ಕರ್ನಾಟಕದಲ್ಲಿ ಬರೋಬ್ಬರಿ 35.84 ಲಕ್ಷ ಪ್ರಕರಣಗಳು ಇತ್ಯರ್ಥ
ಕರ್ನಾಟಕದಲ್ಲಿ ಜುಲೈ 12 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 35.84 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟು 2878 ಕೋಟಿ ರೂಪಾಯಿಗಳ ಪರಿಹಾರ ಮೊತ್ತ ನೀಡಲಾಗಿದೆ. ವೈವಾಹಿಕ, ಅಪಘಾತ, ಚೆಕ್ ಬೌನ್ಸ್ ಸೇರಿದಂತೆ ಹಲವು ಪ್ರಕರಣಗಳು ಇತ್ಯರ್ಥಗೊಂಡಿವೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು ಈ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಜುಲೈ 15: ರಾಜ್ಯಾದ್ಯಂತ ಶನಿವಾರ (ಜು.12) ದಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ (Rashtriya Lok Adalat) ಮೂಲಕ 35.84 ಲಕ್ಷ ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಬಾಕಿ ಇದ್ದ 3,11,177 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ. 55.56 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರು.
ಒಟ್ಟು 2,878 ಕೋಟಿ ರೂ. ಪರಿಹಾರ ಮೊತ್ತದೊಂದಿಗೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 1,756 ವೈವಾಹಿಕ ಪ್ರಕರಣಗಳು ಇತ್ಯರ್ಥಗೊಂಡಿವೆ. ಸಂಧಾನದ ಮೂಲಕ 331 ದಂಪತಿಗಳನ್ನ ಒಟ್ಟುಗೂಡಿಸಲಾಗಿದೆ. 4015 ವಿಭಾಗ ದಾವೆ ರಾಜಿಸಂಧಾನದ ಮೂಲಕ ಇತ್ಯರ್ಥವಾದವು. 4961 ಅಪಘಾತ ಪ್ರಕರಣಗಳಲ್ಲಿ 290 ಕೋಟಿ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
13542 ಚೆಕ್ ಬೌನ್ಸ್ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. 4430 ಅಮಲ್ಜಾರಿ ಕೇಸ್, 375 ಗ್ರಾಹಕರ ವ್ಯಾಜ್ಯಗಳು ಇತ್ಯರ್ಥಗೊಂಡವು. 5 ವರ್ಷಕ್ಕೂ ಹಳೆಯ 2377 ಕೇಸ್, 10 ವರ್ಷ ಹಳೆಯ 275, 15 ವರ್ಷ ಹಳೆಯ 37 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯದಲ್ಲಿ 68 ದಿನಗಳಲ್ಲಿ ನಡೆಯುವ ಪ್ರಕರಣಗಳನ್ನು ಒಂದೇ ದಿನದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಲೋಕ ಅದಾಲತ್ ಎಂದರೇನು?
ರಾಷ್ಟ್ರೀಯ ಲೋಕ ಅದಾಲತ್ ಎಂದರೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆಯೋಜಿಸುವ ಒಂದು ವಿಧದ ನ್ಯಾಯಾಲಯ. ಇದು ಒಂದು ನಿರ್ದಿಷ್ಟ ದಿನಾಂಕದಂದು ರಾಷ್ಟ್ರವ್ಯಾಪಿ ಎಲ್ಲಾ ನ್ಯಾಯಾಲಯಗಳಲ್ಲಿ ಏಕಕಾಲದಲ್ಲಿ ನಡೆಯುತ್ತದೆ.
ರಾಷ್ಟ್ರೀಯ ಲೋಕ ಅದಾಲತ್ಗಳ ಮುಖ್ಯ ಉದ್ದೇಶವೆಂದರೆ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಇತ್ಯರ್ಥಪಡಿಸುವುದು. ಇದರಿಂದ ಜನರು ಸಮಯ ಮತ್ತು ಹಣವನ್ನು ಉಳಿಸಬಹುದು.
ಇದನ್ನೂ ಓದಿ: ಲೋಕ ಅದಾಲತ್ ಮೂಲಕ ಒಂದೇ ದಿನ 25 ಲಕ್ಷ ಪ್ರಕರಣಗಳ ಇತ್ಯರ್ಥ
ರಾಷ್ಟ್ರೀಯ ಲೋಕ ಅದಾಲತ್ಗಳಲ್ಲಿ, ಮೋಟಾರು ವಾಹನ ಅಪಘಾತ, ಜೀವನಾಂಶ, ಆಸ್ತಿ ವಿಭಾಗದ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿನ ಪ್ರಕರಣಗಳು ಮುಂತಾದವುಗಳನ್ನು ಇತ್ಯರ್ಥಪಡಿಸಲಾಗುತ್ತದೆ.
ನೀವು ನಿಮ್ಮ ಹತ್ತಿರದ ತಾಲೂಕು ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ, ರಾಷ್ಟ್ರೀಯ ಲೋಕ ಅದಾಲತ್ಗಳಲ್ಲಿ ನಿಮ್ಮ ಪ್ರಕರಣವನ್ನು ಇತ್ಯರ್ಥಪಡಿಸಲು ಸಹಾಯ ಪಡೆಯಬಹುದು.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Tue, 15 July 25




