚ್ಚಾಗಿದ್ದು, ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾಮಾಣಿಕವಾಗಿರುವ ಮಾಧ್ಯಮಗಳಿಗೆ ಸಮಾಜ ಗೌರವ ನೀಡುತ್ತದೆ. ಹೀಗಾಗಿ ನೀವು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.

ತುಂಗಾಭದ್ರ ಅಣೆಕಟ್ಟೆ ಕ್ರಸ್ಟ್ ಗೇಟ್ ಮುರಿದಾಗ ವಿರೋಧ ಪಕ್ಷಗಳ ನಾಯಕರು ನಮ್ಮ ವಿರುದ್ಧ ಮುಗಿಬಿದ್ದರು. ನನ್ನಿಂದಲೇ ಗೇಟ್ ಮುರಿದಿರುವಂತೆ ಮಾತನಾಡಿದರು. ನಾನು ಆಗ ಅವರಿಗೆ ಉತ್ತರ ನೀಡಲಿಲ್ಲ. ಐದು ದಿನಗಳಲ್ಲೇ ಗೇಟ್ ದುರಸ್ತಿ ಮಾಡಿಸಿದೆವು. ಆಗ ನಾನು ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದು ಉತ್ತರ ಕೊಟ್ಟಿದ್ದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಆಣೆಕಟ್ಟು ತುಂಬಲಿದೆ ಎಂದರು.

ಇದನ್ನೂ ಓದಿ: KUWJ ಹೋರಾಟದ ಫಲ: ನನಸಾದ ಪತ್ರಕರ್ತರ ಬಸ್ ಪಾಸ್ ಯೋಜನೆ, ಸಿಎಂಗೆ ಧನ್ಯವಾದ ತಿಳಿಸಿದ ಶಿವಾನಂದ ತಗಡೂರು

ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಇಂದಿರಾ ಗಾಂಧಿ ಅವರು ಹೇಳಿದ್ದಾರೆ. ಅದೇ ರೀತಿ ಮಾಧ್ಯಮಗಳು ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಂಶಗಳನ್ನು ಶೋಧಿಸಬೇಕು. ಈಗ ಮಾಧ್ಯಮಗಳು ಹೆಚ್ಚಾಗಿ ಅವರು ಹೀಗೆ ಹೇಳಿದರು, ಇವರು ಹೀಗೆ ಹೇಳಿದ್ದಾರೆ ಎಂದು ಪ್ರಶ್ನೆ ಮಾಡುವಿರಿಯೇ ಹೊರತು, ಅವರು ಹೇಳಿರುವುದರಲ್ಲಿ ಸತ್ಯಾಸತ್ಯತೆ ಇದೆಯೋ ಇಲ್ಲವೋ ಎಂದು ಪರಿಶೀಲಿಸುವುದಿಲ್ಲ. ಮಾಧ್ಯಮದವರು ಹೇಳಿದರು ಎಂದು ನಾವು ಪರಿಶೀಲನೆ ಮಾಡದೇ ಉತ್ತರ ಕೊಟ್ಟರೆ ನಮ್ಮ ಮರ್ಯಾದೆಯೂ ಹೋಗುತ್ತದೆ. ಹೀಗಾಗಿ ವಾಸ್ತವಾಂಶಗಳನ್ನು ಪರಿಶೀಲಿಸಿ ನಂತರ ಸುದ್ದಿ ಪ್ರಕಟಿಸಿ ಎಂದರು. ಮಾಧ್ಯಮಗಳಲ್ಲಿ ಅಪರಾಧ ಹಾಗೂ ಸಿನಿಮಾ ಸುದ್ದಿಗಳೇ ವೈಭವೀಕೃತ ಆಗುತ್ತಿವೆ. ಹೀಗಾಗಿ ಅವುಗಳನ್ನೇ ಹೆಚ್ಚಾಗಿ ತೋರಿಸುತ್ತೇವೆ ಎಂದು ನನ್ನ ಅನೇಕ ಮಾಧ್ಯಮ ಸ್ನೇಹಿತರೇ ಹೇಳಿದ್ದಾರೆ.

ನೀವು ನಿಮ್ಮ ಆತ್ಮಬಲ ಕಳೆದುಕೊಳ್ಳಬೇಡಿ. ಮನುಷ್ಯ ಹುಟ್ಟಿದ ನಂತರ ಬದುಕುತ್ತಾನೆ. ಆದರೆ ಸಾಯುವ ಮುನ್ನ ಏನು ಸಾಧನೆ ಮಾಡಿದೆ, ಯಾವ ಆದರ್ಶ ಇಟ್ಟುಕೊಂಡು ಬದುಕಿದೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದರು.

ಸಾಧಿಸುತ್ತೇನೆ ಎಂಬ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ, ಸೋಲು ನಮ್ಮನ್ನು ಕಾಡುವುದಿಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದಕ್ಕೆ ಪೂರಕವಾಗಿ ಶ್ರಮ ಇರಬೇಕು. ಮಾಧ್ಯಮಗಳ ಎಷ್ಟೋ ಲೇಖನಗಳು ಸರ್ಕಾರಗಳನ್ನು ಪರಿವರ್ತನೆ ಮಾಡಿವೆ. ಜೆ.ಹೆಚ್ ಪಟೇಲ್ ಅವರ ಕಾಲದಲ್ಲಿ ಬೆಂಗಳೂರಿಗರಿಗೆ ನೀರು ಪೂರೈಸುವ ಸಂಸ್ಥೆಯನ್ನು ಖಾಸಗೀಕರಣ ಮಾಡಬೇಕು ಎಂಬ ವಿಚಾರದಲ್ಲಿ ಎಂ ಸಿ ನಾಣಯ್ಯನವರು ಭಾಷಣ ಮಾಡಿದ್ದರು. ನಿಮ್ಮ ಬರವಣಿಗೆ ವಿಚಾರಧಾರೆ, ಸರ್ಕಾರ ಹಾಗೂ ಸಮಾಜಕ್ಕೆ ಆಧಾರ ಸ್ತಂಭವಾಗಬೇಕು ಎಂದರು.

ಈ ಜಿಲ್ಲೆಯಿಂದ ಮೂವರು ಸಿಎಂಗಳಾಗಿದ್ದರು. ಕೆಂಗಲ್ ಹನುಮಂತಯ್ಯ, ದೇವೇಗೌಡರು ಹಾಗೂ ಕುಮಾರಸ್ವಾಮಿ ಎಂದು ನಿಮ್ಮ ಸಂಘದ ರಾಜ್ಯಾಧ್ಯಕ್ಷರು ಹೇಳಿದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರೂ ಕನಕಪುರದಿಂದ ವಿಧಾನಸಭೆಗೆ ಹೋಗಿದ್ದರು. ಅವರೆಲ್ಲ ಯಾವ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ ಎಂಬುದನ್ನೂ ನೀವು ಹೇಳಬೇಕು. ಕೆಂಗಲ್ ಹನುಮಂತಯ್ಯ ಅವರು ವಿಧಾನ ಸೌಧ ಕಟ್ಟಿಸಿದ್ದಾರೆ. ಅದೇ ರೀತಿ ಬೇರೆಯವರ ಸಾಧನೆ ಏನು ಎಂದು ಹೇಳಬೇಕು ಎಂದು ಹೇಳಿದರು. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವುದಿಲ್ಲ. ಈಗ ಅವರು ನಮ್ಮ ಜಿಲ್ಲೆ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ, ಈಗ ಆ ವಿಚಾರಕ್ಕೆ ತಲೆಕೆಡಿಸಿಕೊಳ್ಳುವುದು ಬೇಡ. ಚರ್ಚೆ ಮಾಡುವುದೂ ಬೇಡ. ಅವರು ಕಾರ್ಖಾನೆ ಮಾಡುತ್ತಾರಂತೆ ಮಾಡಲಿ, ನಾವು ಅದಕ್ಕಾಗಿ ಕಾಯುತ್ತಾ ಕೂತಿರೋಣ. ನಮ್ಮ ಹುಡುಗರನ್ನು ಕೆಲಸಕ್ಕೆಂದು ಅಲ್ಲಿಗೆ ಕಳುಹಿಸೋಣ. ನಮ್ಮ ಸರ್ಕಾರದಿಂದ ಅವರಿಗೆ ಯಾವ ಸಹಕಾರ ಬೇಕೋ ಕೊಡೋಣ ಎಂದರು.

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ಹೇಳುತ್ತಿರುತ್ತೇನೆ. ನನ್ನ ಪ್ರಕರಣದ ತೀರ್ಪಿನ ಬಳಿಕ ನನ್ನ ದೈವಶಕ್ತಿ ದರ್ಶನಕ್ಕೆ ಹೋದಾಗ ನನ್ನ ಶಾಸಕ ಮಿತ್ರರಿಗೆ ಈ ಮಾತನ್ನು ಹೇಳಿದ್ದೆ. ನನ್ನ ಪ್ರಕರಣದ ತೀರ್ಪಿಗೆ ಕೆಲವರು ಆತಂಕಕ್ಕೆ ಒಳಗಾಗಿದ್ದರು. ನನ್ನ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕಾ ಅಥವಾ ಲೋಕಾಯುಕ್ತ ತನಿಖೆ ಮಾಡಬೇಕಾ ಎಂಬುದಷ್ಟೇ ವಿಚಾರ. ಯಾರೇ ತನಿಖೆ ಮಾಡಲಿ. ನಾನು ತಪ್ಪು ಮಾಡಿಲ್ಲ. ನಾನು ಸರಿಯಾಗಿದ್ದು, ಕೊಡುವ ಲೆಕ್ಕ ಸರಿಯಿದ್ದರೆ ಅಷ್ಟೇ ಸಾಕು. ವಿವಿಧ ಹಂತದ ನ್ಯಾಯಾಲಯಗಳಿವೆ. ಎಲ್ಲಾದರೂ ಒಂದು ಕಡೆ ನ್ಯಾಯ ಸಿಗುತ್ತದೆ ಎಂದರು.

ರಾಮನಗರ ಸಂಘಕ್ಕೆ ನಿವೇಶನ

ತಮ್ಮ ಸಮಸ್ಯೆಗಳ ವಿಚಾರವಾಗಿ ಮನವಿ ಪತ್ರ ನೀಡಿದ್ದೀರಿ. ನಿಮ್ಮ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ಅವರು ಈ ಬಗ್ಗೆ ಗಮನ ಸೆಳೆದಿದ್ದಾರೆ. ಅದಕ್ಕಾಗಿ ಸ್ಥಳದಲ್ಲಿಯೇ ನಿವೇಶನ ಮಂಜೂರಿಗೆ ಆದೇಶಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೇನೆ. ಬೇಗನೇ ಪತ್ರಿಕಾ ಭವನ ನಿರ್ಮಾಣ ಮಾಡಿ. ಭವನಕ್ಕೂ ಪ್ರತ್ಯೇಕವಾಗಿ 25 ಲಕ್ಷ ರೂ ಹಣ ಕೊಡಿಸುತ್ತೇನೆ. ಈಗಾಗಲೇ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 10 ಲಕ್ಷ ರೂ ೋಷಣೆ ಮಾಡಿದ್ದು ಅದನ್ನು ಕೊಡುತ್ತೇನೆ ಎಂದರು.

ಪತ್ರಕರ್ತರ ಹಕ್ಕೋತ್ತಾಯ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರನಾಳಿಕೆಯಲ್ಲಿ 500 ಕೋಟಿ ಮೀಸಲಿಡುವುದಾಗಿ ೋಷಿಸಿತ್ತು. ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಸೇರಿದಂತೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಆದ್ಯತೆ ಮೇಲೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಂಘದ ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಂ, ಸೋಮಶೇಖರ ಕೆರಗೋಡು, ಜಿಲ್ಲಾ ಸಂಘದ ಅಧ್ಯಕ್ಷ ಸೂರ್ಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಿವರಾಜ ಮತ್ತಿತರರು ಹಾಜರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ