Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯರ ಸಾಧನೆ; ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಗೆ ಜೀವದಾನ

ಪ್ರಪಂಚದಲ್ಲೇ ಅತಿ ವಿರಳವಾದ, ಅಪರೂಪದಲ್ಲಿ ಅಪರೂಪದ ‘ಬಾಂಬೆ ಬ್ಲಡ್ ಗ್ರೂಪ್, ಇದೇ ಬ್ಲಡ್ ಗ್ರೂಪ್ ಹೊಂದಿರುವ ಗರ್ಭೀಣಿಯು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಳು. ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಶಿವಮೊಗ್ಗ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ವೈದ್ಯರು ಗರ್ಭೀಣಿಗೆ ಮರು ಜೀವ ಕೊಟ್ಟಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಇಂತಹ ಒಂದು ಚಿಕಿತ್ಸೆ ನೀಡಿದ್ದು ವಿಶೇಷವಾಗಿದೆ.

ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯರ ಸಾಧನೆ; ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಗೆ ಜೀವದಾನ
ಶಿವಮೊಗ್ಗ ಮೆಗ್ಗಾನ್​ ಜಿಲ್ಲಾಸ್ಪತ್ರೆಯ ವೈದ್ಯರ ಸಾಧನೆ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 19, 2023 | 6:08 PM

ಶಿವಮೊಗ್ಗ, ನ.19: ಬಡವರಿಗೆ ಉಚಿತ ಚಿಕಿತ್ಸೆ ಅಂದರೆ ಅದು ಮಲೆನಾಡಿನ ಮೆಗ್ಗಾನ್ ಜಿಲ್ಲಾಸ್ಪತ್ರೆ(Megan Hospital)ಯ ಆಗಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾವೇರಿ, ಉತ್ತರ ಕನ್ನಡ ಸೇರಿ ಐದಾರು ಜಿಲ್ಲೆಗಳ ರೋಗಿಗಳಿಗೆ ಸರಕಾರಿ ಹೈಟೆಕ್ ಆಸ್ಪತ್ರೆ ಅಂದ್ರೆ ಅದು ಶಿವಮೊಗ್ಗ (Shivamogga) ದ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆ ಆಗಿದೆ. ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯರು ಅಪರೂಪದ ಪ್ರಕರಣದಲ್ಲಿ ಗರ್ಭೀಣಿ ಮಹಿಳೆಗೆ ಮರುಜೀವ ಕೊಡುವ ಮೂಲಕ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಟಕ್ಕರ್ ಕೊಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಹಳೆ ಜೋಗದ ವೀರಭದ್ರಪ್ಪನವರ ಪತ್ನಿ 31 ವರ್ಷದ ಬೇಬಿ ಎಂಬುವವರು ನ.12 ರಂದು ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸೆ ವಿಭಾಗಕ್ಕೆ ಹೊಟ್ಟೆ ನೋವಿಗಾಗಿ ಬಂದು ತೋರಿಸಿದ್ದರು. ಮಹಿಳೆಯ ಪರೀಕ್ಷೆ ನಡೆಸಿದಾಗ ಒಂದೂವರೆ ತಿಂಗಳ ಗರ್ಭಿಣಿಯಾಗಿರುವುದು ಕಂಡು ಬಂದಿತ್ತು. ಕೂಲಂಕಷವಾಗಿ ತಪಾಸಣೆ ನಡೆಸಿದ ವೈದ್ಯರು ಗರ್ಭಕೋಶದ ಬದಲು ಗರ್ಭನಾಳದಲ್ಲಿ ಗರ್ಭ ಧರಿಸಿರುವುದು ಅಂದರೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಆಗಿರುವುದು ಪತ್ತೆಯಾಗಿತ್ತು.

ಗರ್ಭೀಣಿಯು ಜಿಲ್ಲಾಸ್ಪತ್ರೆಗೆ ಬಂದಾಗ ತೀವ್ರ ತರಹದ ಆಘಾತಕ್ಕೊಳಗಾಗಿದ್ದರು. ಗರ್ಭೀಣಿಯ ರಕ್ತ ತಪಾಸಣೆ ಮತ್ತು ಇತರೆ ಪರೀಕ್ಷೆಗಳನ್ನು ನಡೆಸಿದಾಗ ಹಿಮೋಗ್ಲೊಬಿನ್ ಪ್ರಮಾಣ 2.5 ಗ್ರಾಂ ಮತ್ತು ಬಿಪಿ 80/50 ಇದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಾ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಸ್ಕ್ಯಾನಿಂಗ್‍ನಲ್ಲಿ ಗರ್ಭನಾಳದಲ್ಲಿ ಧರಿಸಿರುವ ಗರ್ಭವು ತುಂಡಾಗಿರುವುದು(ರಪ್ಚರಡ್ ಎಕ್ಟೋಪಿಕ್) ವೈದ್ಯರಿಗೆ ಕಂಡು ಬಂದಿತ್ತು. ಗರ್ಭಿಣಿಯನ್ನು ಪ್ರಸೂತಿ ಐಸಿಯು ವಿಭಾಗಕ್ಕೆ ಸ್ಥಳಾಂತರಿಸಿ ಅವರ ರಕ್ತ ಪರೀಕ್ಷಿಸಿದಾಗ ಪ್ರಪಂಚದಲ್ಲೇ ಅತಿ ವಿರಳವಾದ, ಅಪರೂಪದ ‘ಬಾಂಬೆ ಬ್ಲಡ್ ಗ್ರೂಪ್’ ಅವರಿಗೆ ಇರುವುದು ಖಚಿತಗೊಂಡಿರುತ್ತದೆ.

ಇದನ್ನೂ ಓದಿ:Shivamogga News: ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಳರೋಗಿ ಆಸ್ಪತ್ರೆ ಆವರಣದಲ್ಲಿ ಸಾವು

ಆಕೆಗೆ ಅತಿ ಅವಶ್ಯಕವಾಗಿ 4 ರಿಂದ 5 ಯುನಿಟ್‍ಗಳಷ್ಟು ರಕ್ತದ ಅವಶ್ಯಕತೆಯತ್ತು. ರಕ್ತ ಇಲ್ಲವಾದಲ್ಲಿ ಗರ್ಭೀಣಿಯು ಜೀವಕ್ಕೆ ಅಪಾಯವಿತ್ತು. ಆ ಸಮಯದಲ್ಲಿ ವೈದ್ಯರುಗಳ ಸಮಯ ಪ್ರಜ್ಞೆಯಿಂದ ಡಾ.ಲೇಪಾಕ್ಷಿ ಬಿ.ಜಿ ಮತ್ತು ಡಾ.ಅಶ್ವಿನಿ ವೀರೇಶ್ ತಂಡದ ಸತತ ಪ್ರಯತ್ನ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಿದ್ದನಗೌಡ ಪಿ ಇವರ ಮಾರ್ಗದರ್ಶನದಲ್ಲಿ ಈ ಅತೀ ವಿರಳ ರಕ್ತದ ಗುಂಪಿನ ದಾನಿಗಳನ್ನು ಸತತ 6 ಗಂಟೆಗಳ ಪ್ರಯತ್ನದಿಂದ ಹುಡುಕಿ, ರಕ್ತ ಸಂಗ್ರಹಿಸಿ ಗರ್ಭಿಣಿ ಸ್ತ್ರೀಗೆ ನೀಡುವಲ್ಲಿ ರಕ್ತನಿಧಿ ಕೇಂದ್ರದ ವೈದ್ಯೆ ಡಾ.ವೀಣಾ ಮತ್ತು ತಂಡವರು ಶ್ರಮಿಸಿದರು. ಇದರ ಪರಿಣಾಮ ಗರ್ಭೀಣಿಗೆ ಬಾಂಬೆ ಬ್ಲಡ್ ಬೇರೆ ಬೇರೆ ಜಿಲ್ಲೆಯಿಂದ ವ್ಯವಸ್ಥೆ ಮತ್ತು ಯಶಸ್ವಿಯಾಗಿ ವೈದ್ಯರ ತಂಡ ಆಪರೇಶನ್ ಮೂಲಕ ಮರು ಜೀವ ನೀಡಿದೆ.

ಆಪರೇಶನ್ ಮೊದಲು ಅಪರೂಪದ ಬಾಂಬೆ ಬ್ಲಡ್ ಗ್ರೂಫ್​ನ ರಕ್ತದ ಅವಶ್ಯಕತೆಯಿತ್ತು. ಈ ಶಸ್ತ್ರಚಿಕಿತ್ಸೆಗೆ ಅತಿ ವಿರಳ ಗುಂಪಿನ ರಕ್ತದಾನವನ್ನು ಮಾಡಿ ಜೀವ ಉಳಿಸಿದ ಮಾಯಕೊಂಡದ ಪ್ರವೀಣ್ ಜಿ, ಕೊಟ್ಟೂರಿನ ಸಿದ್ದೇಶ್, ಸಂಕಲ್ಪ ಫೌಂಡೇಶನ್, ಬೆಂಗಳೂರು ರಕ್ತನಿಧಿ ಕೇಂದ್ರ ಹಾಗೂ ಶಿವಮೊಗ್ಗ ಮೆಗ್ಗಾನ್ ರಕ್ತನಿಧಿ ಕೇಂದ್ರ ಇವರುಗಳಿಗೆ ಸಂಸ್ಥೆಗಳಿಂದ ಅಪರೂಪದ ರಕ್ತ ಸಂಗ್ರಹಣೆ ಮಾಡಿದ್ದರು. ಅತಿ ವಿರಳ ರಕ್ತದ ಗುಂಪಾದ ಬಾಂಬೆ ಬ್ಲಡ್ ಗ್ರೂಪ್ ಬಗ್ಗೆ ಅರಿವು ಮತ್ತು ಅದರ ದಾನಿಗಳನ್ನು ಪತ್ತೆ ಹಚ್ಚಲು ಎಲ್ಲಡೆ ಮನವಿ ಮಾಡಿದ್ದ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಮತ್ತು ಆಡಳಿತ ಮಂಡಳಿ. ಇವರ ಮನವಿಗೆ ಹೊರ ಜಿಲ್ಲೆಗಳ ದಾನಿಗಳು ಸ್ಪಂಧಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ:ಸೋಂಕಿತರ ಸಂಬಂಧಿಕರಿಗೆ ವಾರ್ಡ್​ ಒಳಗೆ ಪ್ರವೇಶಿಸುವುದಕ್ಕೆ ನಿರ್ಬಂಧ; ಮೆಗ್ಗಾನ್ ಜಿಲ್ಲಾಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ

ವಿಜಯನಗರ ಜಿಲ್ಲೆಯ ಕೊಟ್ಟೂರು, ದಾವಣಗೆರೆ ಜಿಲ್ಲೆಯ ಮಾಯಕೊಂಡದಿಂದ ಇಬ್ಬರು ರಕ್ತದಾನಿಗಳು ಹಾಗೂ ಸಂಕಲ್ಪ ಫೌಂಡೇಷನ್, ಬೆಂಗಳೂರು ಇವರ ಸಹಾಯದಿಂದ ಮತ್ತೊಂದು ಯುನಿಟ್‍ನ್ನು ಬೆಂಗಳೂರು ರಕ್ತನಿಧಿ ಕೇಂದ್ರದಿಂದ ಸಂಗ್ರಹಿಸಿ, ಪರೀಕ್ಷಿಸಿ ಗರ್ಭಿಣಿಗೆ ನೀಡಲಾಗಿತ್ತು. ಗರ್ಭಿಣಿಗೆ ತಕ್ಷಣ ಶಸ್ತ್ರಚಿಕಿತ್ಸೆ ಅವಶ್ಯಕತೆ, ಅದರ ಸಾಧಕ ಬಾಧಕಗಳ ಬಗ್ಗೆ ತಿಳಿಸಿ ಶಸ್ತ್ರಚಿಕಿತ್ಸೆಗೆ ಒಪ್ಪಿಸಿ ಅರವಳಿಕೆ ತಜ್ಞ ವೈದ್ಯರಾದ ಡಾ.ಶಿವಾನಂದ ಪಿ.ಟಿ ಮತ್ತು ತಂಡದವರಿಂದ ಸಹಾಯ ಪಡೆದು ಯಶಸ್ವಿ 3 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ್ದರು. ಹೊಟ್ಟೆಯೊಳಗೆ ಸಂಗ್ರಹವಾಗಿದ್ದ ಸುಮಾರು 2.5 ಲೀ.ನಷ್ಟು ರಕ್ತವನ್ನು ಹೊರತೆಗೆದು ಗರ್ಭಿಣಿಯನ್ನು ಮೃತ್ಯುಕೂಪದಿಂದ ವೈದ್ಯರು ಹೊರತಂದಿರುವ ಹೆಮ್ಮೆ ಮೆಗ್ಗಾನ್ ವೈದ್ಯರಿಗೆ ಸಲ್ಲುತ್ತದೆ. ಈ ಮೂಲಕ ದೊಡ್ಡ ಮತ್ತು ಹೈಟೆಕ್ ಆಸ್ಪತ್ರೆಗೆ ತಕ್ಕಂತೆ ವೈದ್ಯರು ಸಾಧನೆ ಮಾಡಿ ತೋರಿಸಿದ್ದಾರೆ. ಯಶಸ್ಸಿ ಚಿಕಿತ್ಸೆ ಜೊತೆಗೆ ಮಹಿಳೆ ಜೀವ ಉಳಿಸಲು ಅಪರೂಪದ ರಕ್ತ ಸಂಗ್ರಹ ಮಾಡುವ ಮೂಲಕ ವೈದ್ಯರು ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ